ವಿದೇಶ

ನೇಪಾಳ ಪ್ರಧಾನಿ ಕೆ.ಪಿ ಶರ್ಮಾ ಓಲಿಗೆ ಮುಖಭಂಗ; ಶೇರ್ ಬಹದ್ದೂರ್ ದೇವುಬಾರನ್ನು ಪ್ರಧಾನಿಯನ್ನಾಗಿ ನೇಮಿಸಲು 'ಸುಪ್ರೀಂ' ಆದೇಶ

Srinivasamurthy VN

ಕಠ್ಮಂಡು: ನೇಪಾಳ ರಾಜಕೀಯ ಬಿಕ್ಕಟ್ಟು ವಿಚಾರದಲ್ಲಿ ನೇಪಾಳ ಪ್ರಧಾನಿ ಕೆ.ಪಿ ಶರ್ಮಾ ಓಲಿಗೆ ಭಾರಿ ಮುಖಭಂಗವಾಗಿದ್ದು, ಶೇರ್ ಬಹದ್ದೂರ್ ದೇವುಬಾ ಅವರನ್ನೇ ಪುನಃ ಪ್ರಧಾನಿಯನ್ನಾಗಿ ನೇಮಿಸುವಂತೆ ನೇಪಾಳ ಸುಪ್ರೀಂ ಕೋರ್ಟ್ ಆದೇಶ ನೀಡಿದೆ.

ಇಂದು ನೇಪಾಳ ಸುಪ್ರೀಂ ಕೋರ್ಟ್ ಈ ಮಹತ್ವದ ಆದೇಶ ಹೊರಡಿಸಿದ್ದು, ಎರಡು ದಿನಗಳಲ್ಲಿ ಶೇರ್ ಬಹದ್ದೂರ್ ದೆವುಬಾ ಅವರನ್ನು ಪ್ರಧಾನಿಯಾಗಿ ನೇಮಕ ಮಾಡುವಂತೆ ಆದೇಶಿಸಿದೆ. ನೇಪಾಳದ ರಾಷ್ಟ್ರಪತಿ ವಿದ್ಯಾ ಭಂಡಾರಿ ಕೆಲ ದಿನಗಳ ಹಿಂದೆಷ್ಟೇ ನೇಪಾಳ ಸಂಸತ್ತನ್ನು ವಿಸರ್ಜಿಸಿದ್ದರು. ರಾಷ್ಟ್ರಪತಿಗಳ  ನಿರ್ಧಾರದ ವಿರುದ್ಧ ಸಲ್ಲಿಸಲಾದ ಅರ್ಜಿಯ ವಿಚಾರಣೆಯ ವೇಳೆ ಸುಪ್ರೀಂ ಕೋರ್ಟ್ ಈ ಆದೇಶ ನೀಡಿದೆ. 

275 ಸದಸ್ಯ ಬಲ ಹೊಂದಿರುವ ಸದನದಲ್ಲಿ ನಡೆದ ವಿಶ್ವಾಸ ಮತಯಾಚನೆಯ ಸಂದರ್ಭದಲ್ಲಿ ಓಲಿ ಸೋಲನ್ನನುಭವಿಸಿದ ನಂತರವೂ ಕೂಡ ಅಲ್ಪಸಂಖ್ಯಾತ ಸರ್ಕಾರವನ್ನು ಮುನ್ನಡೆಸುತ್ತಿದ್ದರು. ಇದೀಗ ಸುಪ್ರೀಂ ಕೋರ್ಟ್‌ನ ಆದೇಶದ ನಂತರ, ಅವರ ಅಧಿಕಾರ ಮತ್ತೆ ಕೈಜಾರಲಿದೆ.

ಐದು ತಿಂಗಳಲ್ಲಿ ಎರಡು ಬಾರಿ ಸಂಸತ್ತಿನ ಕೆಳಮನೆ ವಿಸರ್ಜನೆ
ನೇಪಾಳದ ಹಾಲಿ ಪ್ರಧಾನಿ ಕೆ.ಪಿ.ಶರ್ಮಾ ಓಲಿ ಅವರ ಶಿಫಾರಸ್ಸಿನ ಮೇರೆಗೆ ಅಲ್ಲಿನ ರಾಷ್ಟ್ರಪತಿ ವಿದ್ಯಾ ಭಂಡಾರಿ ಅವರು ಐದು ತಿಂಗಳಲ್ಲಿ ಎರಡು ಬಾರಿ ಸಂಸತ್ತಿನ ಕೆಳಮನೆ ವಿಸರ್ಜಿಸಿದ್ದರು. ಸಂಸತ್ತಿನ ವಿಸರ್ಜನೆಯ ನಂತರ, ನವೆಂಬರ್ 12 ಮತ್ತು 19 ರಂದು ಮಧ್ಯಂತರ ಚುನಾವಣೆಗಳನ್ನು ನಡೆಸುವುದಾಗಿ  ಘೋಷಿಸಲಾಗಿತ್ತು. ಚುನಾವಣೆಗೆ ಸಂಬಂಧಿಸಿದನೆ ಹಾಗೂ ರಾಷ್ಟ್ರಪತಿಗಳ ನಿರ್ಧಾರದ ವಿರುದ್ಧ ನೇಪಾಳದ ಸರ್ವೋಚ್ಛ ನ್ಯಾಯಾಲಯದಲ್ಲಿ ಸುಮಾರು 30 ಅರ್ಜಿಗಳನ್ನು ದಾಖಲಿಸಲಾಗಿದ್ದವು.

ರಾಷ್ಟ್ರಪತಿಗಳ ನಿರ್ಧಾರವನ್ನು ವಿರೋಧಿಸಿ ಅಲ್ಲಿನ ವಿರೋಧ ಪಕ್ಷಗಳ ಒಕ್ಕೂಟದ ಪರವಾಗಿ ಮನವಿ ಸಲ್ಲಿಸಲಾಗಿತ್ತು. ಈ ಅರ್ಜಿಯಲ್ಲಿ, ಸಂಸತ್ತಿನ ಕೆಳಮನೆ ವಿಸರ್ಜಿಸಲು ರಾಷ್ಟ್ರಪತಿಗಳ ಆದೇಶವನ್ನು ರದ್ದುಪಡಿಸಬೇಕು ಮತ್ತು ನೇಪಾಳಿ ಕಾಂಗ್ರೆಸ್ ಅಧ್ಯಕ್ಷ ಶೇರ್ ಬಹದ್ದೂರ್ ದೇವುಬಾ ಅವರನ್ನು ಪುನಃ ಪ್ರಧಾನ ಮಂತ್ರಿಯಾಗಿ ನೇಮಿಸಬೇಕು ಎಂದು ಕೋರಲಾಗಿತ್ತು. ಪ್ರತಿಪಕ್ಷಗಳು ಸಲ್ಲಿಸಿದ್ದ ಈ ಅರ್ಜಿಗೆ 146 ಸಂಸದರು ಸಹಿ ಹಾಕಿದ್ದರು.

SCROLL FOR NEXT