ವೂಹಾನ್: ಜಾಗತಿಕ ಸಮಸ್ಯೆಯಾಗಿ ಕಾಡುತ್ತಿರುವ ಭಯೋತ್ಪಾದನೆ ವಿರುದ್ಧ ಹೋರಾಡಲು ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರು ಒಪ್ಪಿಗೆ ನೀಡಿದ್ದಾರೆಂದು ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆಯವರು ಶನಿವಾರ ಹೇಳಿದ್ದಾರೆ.
2 ದಿನಗಳ ಕಾಲ ಚೀನಾಗೆ ಭೇಟಿ ನೀಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಪ್ರವಾಸ ಇನ್ನು ಕೆಲವೇ ಗಂಟೆಗಳಲ್ಲಿ ಅಂತ್ಯಗೊಳ್ಳಲಿದ್ದು, ಈ ಹಿನ್ನಲೆಯಲ್ಲಿ ಮಾಧ್ಯಮಗಳೊಂದಿಗೆ ಭೇಟಿ ಕುರಿತು ಗೋಖಲೆಯವರು ಮಾಹಿತಿ ನೀಡಿದ್ದಾರೆ.
ಮಾತುಕತೆ ವೇಳೆ ಪ್ರಧಾನಿ ಮೋದಿ ಹಾಗೂ ಅಧ್ಯಕ್ಷ ಕ್ಲಿ ಜಿನ್ ಪಿಂಗ್ ಅವರು ಜಾಗತಿಕ ಸಮಸ್ಯೆಯಾಗಿರುವ ಭಯೋತ್ಪಾದನೆ ಯಾವುದೇ ರೀತಿಯಲ್ಲಿಯೇ ಇದ್ದರೂ ಅದರ ವಿರುದ್ಧ ಹೋರಾಟ ಮಾಡಲು ನಿರ್ಧರಿಸಿದ್ದಾರೆಂದು ಹೇಳಿದ್ದಾರೆ.
ಬಳಿಕ ಭಾರತ ಮತ್ತು ಚೀನಾ ಗಡಿ ಸಮಸ್ಯೆ ಕುರಿತು ಮಾತನಾಡಿರುವ ಅವರು, ಉಭಯ ಸೇನೆಗಳ ನಡುವೆ ನಂಬಿಕೆ ಹಾಗೂ ಅರ್ಥ ಮಾಡಿಕೊಳ್ಳುವುದನ್ನು ಹೆಚ್ಚಿಸುವ ಸಲುವಾಗಿ ಮೋದಿ ಹಾಗೂ ಕ್ಸಿ ಉಭಯ ನಾಯಕರು ಸೇನೆಗಳ ಸಂವಹನ ಗಟ್ಟಿಗೊಳಿಸಲು ಕಾರ್ಯತಂತ್ರ ಮಾರ್ಗದರ್ಶನಗಳನ್ನು ನೀಡಲಿದ್ದಾರೆ. ಗಡಿಯಲ್ಲಿ ಶಾಂತಿ ಕಾಪಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದ್ದಾರೆಂತು ತಿಳಿಸಿದ್ದಾರೆ.
ಇದು ಇಬ್ಬರು ನಾಯಕರು ಏಕಾಂತ ಮಾತುಕತೆ ನಡೆಸುವ ಅನೌಪಚಾರಿಕ ಶೃಂಗವಾಗಿದ್ದು, ಯಾವುದೇ ಒಪ್ಪಂದಗಳಿಗೆ ಸಹಿ ಹಾಕುವುದಿಲ್ಲ.