ಅಬುದಾಬಿ: ಕೇರಳದಲ್ಲಿ ಮರಣ ಮೃದಂಗ ಬಾರಿಸುತ್ತಿರುವ ನಿಪಾಹ್ ವೈರಾಣುವಿಗೆ 13 ಮಂದಿ ಬಲಿಯಾದ ಬೆನ್ನಲ್ಲೇ ಅತ್ತ ಯುಎಇ ಸರ್ಕಾರ ಕೇರಳದಿಂದ ಹಣ್ಣು ಮತ್ತು ತರಕಾರಿಗಳ ಆಮದಿನ ಮೇಲೆ ನಿಷೇಧ ಹೇರಿದೆ.
ಯುಎಇಯ ಹವಾಮಾನ ಬದಲಾವಣೆ ಮತ್ತು ಪರಿಸರ ಸಚಿವಾಲ ಇಂದು ತನ್ನ ಆದೇಶ ಹೊರಡಿಸಿದ್ದು, ಕೇರಳದಿಂದ ಯಾವುದೇ ರೀತಿಯ ಹಣ್ಣು ಮತ್ತು ತರಕಾರಿಗಳನ್ನು ಆಮದು ಮಾಡಿಕೊಳ್ಳದಂತೆ ನಿಷೇಧ ಹೇರಿದೆ ಎಂದು ದಿ ನ್ಯಾಷನಲ್ ಪತ್ರಿಕೆ ವರದಿ ಮಾಡಿದೆ. ಅಲ್ಲದೆ ಯುಎಇ ಆರೋಗ್ಯ ಇಲಾಖೆ ಕೂಡ ತನ್ನ ನಾಗರಿಕರಿಗೆ ಕೇರಳಕ್ಕೆ ಪ್ರಯಾಣ ಮಾಡದಂತೆ ಸೂಚನೆ ನೀಡಿದೆ.
ಅನಿವಾರ್ಯ ಕಾರಣಗಳ ಹೊರತಾಗಿ ಕೇರಳಕ್ಕೆ ಪ್ರಯಾಣ ಮಾಡದಂತೆ ಯುಎಇ ಸರ್ಕಾರ ತನ್ನ ನಾಗರಿಕರಿಗೆ ಮನವಿ ಮಾಡಿದ್ದು, ಕೇರಳದಲ್ಲಿರುವ ತನ್ನ ನಾಗರಿಕರು ಸೋಂಕಿಗೆ ತುತ್ತಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು ಎಂದು ಹೇಳಿದೆ.
ಅಂತೆಯೇ ಯುಎಇಯಲ್ಲಿಯೂ ಅಲ್ಲಿನ ಸರ್ಕಾರ ನಾಗರಿಕರಿಗೆ ಕೆಲ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಿದೆ.
1. ಹಣ್ಣುಗಳು ಮಾಗಿವೆಯೇ, ತಾಜಾ ಹಣ್ಣುಗಳೇ ಮತ್ತು ಶುಷ್ಕವಾಗದ, ತೇವ, ಬಣ್ಣ-ಬದಲಾವಣೆಯಾದ ಹಣ್ಣುಗಳಾಗಿದ್ದರೆ ಬಳಕೆ ಬೇಡ.
2. ಹಣ್ಣನ್ನು ತಿನ್ನುವ ಮೊದಲು, ಕೀಟ ಸೋಂಕುಗಳು, ಕೊಳಕು ಅಥವಾ ಕಚ್ಚಿದ ಅಥವಾ ಇತರೆ ಅವುಗಳ ಮೇಲೆ ಕಾಣುವ ದೋಷಗಳು ಇಲ್ಲವೆಂದು ಖಚಿತಪಡಿಸಿಕೊಳ್ಳಿ.
3. ಯಾವುದೇ ವಿಚಿತ್ರ ವಾಸನೆ ಅಥವಾ ವಿಚಿತ್ರ ರುಚಿಯಿಂದ ಹಣ್ಣುಗಳು ಮುಕ್ತವಾಗಿವೆಯೇ ಎಂದು ಖಚಿತಪಡಿಸಿಕೊಳ್ಳಿ
4. ಪ್ಯಾಕೇಜ್ ಯಾವುದೇ ಹಾನಿಗೊಳಗಾದ ಹಣ್ಣನ್ನು ಒಳಗೊಂಡಿರಬಾರದು ಮತ್ತು ಅವುಗಳನ್ನು ತಿನ್ನುವ ಮೊದಲು ತಾಜಾ ತರಕಾರಿಗಳು ಮತ್ತು ಹಣ್ಣುಗಳನ್ನು ತೊಳೆಯಿರಿ
5. ಹಣ್ಣಿನ ಅಥವಾ ತರಕಾರಿಗಳ ಮೂಲವನ್ನು ದೃಢೀಕರಿಸದ ಹೊರತು ಅವುಗಳನ್ನು ಬಳಸಬೇಡಿ ಎಂದು ಯುಎಇ ಸರ್ಕಾರ ಸಲಹೆ ನೀಡಿದೆ.
ಈ ಬಗ್ಗೆ ಮಾತನಾಡಿರುವ ಯುಎಇ ಆರೋಗ್ಯ ಕಾರ್ಯದರ್ಶಿಗಳು, ಕೇರಳದಿಂದ ಸಾಕಷ್ಟು ಹಣ್ಣುಗಳು ಮತ್ತು ತರಕಾರಿಗಳು ದೇಶಕ್ಕೆ ಬರುತ್ತಿತ್ತು. ವೈರಾಣು ಸೋಂಕು ಭೀತಿ ಹಿನ್ನಲೆಯಲ್ಲಿ ತಾತ್ಕಾಲಿಕವಾಗಿ ಕೇರಳದ ಹಣ್ಣು ಮತ್ತು ತರಕಾರಿ ಆಮದಿಗೆ ನಿಷೇಧ ಹೇರಿದ್ದೇವೆ. ಅಂತೆಯೇ ಪರ್ಯಾಯ ಮಾರ್ಗಗಳನ್ನು ಹುಡುಕಿಕೊಂಡಿದ್ದೇವೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos