ಬೀಜಿಂಗ್: ಭಾರತದ ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ಚೀನಾಗೆ ಭೇಟಿ ನೀಡಿದ್ದು, ಭಯೋತ್ಪಾದನೆ ವಿಷಯವಾಗಿ ಭಾರತ ನೆರೆ ರಾಷ್ಟ್ರಕ್ಕೆ ಎಚ್ಚರಿಕೆ ನೀಡಿದೆ.
ಚೀನಾಗೆ ಭೇಟಿ ನೀಡಿರುವ ವಿಜಯ್ ಗೋಖಲೆ, ಅಲ್ಲಿನ ರಾಜ್ಯ ಕೌನ್ಸಿಲರ್ ವಾಂಗ್ ಯಿ ಅವರನ್ನು ಭೇಟಿ ಮಾಡಿದ್ದು, ಮಸೂದ್ ಅಜರ್ ವಿಷಯ ಚರ್ಚಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಪುಲ್ವಾಮ ದಾಳಿಯೂ ಸೇರಿದಂತೆ ಭಾರತದ ಮೇಲೆ ಹಲವು ಭಯೋತ್ಪಾದಕ ಕೃತ್ಯಗಳನ್ನು ಎಸಗಿರುವ ಪಾಕಿಸ್ತಾನದ ಉಗ್ರ ಮಸೂದ್ ಅಜರ್ ಗೆ ವಿಶ್ವಸಂಸ್ಥೆ ನಿಷೇಧ ವಿಧಿಸಲು ಭಾರತ ಪ್ರಸ್ತಾವನೆ ಮಂಡಿಸಿತ್ತು. ಫ್ರಾನ್ಸ್, ಬ್ರಿಟನ್ ಸೇರಿದಂತೆ ವಿಶ್ವಸಂಸ್ತೆ ಭದ್ರತಾ ಮಂಡಳಿಯ ಬಹುತೇಕ ರಾಷ್ಟ್ರಗಳು ಭಾರತಕ್ಕೆ ಬೆಂಬಲ ನೀಡಿತ್ತಾದರೂ ಚೀನಾ ಮಸೂದ್ ಅಜರ್ ನಿಷೇಧಕ್ಕೆ ಅಡ್ಡಗಾಲು ಹಾಕಿತ್ತು.
ಈಗ ಚೀನಾ ಭೇಟಿಯಲ್ಲಿರುವ ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ಮಸೂದ್ ಅಜರ್ ವಿಷಯವನ್ನು ಪ್ರಸ್ತಾಪಿಸಲಿದ್ದು, ಮಸೂದ್ ಅಜರ್ ನಿಷೇಧಕ್ಕೆ ಅಡ್ಡಗಾಲು ಹಾಕದಂತೆ ಚೀನಾ ಜೊತೆ ಮಾತುಕತೆ ನಡೆಸಲಿದ್ದಾರೆ.
ಈ ನಡುವೆಯೇ ವಿಜಯ್ ಗೋಖಲೆ ಮಾತನಾಡಿದ್ದು, ಚೀನಾ ನಮ್ಮ ನಮಗೆ ಸಂಬಂಧಪಟ್ಟ ವಿಷಯಗಳಿಗೂ ಸೂಕ್ಷ್ಮವಾಗಿ ನಡೆದುಕೊಳ್ಳಬೇಕು ಎಂದು ಹೇಳಿದ್ದಾರೆ. ಪರಸ್ಪರ ವಿಶ್ವಾಸಾರ್ಹತೆಯನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಚೀನಾ ಅಧಿಕಾರಿಗಳೊಂದಿಗೆ ನಾವು ಒಟ್ಟಿಗೆ ಕೆಲಸ ಮಾಡಲಿದ್ದೇವೆ ಎಂದು ಚೀನಾದ ವಿದೇಶಾಂಗ ಇಲಾಖೆಯ ಉಪ ಸಚಿವರ ಭೇಟಿ ನಂತರ ಹೇಳಿದ್ದಾರೆ.