ದುಬೈ: ಜಾಗತಿಕ ಇಂಗಾಲದ ಹೊರಸೂಸುವಿಕೆಯನ್ನು ಗಣನೀಯ ಪ್ರಮಾಣದಲ್ಲಿ ಕಡಿಮೆ ಮಾಡುವುದರತ್ತ ಕಾರ್ಯನಿರ್ವಹಿಸಲು ಪ್ರಧಾನಿ ನರೇಂದ್ರ ಮೋದಿ ಎಲ್ಲಾ ದೇಶಗಳಿಗೂ ಕರೆ ನೀಡಿದ್ದಾರೆ.
ದುಬೈ ನಲ್ಲಿ ನಡೆದ ಸಿಒಪಿ28 ಶೃಂಗಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಕಡಿಮೆ ಜನಸಂಖ್ಯೆಯನ್ನು ಹೊಂದಿರುವ ದೇಶಗಳಿಗೆ ಹೋಲಿಕೆ ಮಾಡಿದರೆ ಜಗತ್ತಿನ ಶೇ.17 ರಷ್ಟು ಜನಸಂಖ್ಯೆ ಹೊಂದಿರುವ ಭಾರತ ಜಾಗತಿಕ ಇಂಗಾಲದ ಹೊರಸೂಸುವಿಕೆಗೆ ಶೇ.4ಕ್ಕಿಂತ ಕಡಿಮೆ ಕೊಡುಗೆ ನೀಡುತ್ತಿದೆ. ಭಾರತ ಎನ್ ಡಿಸಿ ಟಾರ್ಗೆಟ್ ಗಳನ್ನು ಸಾಧಿಸುವಲ್ಲಿ ವೇಗವಾಗಿ ಸಾಗುತ್ತಿದೆ ಎಂದರು.
ಇದನ್ನೂ ಓದಿ: ಸಿಒಪಿ-28 ಶೃಂಗಸಭೆ: ದುಬೈ ತಲುಪಿದ ಪ್ರಧಾನಿ ಮೋದಿ, ಹವಾಮಾನ ಬದಲಾವಣೆ ತಗ್ಗಿಸುವ ಬಗ್ಗೆ ವಿಶ್ವನಾಯಕರೊಂದಿಗೆ ಚರ್ಚೆ
2028 ರಲ್ಲಿ ಭಾರತ ಸಿಒಪಿ33 ಆತಿಥ್ಯ ವಹಿಸಲು ಬಯಸುತ್ತದೆ ಎಂದು ಅವರು ಹೇಳಿದ್ದಾರೆ. ನಾವು ಪಳೆಯುಳಿಕೆಯಲ್ಲದ ಇಂಧನಕ್ಕೆ ಸಂಬಂಧಿಸಿದ ಗುರಿಗಳನ್ನು ಗಡುವಿನ 9 ವರ್ಷಗಳ ಮೊದಲೇ ತಲುಪಿದ್ದೇವೆ.
ಜಾಗತಿಕ ತಾಪಮಾನ ಏರಿಕೆಯನ್ನು 1.5 ಡಿಗ್ರಿ ಸೆಲ್ಸಿಯಸ್ಗೆ ಸೀಮಿತಗೊಳಿಸುವ ರಾಷ್ಟ್ರೀಯ ಯೋಜನೆಗಳು ಅಥವಾ ಹವಾಮಾನ ಬದಲಾವಣೆಯ ಪರಿಣಾಮಗಳನ್ನು ತಪ್ಪಿಸಲು ರಾಷ್ಟ್ರೀಯವಾಗಿ ನಿರ್ಧರಿಸಿದ ಕೊಡುಗೆಗಳನ್ನು ಸಾಧಿಸುವ ಹಾದಿಯಲ್ಲಿರುವ ವಿಶ್ವದ ಕೆಲವೇ ದೇಶಗಳಲ್ಲಿ ಭಾರತವೂ ಒಂದಾಗಿದೆ. ಇದೇ ವೇಳೆ ಪ್ರಧಾನಿ ಮೋದಿ ಜನರ ಸಹಭಾಗಿತ್ವದ ಮೂಲಕ, ವಾತಾವರಣದಲ್ಲಿ ಇಂಗಾಲವನ್ನು ಹೀರಿಕೊಳ್ಳುವ ಕಾರ್ಬನ್ ಸಿಂಕ್ ಗಳನ್ನು ಸೃಷ್ಟಿಸುವುದರತ್ತ ಗಮನ ಹರಿಸಲು ಗ್ರೀನ್ ಕ್ರೆಡಿಟ್ ಉಪಕ್ರಮವನ್ನು ಘೋಷಿಸಿದ್ದಾರೆ.