ಇಸ್ಲಾಮಾಬಾದ್: ಸಾಮರ್ಥ್ಯ ಪ್ರದರ್ಶನಕ್ಕೆ ಆಹ್ವಾನ ಬೇಡ ಎಂದು ಹೇಳುವ ಮೂಲಕ ಪಾಕಿಸ್ತಾನ ಮತ್ತೆ ಭಾರತಕ್ಕೆ ಅಣ್ವಸ್ತ್ರ ದಾಳಿಯ ಕುರಿತು ಎಚ್ಚರಿಕೆ ನೀಡಿದೆ.
ಶುಕ್ರವಾರ ಭಾರತದ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರು ನೀಡಿದ್ದ ಹೇಳಿಕೆಯನ್ನು ಹಿನ್ನಲೆಯಾಗಿಟ್ಟುಕೊಂಡು ಮಾತಾನಾಡಿದ ಪಾಕಿಸ್ತಾನ ವಿದೇಶಾಂಗ ಸಚಿವ ಖ್ವಾಜಾ ಮಹಮದ್ ಆಸಿಫ್ ಅವರು, ನಮ್ಮ ಸಾಮರ್ಥ್ಯ ಪ್ರದರ್ಶನಕ್ಕೆ ಆಹ್ವಾನ ಬೇಡ ಎಂದು ಎಚ್ಚರಿಕೆ ನೀಡಿದ್ದಾರೆ. ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರು, ಭಾರತ ಸರ್ಕಾರ ಒಪ್ಪಿದರೆ ಅಣ್ವಸ್ತ್ರ ದಾಳಿ ಸಹಿತ ಪಾಕಿಸ್ತಾನದ ಯಾವುದೇ ರೀತಿಯ ಬೆದರಿಕೆಗಳನ್ನು ಹಿಮ್ಮೆಟ್ಟಿಸಲು ನಾವು ಸಿದ್ಧ ಎಂದು ಹೇಳಿದ್ದರು.
ಇದಕ್ಕೆ ನಿನ್ನೆ ಟ್ವಿಟರ್ ನಲ್ಲಿ ಉತ್ತರ ನೀಡಿರುವ ಪಾಕ್ ವಿದೇಶಾಂಗ ಸಚಿವ ಖ್ವಾಜಾ ಆಸಿಫ್ ಅವರು, ಭಾರತೀಯ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಪಾಕಿಸ್ತಾನದ ವಿರುದ್ಧ ಪ್ರಚೋದನಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಪಾಕಿಸ್ತಾನವನ್ನು ಕೆಣಕಿದರೆ ಅಣ್ವಸ್ತ್ರದ ಮೂಲಕ ಅವರಿಗೆ (ಭಾರತಕ್ಕೆ) ತಕ್ಕ ಶಾಸ್ತಿ ಮಾಡಲಾಗುತ್ತದೆ. ಭಾರತದ ಪ್ರಚೋದನೆಯನ್ನು ಪಾಕಿಸ್ತಾನ ಗಂಭೀರವಾಗಿ ಪರಿಗಣಿಸುತ್ತದೆ. ಒಂದು ವೇಳೆ ಭಾರತ ಪಾಕಿಸ್ತಾನದ ಸಾಮರ್ಥ್ಯ ಅರಿಯಲು ಮುಂದಾದರೆ ಅಣ್ವಸ್ತ್ರದ ಮೂಲಕ ನಮ್ಮ ಸಾಮರ್ಥ್ಯದ ಪರಿಚಯ ಮಾಡಿಕೊಡಬೇಕಾಗುತ್ತದೆ ಎಂದು ಹೇಳಿದ್ದಾರೆ.