ಇಸ್ಲಾಮಾಬಾದ್: ಭಾರತದ ವಿರುದ್ಧ ಮತ್ತೆ ವಿಷಕಾರಿರುವ ಪಾಕಿಸ್ತಾನ ಸೇನಾ ಮುಖ್ಯಸ್ತ ಆಸಿಮ್ ಮುನೀರ್ (Asim Munir) ಕಾಶ್ಮೀರದ ವಿಚಾರವಾಗಿ ಮತ್ತೆ ತಮ್ಮ ನಾಲಿಗೆ ಹರಿಬಿಟ್ಟಿದ್ದಾರೆ.
ಶನಿವಾರ ಕರಾಚಿಯ ಪಾಕಿಸ್ತಾನ ನೌಕಾ ಅಕಾಡೆಮಿಯಲ್ಲಿ ನಡೆದ ಪಾಸಿಂಗ್ ಔಟ್ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಪಾಕಿಸ್ತಾನ ಸೇನಾ ಮುಖ್ಯಸ್ಥ ಆಸಿಮ್ ಮುನೀರ್ (Asim Munir), 'ಜಮ್ಮು ಮತ್ತು ಕಾಶ್ಮೀರದಲ್ಲಿ ಯಾವುದನ್ನು ಭಯೋತ್ಪಾನೆ ಎಂದು ಲೇಬಲ್ ಮಾಡಲಾಗುತ್ತಿದೆಯೋ ಅದು ಭಯೋತ್ಪಾದನೆಯಲ್ಲ. ಬದಲಿಗೆ ಸ್ವಾತಂತ್ರ್ಯಕ್ಕಾಗಿ ನಡೆಯುತ್ತಿರುವ 'ಕಾನೂನುಬದ್ಧ ಹೋರಾಟ'ವಾಗಿದೆ ಎಂದು ಹೇಳಿದ್ದಾರೆ.
'ಪಾಕಿಸ್ತಾನ ಯಾವಾಗಲೂ ಕಾಶ್ಮೀರಿಗಳೊಂದಿಗೆ ನಿಂತಿದ್ದು, ಅದನ್ನು ಮುಂದುವರಿಸುತ್ತದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತ ಭಯೋತ್ಪಾದನೆ ಎಂದು ಕರೆಯುವುದು ವಾಸ್ತವವಾಗಿ ಅಂತರರಾಷ್ಟ್ರೀಯ ಕಾನೂನಿನಡಿಯಲ್ಲಿ ಗುರುತಿಸಲ್ಪಟ್ಟ ಸಂಘರ್ಷವಾಗಿದೆ. ಕಾಶ್ಮೀರಿಗಳ ಚಲನವಲನಗಳನ್ನು ನಿಗ್ರಹಿಸಲು ಬಯಸುವವರ ಕ್ರಮಗಳಿಂದಾಗಿ ಈ ವಿಷಯವು ಹೆಚ್ಚು ಪ್ರಸ್ತುತವಾಗಿದೆ.
ವಿಶ್ವಸಂಸ್ಥೆಯ (ಯುಎನ್) ನಿರ್ಣಯಗಳು ಮತ್ತು ಕಾಶ್ಮೀರಿಗಳ ಆಕಾಂಕ್ಷೆಗಳಿಗೆ ಅನುಗುಣವಾಗಿ ಸಮಾನ ಶಾಂತಿಯಿಂದ ಕಾಶ್ಮೀರ ಸಮಸ್ಯೆಯನ್ನು ಪರಿಹರಿಸಲು ಪಾಕಿಸ್ತಾನ ಬಯಸುತ್ತದೆ ಎಂದು ಹೇಳಿದ್ದಾರೆ.
ಭಾರತ ದಾಳಿ ಮಾಡಿದ್ರೆ ಸೂಕ್ತ ಪ್ರತ್ಯುತ್ತರ
ಇದೇ ವೇಳೆ, ಭವಿಷ್ಯದಲ್ಲಿ ಭಾರತ ನಮ್ಮ ಮೇಲೆ ದಾಳಿ ಮಾಡಿದರೆ, ಅದಕ್ಕೆ 'ಸೂಕ್ತ' ಉತ್ತರ ನೀಡಲಾಗುವುದು ಎಂದು ಹೇಳಿದ ಮುನೀರ್, 'ಭವಿಷ್ಯದಲ್ಲಿ ಭಾರತ ಪಾಕಿಸ್ತಾನದ ಮೇಲೆ ಯಾವುದೇ ರೀತಿಯಲ್ಲಿ ದಾಳಿ ಮಾಡಿದರೆ, ಅದಕ್ಕೆ ನಿಖರವಾದ ಮತ್ತು ತ್ವರಿತ ಪ್ರತಿಕ್ರಿಯೆ ನೀಡಲಾಗುವುದು. ಪಾಕಿಸ್ತಾನವು ಇದನ್ನು ಮೊದಲು ಎರಡು ಬಾರಿ ಮಾಡಿದೆ. ಮೊದಲನೆಯದು 2019 ರಲ್ಲಿ, ಬಾಲಕೋಟ್ ವಾಯುದಾಳಿಯನ್ನು ವಿಫಲಗೊಳಿಸಿದಾಗ ಮತ್ತು ಎರಡನೆಯದಾಗಿ ಇತ್ತೀಚಿನ ಆಪರೇಷನ್ ಸಿಂಧೂರ್' ನಲ್ಲಿ ಎಂದರು.
ತಮ್ಮ ಭಾಷಣದಲ್ಲಿ, ಅಸಿಮ್ ಮುನಿರ್ ಪಾಕಿಸ್ತಾನವನ್ನು 'ನಿವ್ವಳ ಪ್ರಾದೇಶಿಕ ಸ್ಥಿರಕಾರಿ' (net region stabiliser) ದೇಶ ಎಂದು ಬಣ್ಣಿಸಿದರು. ಪ್ರಚೋದನೆಯ ಹೊರತಾಗಿಯೂ, ಪಾಕಿಸ್ತಾನವು ಪ್ರಾದೇಶಿಕ ಶಾಂತಿಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ಪಾಕಿಸ್ತಾನ ತನ್ನ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಸಂಯಮವನ್ನು ಪ್ರದರ್ಶಿಸಿತು ಎಂದು ಹೇಳಿದರು.
ಭಾರತದ ಪ್ರತಿಕ್ರಿಯೆ ಏನು?
ಜಮ್ಮು ಮತ್ತು ಕಾಶ್ಮೀರ ಮತ್ತು ಭಯೋತ್ಪಾದನೆಯ ವಿರುದ್ಧ ಭಾರತ ಈಗಾಗಲೇ ಜಗತ್ತಿಗೆ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ. ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಭಾರತದ ಅವಿಭಾಜ್ಯ ಅಂಗವಾಗಿ ಉಳಿಯುತ್ತವೆ ಎಂದು ಭಾರತ ಸ್ಪಷ್ಟವಾಗಿ ಹೇಳಿದೆ. ಭಾರತ ಭಯೋತ್ಪಾದನೆಯನ್ನು ಸಹಿಸುವುದಿಲ್ಲ ಮತ್ತು ಕಣಿವೆಯಲ್ಲಿ ಅದನ್ನು ಹರಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತನ್ನ ನಡೆಗಳ ಮೂಲಕ ಜಾಗತಿಕ ಸಮುದಾಯಕ್ಕೆ ಸ್ಪಷ್ಟಪಡಿಸಿದೆ.