ನವದೆಹಲಿ: ಭಾರತದ 8 ನೌಕಾಪಡೆ ಯೋಧರ ಪರವಾಗಿ ಕತಾರ್ ನ ಕ್ಯಾಸೇಶನ್ ಕೋರ್ಟ್ ನಲ್ಲಿ ಕಾನೂನು ತಂಡ ಮನವಿ ಸಲ್ಲಿಸಿದೆ.
ಕತಾರ್ ನಲ್ಲಿ ಬೇಹುಗಾರಿಕೆ ಆರೋಪದಡಿ ಬಂಧನಕ್ಕೆ ಒಳಗಾಗಿ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ 8 ಮಂದಿ ಭಾರತೀಯರಿಗೆ ಡಿ.28 ರಂದು ಶಿಕ್ಷೆಯನ್ನು ಬದಲಿಸಿ ಜೀವಾವಧಿಸಿ ಶಿಕ್ಷೆ ವಿಧಿಸಿ ಆದೇಶ ಹೊರಡಿಸಲಾಗಿತ್ತು. ಈ ಆದೇಶದ ಬಳಿಕ ನೌಕಾಪಡೆ ಯೋಧರ ಪರವಾಗಿ ಮೊದಲ ಮನವಿ ಸಲ್ಲಿಸಲಾಗಿದೆ.
"ಕೆಲವು ವಾರಗಳ ಕಾಲ ದೋಹಾದಲ್ಲಿದ್ದ ಯೋಧರ ಕುಟುಂಬ ಸದಸ್ಯರು, ಡಿಸೆಂಬರ್ 28 ರಂದು ಕೊನೆಯ ಮನವಿಯ ವಿಚಾರಣೆಗೆ ಮುಂಚಿತವಾಗಿ, ಕ್ಯಾಸೇಶನ್ ನ್ಯಾಯಾಲಯದಲ್ಲಿ ಸಲ್ಲಿಸಲಾದ ಮೇಲ್ಮನವಿ ಪತ್ರಗಳಿಗೆ ಸಹಿ ಹಾಕಿದರು.
ಕುಟುಂಬದ ಬಹುತೇಕ ಸದಸ್ಯರು ಈಗ ಭಾರತಕ್ಕೆ ಮರಳಿದ್ದಾರೆ. ಮರಣದಂಡನೆಯನ್ನು ರದ್ದುಗೊಳಿಸಲಾಗಿದ್ದರೂ ಸಹ, 8 ನೌಕಾ ಯೋಧರಿಗೆ - ಮೂರು ವರ್ಷದಿಂದ (ನೌಕಾಪಡೆ ಯೋಧ ರಾಗೇಶ್ ಅವರಿಗೆ ನೀಡಲಾದ ಶಿಕ್ಷೆ) 25 ವರ್ಷಗಳವರೆಗೆ ವಿವಿಧ ಹಂತಗಳಲ್ಲಿ ಜೈಲು ಶಿಕ್ಷೆಯನ್ನು ನೀಡಲಾಗಿದೆ" ಎಂದು ಮೂಲವೊಂದು ತಿಳಿಸಿದೆ. ಪ್ರತಿಯೊಬ್ಬರ ವಿರುದ್ಧವೂ ಒಂದೇ ರೀತಿಯ ಆರೋಪಗಳನ್ನು ಹೊರಿಸಲಾಗಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಭಾರತೀಯ ನೌಕಾಪಡೆ ಅಧಿಕಾರಿಗಳಿಗೆ ಕತಾರ್ ನಲ್ಲಿ ಶಿಕ್ಷೆ: ಆದೇಶ ಪರಿಶೀಲಿಸಿ ಕಾನೂನು ತಂಡದ ಜೊತೆ ಚರ್ಚೆ- ಕೇಂದ್ರ ಸರ್ಕಾರ
ಹಾಗಾದರೆ ಮುಂದೆ ಏನಾಗಲಿದೆ ಎಂದರೆ? ಈ ಕುರಿತ ವಿಷಯ ತಜ್ಞರ ಪ್ರಕಾರ, 8 ಯೋಧರಿಗೆ ಮತ್ತೊಂದು ಶಿಕ್ಷೆ ಘೋಷಣೆ ಮಾಡುವ ಮೊದಲು ಮೇಲ್ಮನವಿಯನ್ನು ಕ್ಯಾಸೇಶನ್ ನ್ಯಾಯಾಲಯದಲ್ಲಿ ವಿಚಾರಣೆ ಮಾಡಲಾಗುತ್ತದೆ. ಬಂಧಿತರ ಸುರಕ್ಷಿತ ವಾಪಸಾತಿ ಎಲ್ಲರೂ ಆಶಿಸುತ್ತಿದ್ದಾರೆ.
ಕೆಲವು ನ್ಯಾಯಾಂಗ ವ್ಯವಸ್ಥೆಗಳಲ್ಲಿ ಕ್ಯಾಸೇಶನ್ ನ್ಯಾಯಾಲಯ ಮೇಲ್ಮನವಿ ಸಲ್ಲಿಸಲು ಇರುವ ಅತ್ಯುನ್ನತ ನ್ಯಾಯಾಲಯವಾಗಿದೆ. ಕ್ಯಾಸೇಶನ್ ನ್ಯಾಯಾಲಯಗಳು ಪ್ರಕರಣದ ಸತ್ಯಗಳನ್ನು ಮರು-ಪರಿಶೀಲಿಸುವುದಿಲ್ಲ, ಅವು ಸಂಬಂಧಿತ ಕಾನೂನನ್ನು ಮಾತ್ರ ಅರ್ಥೈಸುತ್ತವೆ.
ಕ್ಯಾಪ್ಟನ್ ನವತೇಜ್ ಸಿಂಗ್ ಗಿಲ್, ಕ್ಯಾಪ್ಟನ್ ಸೌರಭ್ ವಶಿಷ್ಟ್, ಕಮಾಂಡರ್ ಪೂರ್ಣೇಂದು ತಿವಾರ್, ಕ್ಯಾಪ್ಟನ್ ಬೀರೇಂದ್ರ ಕುಮಾರ್ ವರ್ಮಾ, ಕಮಾಂಡರ್ ಸುಗುಣಾಕರ್ ಪಕಾಲಾ, ಕಮಾಂಡರ್ ಸಂಜೀವ್ ಗುಪ್ತಾ ಮತ್ತು ಕಮಾಂಡರ್ ಸಂಜೀವ್ ಗುಪ್ತಾ. ಆಗಸ್ಟ್ 30, 2022 ರಿಂದ ಕತಾರ್ನಲ್ಲಿ ಬಂಧನದಲ್ಲಿರುವ ಎಂಟು ನೌಕಾ ಯೋಧರಾಗಿದ್ದಾರೆ.