ವಿದೇಶ

ಕಾಶ್ಮೀರ ವರದಿಯನ್ನು ಭಾರತ ಅರ್ಥಬದ್ಧವಾಗಿ ಪಾಲಿಸಿಲ್ಲ: ವಿಶ್ವಸಂಸ್ಥೆ ಮಾನವ ಹಕ್ಕುಗಳ ಹೊಸ ಹೈ ಕಮಿಷನರ್

Sumana Upadhyaya

ನವದೆಹಲಿ: ಕಾಶ್ಮೀರ ವಿವಾದದ ಕುರಿತು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಆಯೋಗ ನೀಡಿದ್ದ ಹಿಂದಿನ ವರದಿಗಳನ್ನು ಅರ್ಥಬದ್ಧವಾಗಿ ಅನುಸರಿಸಿಲ್ಲ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಆಯೋಗದ ನೂತನ ಹೈ ಕಮಿಷನರ್ ಮಿಚೆಲ್ ಬ್ಯಾಚೆಲೆಟ್ ಹೇಳಿದ್ದಾರೆ. ಅವರು ಇದೇ ತಿಂಗಳ 1ರಂದು ಅಧಿಕಾರ ಸ್ವೀಕರಿಸಿದರು.

ಅವರು ನಿನ್ನೆ ಜೆನಿವಾದಲ್ಲಿ ಮಾನವ ಹಕ್ಕುಗಳ ಮಂಡಳಿಯ 39ನೇ ಸಭೆಯನ್ನುದ್ದೇಶಿಸಿ ಮಾತನಾಡಿದ್ದ ಸಂದರ್ಭದಲ್ಲಿ ಇತ್ತೀಚೆಗೆ ಸಲಿಂಗ ಕಾಮವನ್ನು ಮಾನ್ಯತೆ ಮಾಡಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ಶ್ಲಾಘಿಸಿದರು.

ಭಾರತದ ಸುಪ್ರೀಂ ಕೋರ್ಟ್ ಕಳೆದ ವಾರ ಸಲಿಂಗ ಕಾಮವನ್ನು ಮಾನ್ಯ ಮಾಡಿ ನೀಡಿರುವ ತೀರ್ಪನ್ನು ನಾನು ಶ್ಲಾಘಿಸುತ್ತೇನೆ. ಒಮ್ಮತದ ವಯಸ್ಕ ಸಂಬಂಧಗಳನ್ನು ಅಪರಾಧ ಎನ್ನುವ ಕಾನೂನುಗಳು ಲಿಂಗ ಮತ್ತು ಲೈಂಗಿಕ ತಾರತಮ್ಯ ಮಾಡುವ ಕ್ರಮ ಹಾಗೂ ಅದು ಕಿರುಕುಳಕ್ಕೆ ಮೂಲವಾಗಿರುತ್ತದೆ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೀಡಿರುವ ತೀರ್ಪು ಸ್ವಾಗತಾರ್ಹ. ಈ ನಿಟ್ಟಿನಲ್ಲಿ ಭಾರತವನ್ನು ವಿಶ್ವದ ಬೇರೆ ದೇಶಗಳು ಮಾದರಿಯಾಗಿ ತೆಗೆದುಕೊಳ್ಳಬಹುದೆಂದು ನಾನು ಆಶಿಸುತ್ತೇನೆ ಎಂದಿದ್ದಾರೆ.

ಆದರೆ, ಕಾಶ್ಮೀರ ವಿಚಾರದಲ್ಲಿ ಮಾನವ ಹಕ್ಕುಗಳ ಪರಿಸ್ಥಿತಿ ಕುರಿತು ಸಲ್ಲಿಸಿದ್ದ ವರದಿಯನ್ನು ಅರ್ಥಬದ್ಧವಾಗಿ ಪಾಲಿಸಿಕೊಂಡು ಬಂದಿಲ್ಲ. ಜಗತ್ತಿನ ಬೇರೆ ಕಡೆಯ ನಾಗರಿಕರಂತೆ ಕಾಶ್ಮೀರ ಜನತೆ ಕೂಡ ಸಮಾನ ಹಕ್ಕು ಮತ್ತು ನ್ಯಾಯಗಳನ್ನು ಹೊಂದಿರುತ್ತಾರೆ. ಸಂಬಂಧಪಟ್ಟ ಅಧಿಕಾರಿಗಳು ಅದನ್ನು ಅನುಸರಿಸಿ ಗೌರವಿಸಬೇಕು ಎಂದು ಹೇಳಿದ್ದಾರೆ.

ಈ ವರದಿಯನ್ನು ಅವರ ಹಿಂದಿನ ಅಧಿಕಾರಿ ಝೀದ್ ರಾದ್ ಅಲ್ ಹುಸೇನ್ ತಯಾರಿಸಿದ್ದಾರೆ, ಅವರು ಕಾಶ್ಮೀರ ಜನತೆಯ ಮಾನವ ಹಕ್ಕುಗಳ ಬಗ್ಗೆ ತೀವ್ರವಾಗಿ ಟೀಕಿಸಿದ್ದರು. ಕಾಶ್ಮೀರದಲ್ಲಿ ಗುಂಪು ಗಲಭೆ, ಜನ ಒಟ್ಟು ಸೇರಿ ಘರ್ಷಣೆ ಮಾಡುವುದನ್ನು ತಪ್ಪಿಸಲು ಪೆಲ್ಲೆಟ್ ಗನ್ ಬಳಸುವುದನ್ನು ತೀವ್ರವಾಗಿ ಖಂಡಿಸಿದ್ದರು. ಅಲ್ಲದೆ ಭಾರತ ಸರ್ಕಾರ ಸಶಸ್ತ್ರ ಪಡೆಗಳು (ಜಮ್ಮು ಮತ್ತು ಕಾಶ್ಮೀರ) ವಿಶೇಷ ಅಧಿಕಾರ ಕಾಯ್ದೆ, 1990ನ್ನು ತೆಗೆದುಹಾಕಬೇಕೆಂದು ಒತ್ತಾಯಿಸಿದ್ದರು. ಆದರೆ ಭಾರತ ಸರ್ಕಾರ ಈ ವರದಿಯನ್ನು ತಿರಸ್ಕರಿಸಿತ್ತು. ಇದೊಂದು ಹಾಸ್ಯಾಸ್ಪದ ಪ್ರವೃತ್ತಿಯ ಪ್ರೇರಿತ ವರದಿ ಎಂದು ಹೇಳಿತ್ತು.

SCROLL FOR NEXT