ಕೊಲಂಬೊ: ರಾಜಿನಾಮೆ ನೀಡದೆ ಶ್ರೀಲಂಕಾ ಅಧ್ಯಕ್ಷ ಗೋತಬಯ ರಾಜಪಕ್ಸೆ ಮಾಲ್ಡೀವ್ಸ್ಗೆ ಪಲಾಯನ ಮಾಡಿದ್ದು ಇದರಿಂದ ಆಕ್ರೋಶಗೊಂಡ ಪ್ರತಿಭಟನಾಕಾರರು ರಾಜಧಾನಿಯಲ್ಲಿ ಹಿಂಸಾಚಾರ ಸೃಷ್ಟಿಸಿದ್ದರಿಂದ ಕರ್ಫ್ಯೂ ವಿಧಿಸಲಾಗಿದ್ದು ಇದೀಗ ಆ ಕರ್ಫ್ಯೂವನ್ನು ಅಧಿಕಾರಿಗಳು ಹಿಂತೆಗೆದುಕೊಂಡಿದ್ದಾರೆ.
ರಾಜಿನಾಮೆ ನೀಡುವ ಭರವಸೆ ನೀಡಿದ್ದ 73 ವರ್ಷದ ನಾಯಕ ರಾಜಪಕ್ಸೆ ದೇಶದಿಂದ ಪಲಾಯನ ಮಾಡಿದ ಕೆಲವೇ ಗಂಟೆಗಳ ನಂತರ ಪ್ರಧಾನಿ ರನಿಲ್ ವಿಕ್ರಮಸಿಂಘೆ ಅವರನ್ನು ಹಂಗಾಮಿ ಅಧ್ಯಕ್ಷರನ್ನಾಗಿ ನೇಮಿಸಿದ್ದು ಇದು ರಾಜಕೀಯ ಬಿಕ್ಕಟ್ಟ ಮತ್ತಷ್ಟು ಉಲ್ಬಣಗೊಳ್ಳಲು ಕಾರಣವಾಗಿದ್ದು ಪ್ರತಿಭಟನೆಯ ಹಿಂಸಾಚಾರಕ್ಕೆ ತಿರುಗಲು ಕಾರಣವಾಗಿತ್ತು. ಪ್ರಧಾನಿ ಕಚೇರಿಯಲ್ಲಿ ಮತ್ತು ಸಂಸತ್ತಿನ ಮುಖ್ಯ ಪ್ರವೇಶ ಜಂಕ್ಷನ್ನಲ್ಲಿ ಪ್ರತಿಭಟನಾಕಾರರು ಭದ್ರತಾ ಪಡೆಗಳೊಂದಿಗೆ ಘರ್ಷಣೆಯಲ್ಲಿ ಕನಿಷ್ಠ 84 ಜನರು ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಾಗಿದೆ.
ಈ ಮಧ್ಯೆ ಮಾಲ್ಡೀವ್ಸ್ನಲ್ಲಿ ಠಿಕಾಣಿ ಹೂಡಿರುವ ಗೋತಬಯ ರಾಜಪಕ್ಸೆ ಭದ್ರತಾ ಕಾರಣಗಳಿಂದ ಮಾಲೆಯಿಂದ ಸಿಂಗಾಪುರಕ್ಕೆ ನಿಗದಿತ ಸಿಂಗಾಪುರ್ ಏರ್ಲೈನ್ಸ್ ವಿಮಾನವನ್ನು ಹತ್ತಲು ಸಾಧ್ಯವಾಗಲಿಲ್ಲ. ಹೀಗಾಗಿ ಖಾಸಗಿ ವಿಮಾನದಲ್ಲಿ ಪ್ರಯಾಣಿಸಲು ಕಾಯುತ್ತಿದ್ದಾರೆ ಎಂದು ಗುರುವಾರ ಮಾಧ್ಯಮ ವರದಿ ಮಾಡಿದೆ.
ಇದನ್ನೂ ಓದಿ: ಪರಿಸ್ಥಿತಿ ನಿಯಂತ್ರಣಕ್ಕೆ ತನ್ನಿ: ಭದ್ರತಾ ಪಡೆಗಳಿಗೆ ಹಂಗಾಮಿ ಅಧ್ಯಕ್ಷ ವಿಕ್ರಮಸಿಂಘೆ ಆದೇಶ; ಸಿಂಗಾಪುರಕ್ಕೆ ಗೋಟಬಯ ಪ್ರಯಾಣ
ಇನ್ನು ಇಕ್ಕಟ್ಟಿಗೆ ಸಿಲುಕಿರುವ ಶ್ರೀಲಂಕಾ ಅಧ್ಯಕ್ಷರಿಗೆ ಮಾಲ್ಡೀವ್ಸ್ನಿಂದ ಸಿಂಗಾಪುರಕ್ಕೆ ತೆರಳಲು ಖಾಸಗಿ ವಿಮಾನವನ್ನು ಪಡೆಯಲು ಈಗ ಮಾತುಕತೆ ನಡೆಯುತ್ತಿದೆ ಎಂದು ಮಾಧ್ಯಮವೊಂದು ಹೇಳಿದೆ.
ಏತನ್ಮಧ್ಯೆ, ಅಧ್ಯಕ್ಷ ರಾಜಪಕ್ಸೆ ಅವರಿಂದ ರಾಜೀನಾಮೆ ಪತ್ರವನ್ನು ಇನ್ನೂ ಸ್ವೀಕರಿಸಿಲ್ಲ ಎಂದು ಸಂಸತ್ತಿನ ಸ್ಪೀಕರ್ ಮಹಿಂದ ಯಾಪಾ ಅಬೇವರ್ಧನ ಹೇಳಿದರು.
22 ಮಿಲಿಯನ್ ಜನರಿರುವ ಶ್ರೀಲಂಕಾ ಭೀಕರ ಆರ್ಥಿಕ ಪ್ರಕ್ಷುಬ್ಧತೆಯಲ್ಲಿದೆ. ಏಳು ದಶಕಗಳಲ್ಲೇ ಇದು ಅತ್ಯಂತ ಕೆಟ್ಟ ಪರಿಸ್ಥಿತಿಯಾಗಿದ್ದು ಲಕ್ಷಾಂತರ ಜನರು ಆಹಾರ, ಔಷಧ, ಇಂಧನ ಮತ್ತು ಇತರ ಅಗತ್ಯ ವಸ್ತುಗಳನ್ನು ಖರೀದಿಸಲು ಹೆಣಗಾಡುತ್ತಿದ್ದಾರೆ.
ಕಳೆದ ವಾರ, ಪ್ರಧಾನಿ ವಿಕ್ರಮಸಿಂಘೆ ಅವರು ಶ್ರೀಲಂಕಾ ಈಗ ದಿವಾಳಿಯಾದ ದೇಶವಾಗಿದೆ ಎಂದು ಘೋಷಿಸಿದ್ದರು.