ಇಸ್ಲಾಮಾಬಾದ್: ಜಮ್ಮು-ಕಾಶ್ಮೀರದಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಉಗ್ರರು ಮೂವರು ಪೊಲೀಸರನ್ನು ಮನೆಗಳಿಗೇ ನುಗ್ಗಿ ಗುಂಡಿಟ್ಟು ಕೊಂದ ಘಟನೆ ಬೆನ್ನಲ್ಲೇ ಭಾರತ ಹಾಗೂ ಪಾಕಿಸ್ತಾನಗಳು ಮತ್ತೆ ಯುದ್ಧದ ಮಾತು ಆರಂಭಿಸಿವೆ.
ಘಟನೆ ಬಗ್ಗೆ ಭಾರತೀಯ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರು ನಿನ್ನೆಯಷ್ಟೇ ತೀವ್ರವಾಗಿ ಕಿಡಿಕಾರಿದ್ದರು. ಕಾಶ್ಮೀರದಲ್ಲಿ ಅನಾಗರೀಕ ಕೃತ್ಯಗಳನ್ನು ಪ್ರಚೋದಿಸುತ್ತಿರುವ ಪಾಕಿಸ್ತಾನ ಸೇನೆ ಹಾಗೂ ಉಗ್ರರಿಗೆ ತಿರುಗೇಟು ನೀಡುವ ಸಮಯ ಇದೀಗ ಬಂದಿದೆ ಎಂದು ಹೇಳಿದ್ದರು.
ಕಣವೆ ರಾಜ್ಯಾದಾದ್ಯಂತ ಬರ್ಬರ ಕೃತ್ಯಗಳನ್ನು ಎಸಗುತ್ತಿರುವ ಪಾಕಿಸ್ತಾನ ಸೇನೆ ಹಾಗೂ ಉಗ್ರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಸಮಯ ಬಂದಿದೆ. ಆದರೆ, ಅವರು ಹಿಡಿದ ಮಾರ್ಗ ಅನಾಗರಿಕ ಮಾರ್ಗ ನಾವು ಹಿಡಿಯಲ್ಲ. ಆದಾಗ್ಯೂ, ಅವರಿಗೆ ತಕ್ಕ ಪ್ರತಿಕ್ರಿಯೆ ನೀಡಲಾಗುತ್ತದೆ ನಾವು ಅನುಭವಿಸಿದ ನೋವನ್ನು ಅವರು ಅನುಭವಿಸಬೇಕು ಎಂದು ಗುಡುಗಿದ್ದರು.
ಈ ಹೇಳಿಕೆಗೆ ಇದೀಗ ಪ್ರತಿಕ್ರಿಯೆ ನೀಡಿರುವ ಪಾಕಿಸ್ತಾನ ಸೇನಾ ವಕ್ತಾರ ಆಸೀಫ್ ಗಫೂರ್ ಅವರು, ಭಾರತದ ವಿರುದ್ಧದ ಯುದ್ಧಕ್ಕೆ ನಾವೂ ಸಿದ್ಧ. ಆದರೆ, ಜನರ ಹಿತಾಸಕ್ತಿಗಾಗಿ ಶಾಂತಿ ಮಾರ್ಗವನ್ನು ಅನುಸರಿಸುತ್ತೇವೆಂದು ಹೇಳಿದ್ದಾರೆ.
ಅತೀ ದೀರ್ಘಕಾಲೀನವಾಗಿ ಭಯೋತ್ಪಾದನೆ ವಿರುದ್ಧ ಪಾಕಿಸ್ತಾನ ಹೋರಾಡುತ್ತಿದೆ. ನಮಗೆ ಶಾಂತಿಯ ಮೌಲ್ಯ ತಿಳಿದಿದೆ. ನಮ್ಮ ಶಾಂತಿ ಪಾಲನೆಂಯೇ ದೌರ್ಬಲ್ಯವೆಂದು ಭಾವಿಸಿದ್ದಲ್ಲಿ ಅದು ತಪ್ಪು. ನಮ್ಮದು ಅಣ್ವಸ್ತ್ರ ರಾಷ್ಟ್ರ. ನಾವೂ ಯುದ್ಧಕ್ಕೆ ಸಿದ್ಧ ಎಂದು ಹೇಳಿಕೊಂಡಿದ್ದಾರೆ.