ಢಾಕಾ(ಬಾಂಗ್ಲಾದೇಶ): ಮೊಹಮ್ಮದ್ ಪೈಗಂಬರ್ ಬಗ್ಗೆ ಫೇಸ್ಬುಕ್ನಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ್ದಾರೆಂಬ ಸುದ್ದಿಗೆ ರೊಚ್ಚಿಗೆದ್ದ ಜನರು 30ಕ್ಕೂ ಹೆಚ್ಚು ಹಿಂದೂಗಳ ಮನೆಗಳನ್ನು ಸುಟ್ಟು ಲೂಟಿ ಮಾಡಿರುವ ಘಟನೆ ವರದಿಯಾಗಿದೆ.
ಬಾಂಗ್ಲಾದೇಶದ ರಾಜಧಾನಿಯಿಂದ 300 ಕಿ.ಮೀ ದೂರದಲ್ಲಿರುವ ರಂಗಪುರ್ ಜಿಲ್ಲೆಯ ಠಾಕೂರ್ ಬರಿ ಗ್ರಾಮದಲ್ಲಿ ಉದ್ರಿಕ್ತ ಜನರು ಹಿಂದೂಗಳ ಮನೆಗಳಿಗೆ ಬೆಂಕಿ ಹಚ್ಚಿದ್ದು ಉದ್ರಿಕ್ತರನ್ನು ನಿಯಂತ್ರಿಸಲು ಪೊಲೀಸರು ಗೋಲಿಬಾರ್ ನಡೆಸಿದ್ದು ಅದರಲ್ಲಿ ಒರ್ವ ಸಾವನ್ನಪ್ಪಿದ್ದು 10 ಮಂದಿಗೆ ಗಾಯಗಳಾಗಿವೆ.
ಠಾಕೂರ್ ಬಾರಿ ಗ್ರಾಮದ ನಿವಾಸಿ ಟೀಟು ರಾಯ್ ಎಂಬಾತ ತನ್ನ ಫೇಸ್ಬುಕ್ನಲ್ಲಿ ಪೈಂಗಬರ್ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿದನೆಂಬ ಸುದ್ದಿ ದಟ್ಟವಾಗಿ ಹಬ್ಬಿದೆ. ಜುಮ್ಮಾ ಮಸೀದಿಯಲ್ಲಿ ಪ್ರಾರ್ಥನೆ ಮುಗಿಸಿದ ಬಳಿಕ ಆರೇಳು ಗ್ರಾಮದ ಸುಮಾರು 20 ಸಾವಿರದಷ್ಟು ಜನರು ಒಂದುಗೂಡಿ ಠಾರೂಕ್ ಬರಿ ಗ್ರಾಮಕ್ಕೆ ನುಗ್ಗಿದ್ದಾರೆ.
ಉದ್ರಿಕ್ತರನ್ನು ಕಂಡು ಹೆದರಿದ ನಿವಾಸಿಗಳು ಅಲ್ಲಿಂದ ಓಡಿಹೋಗಿದ್ದಾರೆ. ನಂತರ ಉದ್ರಿಕ್ತರು ಹಿಂದುಗಳ ಮನೆಗಳಿಗೆ ನುಗ್ಗಿ ಲೂಟಿ ಮಾಡಿ ಬೆಂಕಿ ಹಾಕಿ ಸುಟ್ಟಿದ್ದಾರೆ. ಇದರಿಂದಾಗಿ 30ಕ್ಕೂ ಹೆಚ್ಚು ಮನೆಗಳು ಭಸ್ಮವಾಗಿವೆ. ಮನೆಮಠ ಕಳೆದುಕೊಂಡ ಹಿಂದೂಗಳಿಗೆ ಪರಿಹಾರ ಮತ್ತು ಪುನರ್ವಸತಿ ಕಲ್ಪಿಸುವ ಭರವಸೆಯನ್ನು ಅಧಿಕಾರಿಗಳು ನೀಡಿದ್ದಾರೆ.