ಕೊಲಂಬೊ: ಶ್ರೀಲಂಕಾ ಸಂಸತ್ತಿನಲ್ಲಿ ಎರಡನೇ ದಿನವಾದ ಶುಕ್ರವಾರ ಸಹ ಗದ್ದಲ, ಕೋಲಾಹಲ ತೀವ್ರವಾಗಿದ್ದು, ಸಂಸದರು ಖಾರದ ಪುಡಿ ಹಾಗೂ ಕುರ್ಚಿಗಳನ್ನು ಎಸೆದ ಘಟನೆ ನಡೆದಿದೆ.
ಕಳೆದ ಬುಧವಾರ ವಿಶ್ವಾಸಮತ ಸಾಬೀತುಪಡಿಸಲು ವಿಫಲವಾದ ಮಹಿಂದಾ ರಾಜಪಕ್ಸೆ ಬೆಂಬಲಿಗ ಹಲವು ಸಂಸದರು ಪೊಲೀಸ್ ಅಧಿಕಾರಿಗಳತ್ತಲೂ ಕುರ್ಚಿ ಎಸೆದಿದ್ದು, ವಿಪಕ್ಷ ಸದಸ್ಯರತ್ತ ಖಾರದ ಪುಡಿಯನ್ನು ಎರಚುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಸ್ಪೀಕರ್ ಕರು ಜಯಸೂರ್ಯ ಅವರನ್ನು ಪೊಲೀಸ್ ಭದ್ರತೆಯಲ್ಲಿ ಅವರ ಕೊಠಡಿಗೆ ಕರೆದೊಯ್ಯಲಾಗಿದೆ.
ಇನ್ನು ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಶ್ರೀಲಂಕಾ ಸಂಸದ ವಿಜೀತಾ ಹೆರಾತ್, ಸಂವಿಧಾನದ ಪ್ರತಿಯ ಮೂಲಕವೂ ಸಿರಿಸೇನಾ - ರಾಜಪಕ್ಸೆ ಬೆಂಬಲಿಗರು ನನ್ನ ಮೇಲೆ ಹಲ್ಲೆ ಮಾಡಿದರು. ನೀರಿಗೆ ಖಾರದ ಪುಡಿ ಹಾಕಿ ವಿಪಕ್ಷ ಸಂಸದರ ಮೇಲೆ ದಾಳಿ ಮಾಡಿದರು ಎಂದು ಆರೋಪಿಸಿದ್ದಾರೆ.
ಶ್ರೀಲಂಕಾ ಅಕ್ಟೋಬರ್ 26ರಿಂದ ರಾಜಕೀಯ ಬಿಟ್ಟಕ್ಕು ಎದುರಿಸುತ್ತಿದ್ದು, ಅಧ್ಯಕ್ಷ ಮೈತ್ರಿ ಪಾಲ್ ಸಿರಿಸೇನಾ ಅವರು ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಅವರನ್ನು ಪದಚ್ಯುತಗೊಳಿಸಿ, ರಾಜಪಕ್ಸೆ ಅವರನ್ನು ನೂತನ ಪ್ರಧಾನಿಯಾಗಿ ನೇಮಕ ಮಾಡಿದ್ದರು. ಆದರೆ ರಾಜಪಕ್ಸೆ ಅವರು ಬುಧವಾರ ಸಂಸತ್ತಿನಲ್ಲಿ ಬಹುಮತ ಸಾಬೀತುಪಡಿಸುವಲ್ಲಿ ವಿಫಲವಾಗಿದ್ದಾರೆ.