ಲಂಡನ್: ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಸಾವನ್ನು ಖಚಿತ ಪಡಿಸಿಕೊಳ್ಳಲು ಅಂದಿನ ಬ್ರಿಟೀಷ್ ಸರ್ಕಾರ ಬರೊಬ್ಬರಿ ಮೂರು ಬಾರಿ ತನಿಖೆ ನಡೆಸಿತ್ತು ಎಂದು ಹೇಳಲಾಗಿದೆ.
ಲಂಡನ್ ಮೂಲದ ಖ್ಯಾತ ಇತಿಹಾಸ ತಜ್ಞ ಹಾಗೂ ಹಿರಿಯ ಪತ್ರಕರ್ತ ಆಶೀಶ್ ರಾಯ್ ಅವರು ತಮ್ಮ ನೂತನ ಪುಸ್ತಕ "ಲೈಡ್ ಟೂ ರೆಸ್ಟ್: ಕಾಂಟ್ರವರ್ಸಿ ಓವರ್ ಸುಭಾಶ್ ಚಂದ್ರ ಬೋಸ್ ಡೆತ್" ನಲ್ಲಿ ಈ ಬಗ್ಗೆ ಉಲ್ಲೇಖ ಮಾಡಿದ್ದು. "ಸುಭಾಶ್ ಚಂದ್ರ ಬೋಸ್ ಅವರನ್ನು ಭಾರತದ ಸ್ವಾತಂತ್ರ್ಯಕ್ಕೆ ಮುನ್ನ ಕಡುವೈರಿ ಎಂದು ಪರಿಗಣಿಸಿದ್ದ ಬ್ರಿಟಿಷ್ ಸರ್ಕಾರ, ವಿಮಾನ ಅಪಘಾತದಲ್ಲಿ ಅವರು ಮೃತಪಟ್ಟಿದ್ದಾರೆ ಎಂಬ ವರದಿಯ ಬಗ್ಗೆ ಮೂರು ಬಾರಿ ಸಮಗ್ರ ತನಿಖೆ ಕೈಗೊಂಡು ಅವರ ಸಾವನ್ನು ದೃಢಪಡಿಸಿತ್ತು ಎಂಬ ಅಂಶವನ್ನು ಬರೆದಿದ್ದಾರೆ.
ತೈಪೆಯಲ್ಲಿ 1945ರ ಆಗಸ್ಟ್ 18ರಂದು ಈ ಅಪಘಾತ ನಡೆದಿತ್ತು ಮತ್ತು ಅದರಲ್ಲಿ ನೇತಾಜಿ ಮೃತಪಟ್ಟಿದ್ದರು ಎನ್ನುವುದಕ್ಕೆ ಸಾಕಷ್ಟು ಪುರಾವೆ ಇದೆ ಎಂದು ಲಂಡನ್ ಪತ್ರಕರ್ತ ಆಶೀಶ್ ರಾಯ್ ಅವರ "ಲೈಡ್ ಟೂ ರೆಸ್ಟ್: ಕಾಂಟ್ರವರ್ಸಿ ಓವರ್ ಸುಭಾಶ್ ಚಂದ್ರ ಬೋಸ್ಸ್ ಡೆತ್" ಎಂಬ ಕೃತಿಯಲ್ಲಿ ಪ್ರತಿಪಾದಿಸಿದ್ದಾರೆ. ಇದಕ್ಕೆ ಹಲವು ಪುರಾವೆಗಳನ್ನು ಅವರು ಒದಗಿಸಿದ್ದು, ಕೆಲ ಪ್ರಮುಖ ದಾಖಲೆಗಳೂ ಇದರಲ್ಲಿ ಸೇರಿವೆ ಎನ್ನಲಾಗಿದೆ.
ಬ್ರಿಟನ್ ಸರ್ಕಾರ 1945ರಲ್ಲಿ ಪೊಲೀಸ್ ಅಧೀಕ್ಷಕ ಟಿ.ಎಸ್.ಫಿನ್ನೆ ನೇತೃತ್ವದಲ್ಲಿ ತನಿಖೆ ನಡೆಸಿತ್ತು. ಅವರ ತಂಡ ಬ್ಯಾಂಕಾಕ್ ಮತ್ತು ತೈಪೆಗೆ ಭೇಟಿ ನೀಡಿ ಅಕ್ಟೋಬರ್ 5,7,10 ಮತ್ತು 12ರಂದು ನಾಲ್ಕು ವರದಿಗಳನ್ನು ಸಲ್ಲಿಸಿ, ವಿಮಾನ ದುರಂತದಲ್ಲಿ ಬೋಸ್ ಮೃತಪಟ್ಟಿರುವುದು ಖಚಿತ ಎಂದು ಸ್ಪಷ್ಟಪಡಿಸಿತ್ತು. 1945ರ ಡಿಸೆಂಬರ್ 31ರಂದು ಕರ್ನಲ್ ಹಬೀಬುರ್ರಹ್ಮಾನ್ ಅವರನ್ನು ಸಂದರ್ಶಿಸಿ ತನಿಖಾ ವರದಿ ಸಲ್ಲಿಸಲಾಗಿತ್ತು. ರೆಹಮಾನ್ ಅವರು ವಿಮಾನ ದುರಂತದಲ್ಲಿ ಬದುಕಿ ಉಳಿದಿದ್ದು, ಟೋಕಿಯೊ ಕಾಲಮಾನದ ಪ್ರಕಾರ ರಾತ್ರಿ 9 ಗಂಟೆಗೆ ಬೋಸ್ ಮಡಿಯುವವರೆಗೂ ರೆಹಮಾನ್ ಅವರ ಜತೆಗಿದ್ದರು ಎಂದು ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.
ಅಂತಿಮವಾಗಿ 1946ರ ಜುಲೈ 25ರಂದು ವರದಿ ಸಲ್ಲಿಸಿದ್ದ ಲೆಫ್ಟಿನೆಂಟ್ ಕರ್ನಲ್ ಜಾನ್ ಫಿಗ್ಗೆಸ್ ಕೂಡಾ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಬೋಸ್ ಅವರು ತೈಪೆ ಮಿಲಿಟರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದನ್ನು ಅವರು ಖಚಿತ ಪಡಿಸಿದ್ದಾರೆ ಎಂದು ಕೃತಿ ಹೇಳಿದೆ.
ಇನ್ನು ಆಶೀಶ್ ರಾಯ್ ಅವರ ಈ ಪುಸ್ತಕ ಫೆಬ್ರವರಿ 12ರಂದು ದೆಹಲಿಯಲ್ಲಿ ಬಿಡುಗಡೆ ಮಾಡಲು ಉದ್ದೇಶಿಸಲಾಗಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos