ಕೊಲಂಬೊ: ಶ್ರೀಲಂಕಾ ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಅವರು ಮುಂದಿನ ವಾರ ಭಾರತಕ್ಕೆ ಭೇಟಿ ನೀಡುತ್ತಿದ್ದು, ಅವರು ಅಧಿಕಾರಕ್ಕೆ ಬಂದ ನಂತರ ಕೈಗೊಳ್ಳುತ್ತಿರುವ ಮೊದಲ ಅಂತರರಾಷ್ಟ್ರೀಯ ಪ್ರವಾಸ ಇದಾಗಿದೆ. ದಿಸ್ಸಾನಾಯಕ ಅವರ ಭೇಟಿಯಿಂದ ಭಾರತ ಮತ್ತು ಶ್ರೀಲಂಕಾ ನಡುವಿನ ಸಂಬಂಧ ಇನ್ನಷ್ಟು ಗಟ್ಟಿಗೊಳ್ಳಲಿದೆ ಎಂದು ಪರಿಗಣಿಸಲಾಗಿದೆ.
ಅಧ್ಯಕ್ಷ ದಿಸ್ಸಾನಾಯಕೆ ಅವರು ಡಿಸೆಂಬರ್ 15 ರಿಂದ 17 ರವರೆಗೆ ಭಾರತ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ಶ್ರೀಲಂಕಾದ ಕ್ಯಾಬಿನೆಟ್ ವಕ್ತಾರ ಡಾ ನಳಿಂದಾ ಜಯತಿಸ್ಸಾ ಅವರು ತಿಳಿಸಿದ್ದಾರೆ.
ಭಾರತ ಭೇಟಿಯ ವೇಳೆ ಅಧ್ಯಕ್ಷ ದಿಸ್ಸಾನಾಯಕೆ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಲಿದ್ದಾರೆ ಎಂದು ಸಂಪುಟದ ವಕ್ತಾರ ನಳಿಂದಾ ಜಯತಿಸ್ಸ ಅವರು ಮಂಗಳವಾರ ಹೇಳಿದ್ದಾರೆ.
ಶ್ರೀಲಂಕಾ ಅಧ್ಯಕ್ಷರ ಜೊತೆ ವಿದೇಶಾಂಗ ಸಚಿವ ವಿಜಿತ ಹೆರಾತ್ ಮತ್ತು ಹಣಕಾಸು ಖಾತೆ ಉಪ ಸಚಿವ ಅನಿಲ್ ಜಯಂತ ಫೆರ್ನಾಂಡೋ ಇರಲಿದ್ದಾರೆ ಎಂದು ಆರೋಗ್ಯ ಸಚಿವ ಜಯತಿಸ್ಸಾ ಅವರು ತಿಳಿಸಿದ್ದಾರೆ.
ದಿಸ್ಸಾನಾಯಕೆ ಅವರು ಶ್ರೀಲಂಕಾ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಕೊಲಂಬೊಗೆ ಭೇಟಿ ನೀಡಿದ್ದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು, ನವದೆಹಲಿಗೆ ಭೇಟಿ ನೀಡುವಂತೆ ಆಹ್ವಾನವನ್ನು ನೀಡಿದ್ದರು.