ವಿದೇಶ

ಹೊಗೆ ವಿಷಯ: ಕೇಜ್ರಿವಾಲ್ ಅಷ್ಟೇ ಅಲ್ಲ, ಅಮರಿಂದರ್ ಸಿಂಗ್ ಗೆ ಪಾಕ್ ಪಂಜಾಬ್ ಸರ್ಕಾರದಿಂದಲೂ ಟ್ವೀಟ್!

Srinivas Rao BV
ನವದೆಹಲಿ: ಪಂಜಾಬ್, ಹರ್ಯಾಣಗಳಲ್ಲಿ ಭತ್ತದ ಬೆಳೆಯ ತ್ಯಾಜ್ಯವನ್ನು ದಹನ ಮಾಡುತ್ತಿರುವುದರಿಂದ ದೆಹಲಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ದಟ್ಟ ಹೊಗೆ ಆವರಿಸಿದ್ದು ನಾವೇನು ಹೊರತಾಗಿಲ್ಲ ಎನ್ನುತ್ತಿದೆ ಪಾಕಿಸ್ತಾನದ ಪಂಜಾಬ್ ಸರ್ಕಾರ. ಇದಕ್ಕೆ ಪೂರಕವೆಂಬಂತೆ ಸಮಸ್ಯೆಯ ಕುರಿತು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಗೆ ಟ್ವೀಟ್ ಮಾಡಿದಂತೆಯೇ ಪಾಕಿಸ್ತಾನದ ಪಂಜಾಬ್ ಸರ್ಕಾರವೂ ಅಮರಿಂದರ್ ಸಿಂಗ್ ಗೆ ಟ್ವೀಟ್ ಮಾಡಿದೆ. 
ಹೊಗೆಯಿಂದ ಉಂಟಾಗುತ್ತಿರುವ ಸಮಸ್ಯೆಯನ್ನು ತಡೆಗಟ್ಟಲು ಕೆಲವು ಕ್ರಮಗಳನ್ನು ಪಾಕಿಸ್ತಾನದ ಪಂಜಾಬ್ ಸರ್ಕಾರ ಸೂಚಿಸಿದ್ದು, ಭತ್ತದ ಬೆಳೆಯ ತ್ಯಾಜ್ಯ ದಹನ ಮಾಡುವುದಕ್ಕೆ ನಿಷೇಧ ವಿಧಿಸಿದ್ದೇವೆ, ಇದೇ ಮಾದರಿಯಲ್ಲಿ ಅಮರಿಂದರ್ ಸಿಂಗ್ ಸಹ ನಿಷೇಧ ವಿಧಿಸಲಿ ಎಂದು ಸಲಹೆ ನೀಡಿದೆ. 
ಪಂಜಾಬ್ ನಲ್ಲಿ ಭತ್ತದ ಬೆಳೆಯ ತ್ಯಾಜ್ಯವನ್ನು ಸುಡುತ್ತಿರುವುದರಿಂದ ಉಂಟಾಗುತ್ತಿರುವ ಹೊಗೆ ದೆಹಲಿಯ ಮೇಲೂ ಪರಿಣಾಮ ಬೀರಿದ್ದು, ದಟ್ಟ ಮಂಜು ಆವರಿಸಿದೆ. ಈ ಹಿನ್ನೆಲೆಯಲ್ಲಿ ಅಮರಿಂದರ್ ಸಿಂಗ್ ಗೆ ಟ್ವೀಟ್ ಮಾಡಿದ್ದ ಅರವಿಂದ್ ಕೇಜ್ರಿವಾಲ್ ಹೊಗೆಯನ್ನು ತಡೆಗಟ್ಟುವುದಕ್ಕೆ ಸಂಬಂಧಿಸಿದಂತೆ ಚರ್ಚಿಸಲು ಹಲವು ದಿನಗಳಿಂದ ಸಮಯಾವಕಾಶ ಕೇಳುತ್ತಿದ್ದೇನೆ ಎಂದಿದ್ದರು. ಅಷ್ಟೇ ಅಲ್ಲದೇ ಪಂಜಾಬ್ ಸಿಎಂ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದರು. ಕೇಜ್ರಿವಾಲ್ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿದ್ದ ಅಮರಿಂದರ್ ಸಿಂಗ್, ಈ ವಿಷಯದಲ್ಲಿ ತಾವು ಅಸಹಾಯಕರಾಗಿದ್ದು, ಕೇಂದ್ರದಿಂದಲೇ ಪರಿಹಾರ ಸಿಗಬೇಕಿದೆ ಎಂದಿದ್ದರು. 
SCROLL FOR NEXT