ವಿದೇಶ

ವಿಶ್ವಸಂಸ್ಥೆಯಲ್ಲಿ ವಿಶ್ವನಾಯಕರನ್ನೇ ತರಾಟೆಗೆ ತೆಗೆದುಕೊಂಡ ಹವಾಮಾನ ಕಾರ್ಯಕರ್ತೆ! 

Srinivas Rao BV

ವಿಶ್ವಸಂಸ್ಥೆ ಹವಾಮಾನ ಶೃಂಗದಲ್ಲಿ ಹವಾಮಾನ ಕಾರ್ಯಕರ್ತೆ ಗ್ರೆಟಾ ಥನ್ಬರ್ಗ್ ವಿಶ್ವನಾಯಕರನ್ನೇ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ. 

ಜಾಗತಿಕ ತಾಪಮಾನ ನಿಯಂತ್ರಣ, ಹಸಿರುಮನೆ ಅನಿಲ ಹೊರಸೂಸುವಿಕೆ ನಿಯಂತ್ರಣ ಮಾಡಲು ವಿಫಲರಾಗಿರುವ ವಿಶ್ವನಾಯಕರು ನನ್ನ ಪೀಳಿಗೆಗೆ ದ್ರೋಹ ಮಾಡಿದ್ದಾರೆ, ನಿಮಗೆ ಎಷ್ಟು ಧೈರ್ಯ ಎಂದು ಹಿಗ್ಗಾ-ಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾಳೆ.

ವಿಶ್ವನಾಯಕರನ್ನು ತರಾಟೆಗೆ ತೆಗೆದುಕೊಂಡು ಸುದ್ದಿಯಾಗಿರುವ ಈ ಯುವತಿ ಸ್ವೀಡನ್ ನವಳಾಗಿದ್ದು, ಹವಾಮಾನ ಬದಲಾವಣೆಗೆ ಸಂಬಂಧಿಸಿದ ಚಳುವಳಿ ಮೂಲಕ ಜಾಗತಿಕ ಮಟ್ಟದಲ್ಲಿ ಸುದ್ದಿಯಾಗಿದ್ದಳು. 

ಇವೆಲ್ಲವೂ ನಡೆಯುತ್ತಿರುವುದು ತಪ್ಪು, ನಾನು ಇಲ್ಲಿರಬಾರದಿತ್ತು, ಶಾಲೆಗೆ ಹೋಗಬೇಕು, ನೀವು ವಿಶ್ವಾಸಕ್ಕಾಗಿ ಯುವಪೀಳಿಗೆಯವರತ್ತ ನೋಡುತ್ತಿದ್ದೀರಿ, ಖಾಲಿ ಮಾತುಗಳಿಂದ ನನ್ನ ಕನಸುಗಳನ್ನು, ಬಾಲ್ಯವನ್ನು ಕಸಿದುಕೊಂಡಿದ್ದೀರಿ, ನಿಮಗೆಷ್ಟು ಧೈರ್ಯ? ಇಷ್ಟೆಲ್ಲಾ ಆದರೂ ನಾನು ಅದೃಷ್ಟವಂತರ ಪೈಕಿ ಒಬ್ಬಳು, ಆದರೆ ಜನರು ನರಳುತ್ತಿದ್ದಾರೆ, ಸಾಯುತ್ತಿದ್ದಾರೆ. ಇಡೀ ಪರಿಸರ ವ್ಯವಸ್ಥೆ ಹಾಳಾಗುತ್ತಿದೆ. 

ನಾವು ಸಾಮೂಹಿಕ ಅಳಿವಿನತ್ತ ಹೆಜ್ಜೆ ಹಾಕುವುದಕ್ಕೆ ಪ್ರಾರಂಭಿಸಿದ್ದೇವೆ, ಆದರೂ ನೀವೆಲ್ಲಾ ಹಣ, ಬಾಹ್ಯ ಆರ್ಥಿಕ ಬೆಳವಣಿಗೆ ಬಗ್ಗೆ ಕಥೆ ಹೇಳುತ್ತೀರಿ ನಿಮಗೆ ಎಷ್ಟು ಧೈರ್ಯ ಎಂದು ಗ್ರೆಟಾ ಥನ್ಬರ್ಗ್ ಪ್ರಶ್ನಿಸಿದ್ದಾಳೆ 

ಯುವ ಜನತೆಯ ಕೂಗನ್ನು ಹಾಗೂ ತುರ್ತನ್ನು ಅರ್ಥ ಮಾಡಿಕೊಳ್ಳಲಾಗುತ್ತಿದೆ ಎಂದು ಹೇಳುತ್ತಿದ್ದೀರ, ಆದರೆ ನಿಜವಾಗಿಯೂ ನಿಮಗೆ ಪರಿಸ್ಥಿತಿ ಅರ್ಥವಾಗಿಯೂ ಯಾವುದೇ ಕ್ರಮ ಕೈಗೊಳ್ಳದೇ ಇದ್ದರೆ ನಿಮ್ಮನ್ನು ನಂಬುವುದು ಹೇಗೆ ಎಂದು ಪ್ರಶ್ನಿಸಿದ್ದಾಳೆ.

SCROLL FOR NEXT