ಪ್ಯೋಗ್ಯಾಂಗ್: ಸರಣಿ ಕ್ಷಿಪಣಿ ಪರೀಕ್ಷೆಗಳ ಮೂಲಕ ವಿಶ್ವಸಂಸ್ಥೆಯ ಕೆಂಗಣ್ಣಿಗೆ ಗುರಿಯಾಗಿ ಇದೀಗ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ನಿರ್ಬಂಧನೆಗೆ ಗುರಿಯಾಗಿರುವ ಉತ್ತರ ಕೊರಿಯಾ ಇದೀಗ ವಿಶ್ವಸಂಸ್ಥೆಯ ನಡೆಯನ್ನು ಟೀಕಿಸಿದ್ದು, ಇದು ಯುದ್ಧದ ಕೃತ್ಯ ಎಂದು ಟೀಕಿಸಿದೆ.
ಉತ್ತರ ಕೊರಿಯಾ ವಿರುದ್ಧ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ನಿರ್ಭಂಧನೆಗಳನ್ನು ವಿಧಿಸಿದ ಬೆನ್ನಲ್ಲೇ ಹೇಳಿಕೆ ಬಿಡುಗಡೆ ಮಾಡಿರುವ ಉತ್ತರ ಕೊರಿಯಾ ಸರ್ಕಾರ, "ವಿಶ್ವಸಂಸ್ಥೆಯ ನೂತನ ನಿರ್ಬಂಧಗಳನ್ನು ನಾವು ಸಂಪೂರ್ಣವಾಗಿ ತಿರಸ್ಕರಿಸುತ್ತೇವೆ. ಇದು ನಮ್ಮ ಗಣರಾಜ್ಯದ ಸಾರ್ವಭೌಮತೆಯ ಉಲ್ಲಂಘನೆಯಾಗಿದ್ದು, ಕೊರಿಯ ಪರ್ಯಾಯ ದ್ವೀಪ ಹಾಗೂ ವಿಶಾಲ ಪ್ರಾಂತ್ಯದ ಶಾಂತಿ ಹಾಗೂ ಸ್ಥಿರತೆಯನ್ನು ನಾಶಪಡಿಸುವಂತಹ ಯುದ್ಧದ ಕೃತ್ಯವಾಗಿದೆ ಎಂದು ಹೇಳಿದೆ.
ಇದೇ ವೇಳೆ ವಿಶ್ವಸಂಸ್ಥೆಯ ನಿರ್ಣಯಕ್ಕೆ ಬೆಂಬಲ ನೀಡುವ ಮತ್ತು ಅದನ್ನು ಅನುಸರಿಸುವ ರಾಷ್ಟ್ರಗಳು ತಕ್ಕ ಬೆಲೆ ತೆರಬೇಕಾಗುತ್ತದೆ ಎಂದೂ ಉತ್ತರ ಕೊರಿಯಾ ಎಚ್ಚರಿಕೆ ನೀಡಿದೆ.
ತೀವ್ರ ಆರ್ಥಿಕ ಮುಗ್ಗಟ್ಟನ್ನು ಎದುರಿಸುತ್ತಿರುವ ಉತ್ತರ ಕೊರಿಯಾಕ್ಕೆ ತೈಲ ಪೂರೈಕೆಯನ್ನು ನಿರ್ಬಂಧಿಸುವ ವಿಶ್ವಸಂಸ್ಥೆಯ ಕರಡು ನಿರ್ಣಯವನ್ನು ಭದ್ರತಾ ಮಂಡಳಿಯು ಶನಿವಾರ ಅವಿರೋಧವಾಗಿ ಅಂಗೀಕರಿಸಿತ್ತು. ಇದಗರ ಬೆನ್ನಲ್ಲೇ ಉತ್ತರ ಕೊರಿಯಾ ಸರ್ಕಾರ ತನ್ನ ಮೊದಲ ಪ್ರತಿಕ್ರಿಯೆ ನೀಡಿದ್ದು, ವಿಶ್ವಸಂಸ್ಥೆಯ ನಿರ್ಣಯವನ್ನು ವಿರೋಧಿಸಿದೆ. ಇನ್ನು ಈ ಹಿಂದೆ ವಿಶ್ವಸಂಸ್ಥೆ ಕೈಗೊಂಡಿದ್ದ ನಿರ್ಣಯಕ್ಕೆ ಉತ್ತರ ಕೊರಿಯಾ ಆಪ್ತ ರಾಷ್ಟ್ರ ಚೀನಾ ಕೂಡ ಬೆಂಬಲ ಸೂಚಿಸಿತ್ತು.
ಇನ್ನು ವಿಶ್ವಸಂಸ್ಥೆಯ ನಿರ್ಭಂಧನೆಗಳಲ್ಲಿ ವಿದೇಶಗಳಲ್ಲಿ ಉದ್ಯೋಗದಲ್ಲಿರುವ ಉತ್ತರ ಕೊರಿಯದ ಪ್ರಜೆಗಳನ್ನು ಕೂಡಾ ಅವರ ತಾಯ್ನಾಡಿಗೆ ವಾಪಸ್ ಕಳುಹಿಸಲು ಈ ನಿರ್ಣಯವು ಅವಕಾಶ ನೀಡುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಇತ್ತೀಚೆಗಷ್ಟೇ ಅಮೆರಿಕದ ಪ್ರಮುಖ ನಗರಗಳ ಮೇಲೆ ದಾಳಿ ನಡೆಸಬಲ್ಲ ಸಾಮರ್ಥ್ಯವಿದೆಯೆಂದು ಹೇಳಲಾದ ದೀರ್ಘ ವ್ಯಾಪ್ತಿಯ ಖಂಡಾಂತರ ಕ್ಷಿಪಣಿಯನ್ನು ಉತ್ತರ ಕೊರಿಯಾ ಪರೀಕ್ಷಿಸಿತ್ತು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos