ವಿದೇಶ

ಶ್ರೀಲಂಕಾ ರಾಜಕೀಯ ಬಿಕ್ಕಟ್ಟು : ರಣತುಂಗಾ ಅಂಗರಕ್ಷಕರಿಂದ ಗುಂಡಿನ ದಾಳಿ, ಓರ್ವ ಸಾವು, ಇಬ್ಬರಿಗೆ ಗಾಯ !

Nagaraja AB

ಕೊಲಂಬೊ:ರಾನಿಲ್ ವಿಕ್ರಮಸಿಂಘೆ ಆಪ್ತ, ಪೆಟ್ರೋಲಿಯಂ ಖಾತೆ  ಸಚಿವ ಅರ್ಜುನ್ ರಣತುಂಗಾ ಅವರ ಅಂಗರಕ್ಷಕರು  ಮಹಿಂದ ರಾಜಪಕ್ಸ ಬೆಂಬಲಿಗರ ಮೇಲೆ ನಡೆಸಿದ ಗುಂಡಿನ ದಾಳಿಯಿಂದ   ಓರ್ವ ಮೃತಪಟ್ಟಿದ್ದು,ಶ್ರೀಲಂಕಾದ ರಾಜಕೀಯ ಬಿಕ್ಕಟ್ಟು ತೀವ್ರ ಸ್ವರೂಪ ಪಡೆದುಕೊಂಡಿದೆ.

ಡೆಮಾಟಗೋಡಾದ ಸಿಲೋನ್ ಪೆಟ್ರೋಲಿಯಂ ಕಾರ್ಪೋರೇಷನ್ ಆವರಣದಲ್ಲಿ ಈ ಘಟನೆ ನಡೆದಿದ್ದು, ಗುಂಡಿನ ದಾಳಿಯಿಂದ ಗಾಯಗೊಂಡಿರುವ ಮತ್ತಿಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ನಂತರ ಗುಂಡಿನ ದಾಳಿ ನಡೆಸಿದ ಭದ್ರತಾ ಸಿಬ್ಬಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಾಜಿ ಕ್ರಿಕೆಟಿಗ ಹಾಗೂ  ರಾಜಕಾರಣಿ ಅರ್ಜುನ್ ರಣತುಂಗಾ ಸಿಲೋನ್ ಪೆಟ್ರೋಲಿಯಂ ಕಾರ್ಪೋರೇಷನ್ ಆವರಣಕ್ಕೆ ಆಗಮಿಸಿದ್ದಾಗ ಈ ಘಟನೆ ನಡೆದಿದೆ. ರಣತುಂಗಾ ಕಚೇರಿಗೆ ಆಗಮಿಸುತ್ತಿದ್ದಂತೆ   ಹಲವು  ಕಾರ್ಮಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಗ ರಣತುಂಗಾ ಭದ್ರತಾ ಸಿಬ್ಬಂದಿಗಳಿಂದ ಗುಂಡಿನ ದಾಳಿ ನಡೆದಿದ್ದು, ಅವರನ್ನು ಬಂಧಿಸಲಾಗಿದೆ ಎಂಬುದು  ತಿಳಿದುಬಂದಿದೆ. ಆದರೆ, ಇದು ಧೃಡಪಟ್ಟಿಲ್ಲ

ವಿಕ್ರಮ ಸಿಂಘೆ ಬೆಂಬಲಿಗರಾಗಿರುವ ರಣತುಂಗಾ ಅವರನ್ನು ಸಿರಿಸೇನಾ ವಜಾಗೊಳಿಸಿದ್ದಾರೆ. ಶುಕ್ರವಾರ ನಡೆದ ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ಅಧ್ಯಕ್ಷ ಸಿರಿಸೇನಾ ಅವರು ಪ್ರಧಾನಿ ರಾನಿಲ್ ವಿಕ್ರಮ ಸಿಂಘೆ ಅವರನ್ನು ವಜಾಗೊಳಿಸಿದ್ದು, ಮಹಿಂದ ರಾಜಪಕ್ಸೆ ಅವರನ್ನು ನೂತನ ಪ್ರಧಾನಿಯಾಗಿ ನೇಮಿಸಿದ್ದಾರೆ. ಇದರಿಂದಾಗಿ ಶ್ರೀಲಂಕಾದಲ್ಲಿ ರಾಜಕೀಯ ಬಿಕ್ಕಟ್ಟು ಎದುರಾಗಿದೆ.

SCROLL FOR NEXT