ಬೀರಾ: ಆಫ್ರಿಕಾ ಖಂಡದಲ್ಲಿ ಬೀಸಿದ ಇದಾಯಿ ಚಂಡ ಮಾರುತ ಅಕ್ಷರಶ- ನರಕ ಸೃಷ್ಟಿ ಮಾಡಿದ್ದು, ಭೀಕರ ಚಂಡಮಾರುತದ ಅಬ್ಬರಕ್ಕೆ ಈ ವರೆಗೂ 1 ಸಾವಿರಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.
ಇದಾಯಿ ಚಂಡಮಾರುತದಿಂದ ಮೊಜಾಂಬಿಕ್ ಗಡಿಯಲ್ಲಿರುವ ಮ್ಯಾನಿಕಲ್ಯಾಂಡ್ ಪ್ರಾಂತ್ಯದ ಸಾವಿರಾರು ಜನರ ಬದುಕು ಅಸ್ತವ್ಯಸ್ತಗೊಂಡಿದೆ. ಇಲ್ಲಿ ವಿದ್ಯುತ್ ಸಂಪರ್ಕ ಕಡಿಗೊಂಡಿದ್ದು, ಸೇತುವೆಗಳು ಮುಳುಗಡೆಯಾಗಿವೆ. ಚಿಮಾನಿಮನಿ ಜಿಲ್ಲೆಯಲ್ಲಿ ಕನಿಷ್ಠ 25 ಮನೆಗಳು ಹಾನಿಗೊಳಗಾಗಿವೆ. ಹಲವರು ನಾಪತ್ತೆಯಾಗಿದ್ದಾರೆ ಎಂದು ಚಿಮಾನಿಮಾನಿ ಜಿಲ್ಲೆಯ ಸಂಸತ್ ಸದಸ್ಯ ಜೋಶುವಾ ಸಾಕ್ಕೊ ತಿಳಿಸಿದ್ದಾರೆ.
ಚಂಡಮಾರುತದ ಅಬ್ಬರಕ್ಕೆ ಒಂದು ಸಾವಿರಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ ಎಂದು ಮೊಜಾಂಬಿಕ್ ಅಧ್ಯಕ್ಷ ಫಿಲಿಪ್ ನ್ಯೂಸು ಸೋಮವಾರ ಹೇಳಿದ್ದಾರೆ. ಇದಲ್ಲದೆ ಗುರುವಾರ ರಾತ್ರಿ ಉಂಟಾದ ಭೂಕುಸಿತದಿಂದಾಗಿ 84 ಕ್ಕಿಂತ ಹೆಚ್ಚು ಸಾವು ಅಧಿಕೃತವಾಗಿ ದಾಖಲಾಗಿದೆ ಎಂದು ವಿಪತ್ತು ನಿರ್ವಹಣಾ ರಾಷ್ಟ್ರೀಯ ಸಂಸ್ಥೆ ತಿಳಿಸಿದೆ. ಈ ಘಟನೆ ಕುರಿತು ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಅಧ್ಯಕ್ಷರು ಪರಿಸ್ಥಿತಿಯು ಹೆಚ್ಚು ಗಂಭೀರವಾಗಿದೆ ಎಂದು ಹೇಳಿದರು.
ಈಗಿನ ಅನಾಹುತದಿಂದ 1000 ಕ್ಕಿಂತಲೂ ಹೆಚ್ಚು ಸಾವು ಸಂಭವಿಸಿವೆ ಎಂಬುದಕ್ಕೆ ಘಟನೆಯ ಭೀಕರತೆಯೇ ಸಾಕ್ಷಿಯಾಗಿದೆ ಎಂದರು. ಚಂಡಮಾರುತದಿಂದ ಕುಡಿಯುವ ನೀರಿನ ವ್ಯವಸ್ಥೆ ಹಾಳಾಗಿದೆ. ಅನೇಕ ಕಡೆ ಸಂಪರ್ಕ ಕಡಿದು ಹೋಗಿದೆ ಮತ್ತು ಆಸ್ಪತ್ರೆಗಳು, ಶಾಲೆಗಳು ಮತ್ತು ಇತರ ಸಾರ್ವಜನಿಕ ಮತ್ತು ಖಾಸಗಿ ಸಂಸ್ಥೆಗಳ ಸಾಮಾನ್ಯ ಕಾರ್ಯಗಳ ಮೇಲೂ ಬಹಳ ಕೆಟ್ಟ ಪರಿಣಾಮ ಬೀರಿದೆ ಎಂದು ಅವರು ಹೇಳಿದರು. ಇನ್ನು ಪಂಗ್ಯು ಮತ್ತು ಬುಜಿ ನದಿಗಳ ಪ್ರವಾಹದಿಂದ ಅನೇಕ ಗ್ರಾಮಗಳು ಕಣ್ಮರೆಯಾಗಿವೆ. ನದಿಗಳ ನೀರಿನಲ್ಲಿ ದೇಹಗಳು ತೇಲುತ್ತಿರುವುದು ಸಾಮಾನ್ಯವಾಗಿದ್ದು, ಪ್ರವಾಹ ಮತ್ತು ಚಂಡಮಾರುತದಂತಹ ವಿಕೋಪಗಳಿಂದ ಜನರ ಜೀವ ಕಾಪಾಡುವುದು ಸರ್ಕಾರದ ಪ್ರಥಮ ಆದ್ಯತೆಯಾಗಿದೆ. ಈ ನಿಟ್ಟಿನಲ್ಲಿ ಹೆಚ್ಚು ಗಮನ ಹರಿಸಲಾಗುತ್ತಿದೆ ಎಂದು ಅವರು ಹೇಳಿದರು.
ಅಂತೆಯೇ ರಕ್ಷಣಾ ಮತ್ತು ಭದ್ರತಾ ಪಡೆಗಳು ಕಾಣೆಯಾದವರಿಗಾಗಿ ಹುಡುಕಾಟದಲ್ಲಿ ನಿರತವಾಗಿವೆ. ರಕ್ಷಣಾ ಸಹಾಯಕ್ಕಾಗಿ ಹೆಲಿಕಾಪ್ಟರ್ ಮತ್ತು ವಿಮಾನಗಳು ವಾಯು ಸಂಪನ್ಮೂಲ ಸೇವೆಯನ್ನು ತ್ವರಿತವಾಗಿ ಬಳಸಿಕೊಂಡು ಮಾನವೀಯ ನೆರವು ನೀಡುವಂತೆ ಅವರು ಮನವಿ ಮಾಡಿದ್ದಾರೆ.