ನವದೆಹಲಿ: ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ನಡೆದ ಉಗ್ರ ದಾಳಿ ಮತ್ತು ಕಳೆದ ಈಸ್ಟರ್ ಸಂಡೆಯಂದು ಕೊಲಂಬೋದಲ್ಲಿ ನಡೆದ ಉಗ್ರ ದಾಳಿ ಎರಡೂ ಉಗ್ರ ದಾಳಿಗಳಲ್ಲಿ ಕೂದಲೆಳೆ ಅಂತರದಲ್ಲಿ ಬಚಾವ್ ಆಗುವ ಮೂಲಕ ಭಾರತ ಮೂಲದ ದುಬೈ ಉದ್ಯಮಿ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದಾರೆ.
ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ ಕಳೆದ ವಾರ ನಡೆದ ಸರಣಿ ಬಾಂಬ್ ಸ್ಫೋಟದಲ್ಲಿ 253 ಜನರು ಮೃತಪಟ್ಟು, 500 ಜನರು ಗಂಭೀರವಾಗಿ ಗಾಯಗೊಂಡಿದ್ದರು. ಇಂತಹ ಪ್ರಾಣಾಂತಕ ಘಟನೆಯಲ್ಲೂ ಪ್ರಾಣ ಉಳಿಸಿಕೊಂಡ ಭಾರತೀಯ ಮೂಲದ ದಂಪತಿ ಇದೀಗ ಸುದ್ದಿಗೆ ಗ್ರಾಸವಾಗಿದ್ದಾರೆ. ದುಬೈನಲ್ಲಿ ನೆಲೆಸಿರುವ ಭಾರತ ಮೂಲದ ಅಭಿನವ್ ಚಾರಿ ಹಾಗೂ ಪತ್ನಿ ನವರೂಪ್ ಕೆ ಚಾರಿ ತಮ್ಮ ಬಿಸಿನೆಸ್ ನಿಮಿತ್ತ ಶ್ರೀಲಂಕಾಗೆ ತೆರಳಿದ್ದರು. ಈ ವೇಳೆ ಇವರು ಸಿನಾಮನ್ ಗ್ರ್ಯಾಂಡ್ ಹೋಟೆಲ್ ನಲ್ಲಿ ತಂಗಿದ್ದರು. ಹೋಟೆಲ್ ನಲ್ಲಿ ಬೆಳಗ್ಗೆ ಟಿಫನ್ ತಿನ್ನುವ ವೇಳೆ ನಡೆದ ಬಾಂಬ್ ಬ್ಲಾಸ್ಟ್ ನಲ್ಲಿ ಕೂದಲೆಳೆ ಅಂತರದಲ್ಲಿ ಮಿಸ್ ಆಗಿದ್ದಾರೆ.
ಅಷ್ಟೇ ಅಲ್ಲ ಅಭಿನವ್ ಚಾರಿ 2008ರಲ್ಲಿ ಮುಂಬೈನಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದರು. ಆಗಲೂ 12 ಉಗ್ರರು ನಡೆಸಿದ ಫೈರಿಂಗ್ ಹಾಗೂ ಬಾಂಬ್ ದಾಳಿಯಲ್ಲಿ ಅಭಿನವ್ ಚಾರಿ ಪಾರಾಗಿ ಜೀವ ಉಳಿಸಿಕೊಂಡಿದ್ದರಂತೆ.
ಈ ವಿಷಯವನ್ನು ಚಾರಿಯೇ ಸ್ವತ ಮಾಧ್ಯಮವೊಂದಕ್ಕೆ ಹೇಳಿದ್ದು, 2008ರಲ್ಲಿ ನಾನು ವೈದ್ಯಕೀಯ ಶಿಕ್ಷಣ ವ್ಯಾಸಂಗ ಮಾಡುತ್ತಿದ್ದೆ. ನಿಜಕ್ಕೂ ನನ್ನ ಜೀವನದಲ್ಲೇ ಮರೆಯಲಾಗದ ದಿನಗಳು ಸುಮಾರು 5-6 ದಿನ ನಡೆದ ಉಗ್ರ ದಾಳಿ ಮತ್ತು ಸೇನಾ ಕಾರ್ಯಾಚರಣೆ ಮೈ ಜುಮ್ಮೆನ್ನಿಸುವಂತಿತ್ತು. ಆ ಬಳಿಕ ಕಳೆದ ಈಸ್ಟರ್ ಸಂಡೆಯಂದು ನಾನು ನನ್ನ ಬಿಸಿನೆಸ್ ನಿಮಿತ್ತ ಶ್ರೀಲಂಕಾಗೆ ಪತ್ನಿ ಸಮೇತನಾಗಿ ಬಂದಿದ್ದೆ. ನಾನು ಮತ್ತು ನನ್ನ ಪತ್ನಿ ಚರ್ಚ್ ಗೆ ಹೋಗಿ ಪ್ರಾರ್ಥನೆ ಸಲ್ಲಿಸುತ್ತಿದ್ದೆವು. ಈ ವೇಳೆ ಮಧ್ಯದಲ್ಲೇ ಚರ್ಚ್ ನ ಫಾದರ್ ಚರ್ಚ್ ನಿಂದ ಹೊರಗೆ ಹೋಗುವಂತೆ ಸೂಚಿಸಿದರು. ಆಗ ನಮಗೇನೂ ಅರ್ಥವಾಗದೇ ಹೊರಗೆ ಬಂದೆವು. ಬಳಿಕ ಟ್ಯಾಕ್ಸಿಯಲ್ಲಿ ತೆರಳಿ ಬೆಳಗಿನ ಉಪಾಹಾರ ಮುಗಿಸಿಕೊಂಡೆವು.
ಉಪಾಹಾರದ ಬಳಿಕ ರಸ್ತೆಯಲ್ಲಿ ಜನ ತುಂಬಾ ಗಂಭೀರವಾಗಿದುದ್ದನ್ನು ಗಮನಿಸಿದೆವು. ಹೀಗಾಗಿ ಕೂಡಲೇ ನಾವು ಹೊಟೆಲ್ ಗೆ ಹೋಗುವ ನಿರ್ಧಾರ ಮಾಡಿ, ತಾವು ತಂಗಿದ್ದ ಸಿನಾಮನ್ ಹೊಟೆಲ್ ಗೆ ತೆರಳಿದೆವು. ಹೊಟೆಲ್ ನ ಅವರಣ ಪ್ರವೇಶ ಮಾಡುತ್ತಲೇ ಅಪಾರ ಪ್ರಮಾಣದ ಭದ್ರತಾ ಸಿಬ್ಬಂದಿ ಎಲ್ಲರನ್ನೂ ಪರಿಶೀಲಿಸುತ್ತಿದ್ದರು. ನಾನು ಸಾಮಾನ್ಯ ಚೆಕಪ್ ಇರಬೇಕು ಎಂದು ಭಾವಿಸಿದೆವು. ಆದರೆ ಮೊಬೈಲ್ ನಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಉಗ್ರ ದಾಳಿ ಕುರಿತು ಸುದ್ದಿ ಓದಿದ ಬಳಿಕ ನಮಗೆ ಸತ್ಯಾಂಶ ತಿಳಿಯಿತು. ಹೊಟೆಲ್ ನಲ್ಲಿನ ಉಗ್ರ ದಾಳಿ ಸಂಘಟನೆ ಯಾವುದೇ ಚಲನಚಿತ್ರ ನೋಡಿದಂತಾಗಿತ್ತು ಎಂದು ಅಭಿನವ್ ಚಾರಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ಕಳೆದ ಈಸ್ಟರ್ ಸಂಡೇಯಂದು ರಾಜಧಾನಿ ಕೊಲಂಬೋದಲ್ಲಿ ಮೂರು ಚರ್ಚ್ ಗಳು ಹಾಗೂ ಮೂರು ಹೊಟೆಲ್ ಗಳ ಮೇಲೆ 9 ಮಂದಿ ಉಗ್ರರು ಆತ್ಮಹತ್ಯಾ ಬಾಂಬ್ ದಾಳಿ ನಡೆಸಿದ್ದರು. ಈ ವೇಳೆ ಸುಮಾರು 253 ಮಂದಿ ಸಾವನ್ನಪ್ಪಿ 500ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos