ವಿದೇಶ

ನಮಸ್ತೆ ಹೇಳುವ ಮೂಲಕ ವಿಶ್ವಸಂಸ್ಥೆಗೆ ವಿದಾಯ ಹೇಳಿದ ಸಯ್ಯದ್ ಅಕ್ಬರುದ್ದೀನ್

Srinivas Rao BV

ನ್ಯೂಯಾರ್ಕ್: ವಿಶ್ವ ಸಂಸ್ಥೆಯಲ್ಲಿ ಭಾರತದ ಗೌರವ ಹಾಗೂ ಪ್ರತಿಷ್ಠೆಯನ್ನು ಮತ್ತಷ್ಟು ಮತ್ತಷ್ಟು ಹೆಚ್ಚಿಸುವ ರೀತಿಯಲ್ಲಿ ಕಾರ್ಯನಿರ್ವಹಿಸಿ ಜಗತ್ತಿನ ಗಮನ ಸೆಳೆದಿದ್ದ ಭಾರತದ ಖಾಯಂ ಪ್ರತಿನಿಧಿ ಸಯ್ಯದ್ ಅಕ್ಬರುದ್ದೀನ್ ಗುರುವಾರ ಸೇವೆಯಿಂದ ನಿವೃತ್ತಿಗೊಂಡರು. 

ಪ್ರಮುಖವಾಗಿ ವಿಶ್ವಸಂಸ್ಥೆಯಲ್ಲಿ ಭಾರತದ ವಿರುದ್ದ ಪಾಕಿಸ್ತಾನ ಸುಳ್ಳು ಆರೋಪ ಮಾಡಿದ ಪ್ರತಿಬಾರಿಯೂ ಪಾಕಿಸ್ತಾನ ಪ್ರತಿನಿಧಿಯ ಬಾಯಿ ಮುಚ್ಚಿಸುವ ರೀತಿ ಸಮರ್ಥ ಉತ್ತರವನ್ನು ಅಕ್ಬರುದ್ದೀನ್ ನೀಡುತ್ತಿದ್ದರು. 1985 ತಂಡಕ್ಕೆ ಸೇರಿದ ಐ ಎಫ್ ಎಸ್ (ಭಾರತೀಯ ವಿದೇಶಾಂಗ ಸೇವೆ) ಅಧಿಕಾರಿ ಯಾಗಿರುವ ಸಯ್ಯದ್ ಅಕ್ಬರುದ್ದೀನ್ 2016 ಜನವರಿಯಿಂದ ವಿಶ್ವ ಸಂಸ್ಥೆಯಲ್ಲಿ ಭಾರತದ ಖಾಯಂ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. 

ಇನ್ನೂ.. ಸಯ್ಯದ್ ನಂತರ ವಿಶ್ವಸಂಸ್ಥೆಯಲ್ಲಿ ಭಾರತದ ಖಾಯಂ ಪ್ರತಿನಿಧಿಯಾಗಿ ಟಿ.ಎಸ್. ತಿರುಮೂರ್ತಿ ಅವರು ನೇಮಕಗೊಂಡಿದ್ದಾರೆ. ಪ್ರಸ್ತುತ ಅವರು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇನ್ನೂ ತಮ್ಮ ಬಿಳ್ಕೋಡುಗೆ ಕಾರ್ಯಕ್ರಮದಲ್ಲೂ ಕೊರೊನಾ ಹರಡದಂತೆ ತಡೆಯಲು ಎಲ್ಲರೂ ಪಾಲಿಸಬಹುದಾಗ ಭಾರತೀಯ ಸಂಪ್ರದಾಯದ ನಮಸ್ತೆಯನ್ನು ಮತ್ತೊಮ್ಮೆ ಮನವರಿಕೆ ಮಾಡಿಕೊಡಲು ಸಯ್ಯದ್ ಅಕ್ಬರುದ್ದೀನ್ ಪ್ರಯತ್ನಿಸಿದರು.

ವಿಡಿಯೋ ಕರೆಯ ಮೂಲಕ ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಅಂಟೊನಿಯೋ ಗುಟೆರೆಸ್ ಅವರನ್ನು ಭಾರತೀಯ ಸಂಪ್ರದಾಯ ಪದ್ದತಿಯಲ್ಲಿ ನಮಸ್ಕರಿಸಿ ತಮ್ಮ ಸೇವೆಯಿಂದ ನಿರ್ಗಮಿಸಿದರು. 

ಸೇವೆಯಿಂದ ನಿರ್ಗಮಿಸುವ ಸಮಯ ಸಮೀಪಿಸಿದೆ ನಮಸ್ಕರಿಸಲು ಸಮಯ ಸೂಕ್ತವಾಗಿದೆ ಎಂದು ವಿಡಿಯೋ ಕಾನ್ಫರೆನ್ಸ್ ಮೂಲಕ ನಮಸ್ಕರಿಸುತ್ತಿರುವ ವಿಡಿಯೋವನ್ನು ತಮ್ಮ ಟ್ವೀಟರ್ ಖಾತೆಯಲ್ಲಿ ಸಯ್ಯದ್ ಅಕ್ಬರುದ್ದೀನ್ ಪೋಸ್ಟ್ ಮಾಡಿದ್ದಾರೆ. ಸೇವೆಯಿಂದ ನಿರ್ಗಮಿಸುವ ಮುನ್ನ ಒಂದು ಪುಟ್ಟ ಭಿನ್ನಹ ಎಂದು ಗುಟೆರೆಸ್ ಅವರಿಗೆ ಮನವಿ ಮಾಡಿದ್ದಾರೆ. ಭಾರತೀಯ ಸಂಪ್ರದಾಯ ಪ್ರಕಾರ ಯಾರನ್ನಾದರೂ ಭೇಟಿಯಾದಾಗ, ಇಲ್ಲವೇ ಬೀಳ್ಕೊಡುಗೆ ನೀಡುವಾಗ ಹಲೋ, ಷೇಕ್ ಹ್ಯಾಂಡ್ ಬದಲಿಗೆ “ನಮಸ್ತೆ” ಎಂದು ಹೇಳುತ್ತಾರೆ. ಹಾಗಾಗಿ ಈಗ ನಾನು ನಿಮಗೆ ನಮಸ್ತೆ ಎಂದು ಹೇಳಲು ಬಯಸುತ್ತೇನೆ ಎಂದು ಗುಟೆರಸ್ ಅವರಿಗೆ ಸಯ್ಯದ್ ಹೇಳಿದರು. ಇದಕ್ಕೆ ನಗು ಮೊಗದಿಂದಲೇ ಪ್ರತಿಯಾಗಿ ಗುಟೆರೆಸ್ ನಮಸ್ತೆ ಎಂದು ಹೇಳಿ ಶುಭ ಹಾರೈಸಿದರು.

SCROLL FOR NEXT