ವಿದೇಶ

ಮಲೇಷ್ಯಾದಲ್ಲಿ ಭೀಕರ ಅಗ್ನಿ ದುರಂತ; 25 ಮಂದಿ ಸಾವು, ಸಾವನ್ನಪ್ಪಿದವರು ಬಹುತೇಕ ವಿದ್ಯಾರ್ಥಿಗಳು

Srinivasamurthy VN
ಕೌಲಾಲಂಪುರ: ಮಲೇಷ್ಯಾದ ಕೌಲಾಲಂಪುರದಲ್ಲಿರುವ ಶಾಲೆಯಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, ಅವಘಡದಲ್ಲಿ ಕನಿಷ್ಠ 25 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಕೌಲಾಲಂಪುರದಲ್ಲಿರುವ ತಾಹಿದ್ದ್ ದರುಲ್ ಖುರಾನ್ ಇಟ್ಟಿಫಾಖಿಯಾ ಶಾಲೆಯಲ್ಲಿ ಇಂದು ಬೆಳಗ್ಗೆ ಈ ದುರಂತ ಸಂಭವಿಸಿದ್ದುಸ ಘಟನೆಯಲ್ಲಿ ಸಾವನ್ನಪ್ಪಿದವರ ಪೈಕಿ ಬಹುತೇಕರು ವಿದ್ಯಾರ್ಥಿಗಳು ಎಂದು ತಿಳಿದುಬಂದಿದೆ. ವಿಚಾರ  ತಿಳಿದ ಕೂಡಲೇ ಐದಕ್ಕೂ ಅಧಿಕ ಅಗ್ನಿಶಾಮಕ ವಾಹನಗಳು ದೌಡಾಯಿಸಿ ಬೆಂಕಿ ನಂದಿಸಿವೆಯಾದರೂ, ಅಷ್ಟರೊಳಗಾಗಲೇ ದುರಂತ ಘಟಿಸಿಹೋಗಿತ್ತು ಎಂದು ಪ್ರತ್ಯಕ್ಷ ದರ್ಶಿಗಳು ಹೇಳಿದ್ದಾರೆ.

ಇನ್ನು ಘಟನಾ ಸ್ಥಳದಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಅಗ್ನಿಶಾಮಕ ಅಧಿಕಾರಿ ಖಿರುದಿನ್ ಡ್ರಾಹ್ಮನ್ ಅವರು, ಘಟನೆಯಲ್ಲಿ ಎಷ್ಟು ಮಂದಿ ಸಾವನ್ನಪ್ಪಿದ್ದಾರೆ ಎಂದು ಖಚಿತವಾಗಿ ಹೇಳಲು ಸಾಧ್ಯವಾಗುತ್ತಿಲ್ಲ. ಆದರೆ ಕನಿಷ್ಠ 25 ಮಂದಿ  ಸಾವಿಗೀಡಾಗಿರಬಹುದು ಎಂದು ಅಂದಾಜಿಸಲಾಗಿದೆ. ಪ್ರಸ್ತುತ 23 ಮಕ್ಕಳು ಹಾಗೂ ಇಬ್ಬರು ಸಿಬ್ಬಂದಿಗಳನ್ನು ಹೊರಗೆ ತೆಗೆಯಲಾಗಿದೆ ಎಂದು ಅವರು ಹೇಳಿದ್ದಾರೆ. ಅಂತೆಯೇ ಅಗ್ನಿ ದುರಂತಕ್ಕೆ ನಿಥಕ ಕಾರಣ  ತಿಳಿದುಬಂದಿಲ್ಲವಾದರೂ, ತನಿಖೆ ಆರಂಭಿಸಲಾಗುತ್ತದೆ ಎಂದು ಅವರು ತಿಳಿಸಿದರು.

ಮಲೇಷ್ಯಾ ಇತಿಹಾಸದಲ್ಲಿಯೇ ಪ್ರಸ್ತುತ ಸಂಭವಿಸಿರುವ ಅಗ್ನಿ ದುರಂತ ಅತ್ಯಂತ ಭೀಕರ ಅಗ್ನಿ ದುರಂತವಾಗಿದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಕಳೆದ ಆಗಸ್ಟ್ ತಿಂಗಳಿನಲ್ಲಿ ಕೆದಾದಲ್ಲೂ ಇಂತಹುದೇ ಅಗ್ನಿ ದುರಂತ  ಸಂಭವಿಸಿ 16 ಮಂದಿ ಸಾವಿಗೀಡಾಗಿದ್ದರು ಎಂದು ಸ್ಥಳೀಯ ದೈನಿಕವೊಂದು ವರದಿ ಮಾಡಿದೆ.
SCROLL FOR NEXT