ವಿದೇಶ

ಸುಡಾನ್ ಬಿಕ್ಕಟ್ಟು: ಭಾರತೀಯರು ಸೇರಿದಂತೆ 150 ಜನರನ್ನು ಸುರಕ್ಷಿತವಾಗಿ ಕರೆತಂದ ಸೌದಿ ಅರೇಬಿಯಾ

Manjula VN

ಖಾರ್ಟೂಮ್ (ಸೂಡಾನ್): ಸೂಡಾನ್ ನ ಮಿಲಿಟರಿ ಮತ್ತು ಮುಖ್ಯ ಪ್ಯಾರಾ ಮಿಲಿಟರಿ ಪಡೆಯ ನಡುವೆ ಉಂಟಾದ ಸಂಘರ್ಷದಲ್ಲಿ ಸಿಲುಕಿಕೊಂಡಿರುವ ವಿದೇಶಿಗರ ರಕ್ಷಣೆ ಪ್ರಾರಂಭಿಸಲಾಗಿದ್ದು, ಭಾರತ ಸೇರಿದಂತೆ ಇತರ ದೇಶಗಳ ಸುಮಾರು 150ಕ್ಕೂ ಹೆಚ್ಚು ಜನರನ್ನು ಸುಡಾನ್‌ನಿಂದ ಕರೆತರಲಾಗಿದೆ ಎಂದು ಸೌದಿ ಅರೇಬಿಯಾ ಹೇಳಿದೆ.

ಸೇನೆ ಹಾಗೂ ಅರೆಸೇನೆ ಸಂಘರ್ಷದಲ್ಲಿ ಸುಡಾನ್‌ನಲ್ಲಿರುವ ಜನರು ಭಯಭೀತರಾಗಿದ್ದಾರೆ. ಈ ಸಂದರ್ಭದಲ್ಲಿ ಭಾರತ ಸೇರಿದಂತೆ ವಿವಿಧ ದೇಶಗಳ ಜನರು ತಮ್ಮ ದೇಶಗಳಿಗೆ ಹಿಂತಿರುಗಲು ಪ್ರಯತ್ನಿಸುತ್ತಿದ್ದಾರೆ. ಇದೀಗ ಸಂಘರ್ಷ ಪೀಡಿತ ಸುಡಾನ್‌ನಿಂದ ವಿದೇಶಿ ರಾಜತಾಂತ್ರಿಕರು, ಅಧಿಕಾರಿಗಳು ಸೇರಿದಂತೆ 150ಕ್ಕೂ ಅಧಿಕ ಜನರನ್ನು ಸುಡಾನ್‌ನಿಂದ ರಕ್ಷಿಸಲಾಗಿದೆ ಹಾಗೂ ಎಲ್ಲರನ್ನೂ ಜೆಡ್ಡಾಗೆ ಕರೆತರಲಾಗಿದೆ ಎಂದು ಸೌದಿ ವಿದೇಶಾಂಗ ಸಚಿವಾಲಯ ತಿಳಿಸಿದೆ.

ಸೈನ್ಯದ ಇತರ ಶಾಖೆಗಳ ಬೆಂಬಲದೊಂದಿಗೆ ಸೌದಿ ಅರೇಬಿಯಾದ ನೌಕಾಪಡೆಗಳು ನಾಗರಿಕರನ್ನು ಸ್ಥಳಾಂತರಗೊಳಿಸುವ ಕಾರ್ಯವನ್ನು ಮಾಡಿದೆ. ಅದರಲ್ಲಿ 91 ಸೌದಿಯ ನಾಗರಿಕರು ಆಗಮಿಸಿದ್ದು, ಭಾರತ ಸೇರಿದಂತೆ 12 ದೇಶಗಳ ಸುಮಾರು 66 ಪ್ರಜೆಗಳನ್ನೂ ಸುರಕ್ಷಿತವಾಗಿ ಕರೆತರಲಾಗಿದೆ.

ಕುವೈತ್, ಕತಾರ್, ಯುನೈಟೆಡ್ ಅರಬ್ ಎಮಿರೇಟ್ಸ್, ಈಜಿಪ್ಟ್, ಟುನೀಶಿಯಾ, ಪಾಕಿಸ್ತಾನ, ಬಲ್ಗೇರಿಯಾ, ಬಾಂಗ್ಲಾದೇಶ, ಫಿಲಿಪೈನ್, ಕೆನಡಾ ಹಾಗೂ ಬುರ್ಕಿನಾ ಫಾಸೋದ ನಾಗರಿಕರನ್ನು ಕೂಡಾ ಸ್ಥಳಾಂತರಿಸಲಾಗಿದೆ ಎಂದು ಹೇಳಿದೆ.

ಸುಡಾನ್ ರಾಜಧಾನಿ ಖಾಟೂಮ್ ಸೇರಿದಂತೆ ಹಲವು ನಗರಗಳಲ್ಲಿ ಗುಂಡಿನ ದಾಳಿ ಸೇರಿದಂತೆ ಭೀಕರ ಯುದ್ಧವೇ ನಡೆದಿದೆ. ಮೊದಲು ಖಾರ್ಟೂಮ್‌ನಿಂದ ಪ್ರಾರಂಭವಾದ ಕಾದಾಟ ಈಗ ಇಡೀ ದೇಶವನ್ನೇ ವ್ಯಾಪಿಸಿದೆ. ಇದೀಗ ಅಲ್ಲಿ ಆಹಾರ ಹಾಗೂ ವಿದ್ಯುತ್ ಕೊರತೆಯನ್ನು ಅಲ್ಲಿನ ಜನರು ಎದುರಿಸುತ್ತಿದ್ದಾರೆ. ಮಾತ್ರವಲ್ಲದೇ ಅನಿರೀಕ್ಷಿತ ಗುಂಡಿನ ದಾಳಿಯಿಂದಾಗಿ ನೂರಾರು ಜನರು ಸಾವನ್ನಪ್ಪಿದ್ದಾರೆ.

SCROLL FOR NEXT