ವಿದೇಶ

ನಮ್ಮ ಸರ್ಕಾರ ಸ್ಟೀರಿಂಗ್ ಮೇಲೆ ಕುಳಿತಿದೆ, ಎಕ್ಸಲೇಟರ್ ಕೊಡುವುದು ದೇಶದ ಜನರು: ಬಹ್ರೈನ್ ನಲ್ಲಿ ಪ್ರಧಾನಿ ಮೋದಿ 

Sumana Upadhyaya

ಮನಮಾ: ಭಾರತದ ವೈವಿಧ್ಯತೆ ಮತ್ತು ಬಣ್ಣಗಳು ಅದರ ಶಕ್ತಿ, ಅದು ಇಡೀ ವಿಶ್ವವನ್ನು ಆಕರ್ಷಿಸುತ್ತದೆ. ತಮ್ಮ ಸರ್ಕಾರ ನೀಡುವ ಹೊಸ ಅವಕಾಶಗಳಿಂದ ಇಲ್ಲಿನ ಅನಿವಾಸಿ ಭಾರತೀಯರಿಗೆ ನೆರವಾಗಲಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.


ಬಹ್ರೈನ್ ರಾಜಧಾನಿ ಮನಮಾದಲ್ಲಿ ಭಾರತೀಯ ಸಮುದಾಯವನ್ನುದ್ದೇಶಿಸಿ ಮಾತನಾಡಿದ ಅವರು, ದೇಶದ ಪ್ರಧಾನಿಯಗಿ ತಾವಿಲ್ಲಿಗೆ ಬಂದಿರುವ ಉದ್ದೇಶ ಇಲ್ಲಿನ ಅನಿವಾಸಿ ಭಾರತೀಯರನ್ನು ಭೇಟಿ ಮಾಡಿ ಅವರ ಜೊತೆ ಮಾತನಾಡುವುದು ಮತ್ತು ಬಹ್ರೈನ್ ನಲ್ಲಿರುವ ಅನೇಕ ಸ್ನೇಹಿತರನ್ನು ಭೇಟಿ ಮಾಡಿ ಮಾತುಕತೆಯಾಡುವುದು ಎಂದರು.


ಭಾರತದ ಪ್ರಧಾನಿ ಬಹ್ರೈನ್ ಗೆ ಭೇಟಿ ನೀಡಲು ಇಷ್ಟೊಂದು ದೀರ್ಘ ಸಮಯ ಹಿಡಿಯಿತು. ಈ ಕೊಲ್ಲಿ ರಾಷ್ಟ್ರಕ್ಕೆ ಭೇಟಿ ನೀಡುತ್ತಿರುವ ಭಾರತದ ಮೊದಲ ಪ್ರಧಾನಿಯಾಗಿ ತಮಗೆ ಹೆಮ್ಮೆಯಿದೆ ಎಂದರು.


ಫ್ರಾನ್ಸ್, ಯುಎಇ ಮತ್ತು ಬಹ್ರೈನ್ ಮೂರು ದೇಶಗಳ ಭೇಟಿಯ ಅಂತಿಮ ಘಟದಲ್ಲಿ ನರೇಂದ್ರ ಮೋದಿಯವರು ಬಹ್ರೈನ್ ಗೆ ಭೇಟಿ ನೀಡಿದ ಮೊದಲ ಭಾರತದ ಪ್ರಧಾನಿಯಾಗಿದ್ದಾರೆ.


ದೇಶದ ಒಳಗೆ ಮತ್ತು ಹೊರಗೆ ತಮ್ಮ ಸರ್ಕಾರದ ಅಡಿಯಲ್ಲಿ ಭಾರತ ಉನ್ನತಿಯತ್ತ ಸಾಗುತ್ತಿದೆ, ತಮ್ಮ ಸರ್ಕಾರ ಗಾಡಿಯ ಸ್ಟೀರಿಂಗ್ ನಲ್ಲಿ ಕುಳಿತಿದ್ದು ದೇಶದ ಜನರು ಎಕ್ಸ್ಲೇಟರ್ ಒತ್ತುತ್ತಿದ್ದಾರೆ ಎಂದರು.


ತಮ್ಮ ಕನಸು ಸಾಕಾರಗೊಳ್ಳಬಹುದು, ಭರವಸೆಗಳು ಮತ್ತು ಆಕಾಂಕ್ಷೆಗಳನ್ನು ಕೂಡ ಈಡೇರಿಸಿಕೊಳ್ಳಬಹುದು ಎಂದು ಪ್ರತಿಯೊಬ್ಬ ಭಾರತೀಯನೂ ಈಗ ನಂಬಿಕೆ ಇಟ್ಟುಕೊಂಡಿದ್ದಾರೆ. ಈ ನಂಬಿಕೆಯ ಬಲದ ಮೇಲೆಯೇ ಹೊಸ ನಿರ್ಣಯಗಳನ್ನು ಈಡೇರಿಸುವಲ್ಲಿ ನಾನು ನಿರತನಾಗಿದ್ದೇನೆ ಎಂದು ಬಹ್ರೈನ್ ನ ಭಾರತೀಯ ಸಮುದಾಯವನ್ನುದ್ದೇಶಿಸಿ ಹೇಳಿದರು.


ನಮ್ಮ ಗುರಿಗಳು ಉನ್ನತವಾಗಿವೆ. ಮುಂದಿನ ವರ್ಷಗಳಲ್ಲಿ ದೇಶದ ಆರ್ಥಿಕತೆಯ ಮಟ್ಟವನ್ನು 5 ಟ್ರಿಲ್ಲಿಯನ್ ಡಾಲರ್ ಗೆ ಹೆಚ್ಚಿಸಲು ನಮ್ಮ ಆರ್ಥಿಕತೆ ದುಪ್ಪಟ್ಟು ಬೆಳೆಯಬೇಕಿದೆ. ಭಾರತೀಯ ಮೂಲದ ಅಲ್ಲಿನ ಸಮುದಾಯವನ್ನುದ್ದೇಶಿ ಮೋದಿಯವರು ಭಾರತದಲ್ಲಿ ಬದಲಾವಣೆ ತರಲು ನೀವು ಬಯಸುತ್ತೀರಾ ಎಂದು ಕೇಳಿದಾಗ ಹೌದು ಎಂಬ ಉತ್ತರ ಬಂತು. 


ಬಹ್ರೈನ್ ನಲ್ಲಿರುವ ಭಾರತೀಯ ವಲಸಿಗರು ಸದ್ಯದಲ್ಲಿಯೇ ರುಪೇ ಕಾರ್ಡ್ ಮೂಲಕ ವಹಿವಾಟು ನಡೆಸಲು ಸಾಧ್ಯವಿದೆ ಎಂದು ಮೋದಿಯವರು ಘೋಷಿಸಿದರು. ಇಂದು ನಾವು ನಿಲುವಳಿ ಒಪ್ಪಂದಕ್ಕೆ ಸಹಿ ಹಾಕಿದ್ದೇವೆ. ರುಪೇ ಕಾರ್ಡ್ ಮೂಲಕ ಭಾರತದಲ್ಲಿರುವ ನಿಮ್ಮವರಿಗೆ ಹಣ ಕಳುಹಿಸುವ ವ್ಯವಸ್ಥೆ ಮಾಡುವುದು ನಮ್ಮ ಉದ್ದೇಶ ಎಂದರು.


ಬಹ್ರೈನ್ ನಲ್ಲಿ ಸುಮಾರು 3 ಲಕ್ಷದ 50 ಸಾವಿರ ಭಾರತೀಯರು ಅದರಲ್ಲೂ ಹೆಚ್ಚಿನವರು ಕೇರಳಿಗರು ಬಹ್ರೈನ್ ನಲ್ಲಿ ನೆಲೆಸಿದ್ದಾರೆ. ಬಹ್ರೈನ್ ನ ಒಟ್ಟು ಜನಸಂಖ್ಯೆಯ 12 ಲಕ್ಷ ಜನರಲ್ಲಿ ಭಾರತೀಯರು ಮೂರನೇ ಒಂದು ಭಾಗದಷ್ಟಿದ್ದಾರೆ.

SCROLL FOR NEXT