ನವದೆಹಲಿ: ಪಾಕಿಸ್ತಾನ ಜೊತೆಗಿನ ಬಿಕ್ಕಟ್ಟಿನ ನಡುವೆ ಗಡಿಯಾಚೆಗಿನ ಭಯೋತ್ಪಾದನೆಯನ್ನು ಎದುರಿಸಲು ಭಾರತದ ಹೊಸ ವಿಧಾನವನ್ನು ತಿಳಿಸಲು ಭಾರತೀಯ ಸಂಸದರ ಸರ್ವಪಕ್ಷ ನಿಯೋಗಗಳು ಭಾನುವಾರ ವಿವಿಧ ರಾಷ್ಟ್ರಗಳ ನಾಯಕರನ್ನು ಭೇಟಿಯಾದವು.
ಅಮೆರಿಕ, ಬಹ್ರೇನ್, ಕತಾರ್, ದಕ್ಷಿಣ ಕೊರಿಯಾ ಮತ್ತು ಸ್ಲೋವೇನಿಯಾ ನಾಯಕರನ್ನು ಭೇಟಿಯಾದ ಭಾರತೀಯ ನಿಯೋಗಗಳು, ಭಾರತದ ಸಂದೇಶ ಕುರಿತು ತಮ್ಮ ಸಹವರ್ತಿಗಳಿಗೆ ತಿಳಿಸಿದರು.ಶಿಕ್ಷೆಯಾಗದೆ ಭಯೋತ್ಪಾದನೆ ಹೋಗಲ್ಲ. ಹಿಂಸೆ ಜೊತೆಗಿನ ಮಾತುಕತೆಯಿಂದ ಜೊತೆಗೂಡಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದಾರೆ.
ಪಾಕಿಸ್ತಾನದಿಂದ ಗಡಿಯಾಚೆಗಿನ ಭಯೋತ್ಪಾದನೆಯನ್ನು ಎದುರಿಸಲು ಭಾರತವು ಈಗ ಹೊಸ ವಿಧಾನವನ್ನು ಹೊಂದಿದೆ ಮತ್ತು ಅಂತಹ ಅಪರಾಧಗಳಲ್ಲಿ ಭಾಗಿಯಾಗಿರುವವರಿಗೆ ಶಿಕ್ಷೆಯಾಗದೆ ಭಯೋತ್ಪಾದನೆ ನಿರ್ಮೂಲನೆ ಆಗಲ್ಲ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಹೇಳಿದ್ದಾರೆ.
ಗಯಾನಾಕ್ಕೆ ತೆರಳುವ ಮುನ್ನಾ ನ್ಯೂಯಾರ್ಕ್ನಲ್ಲಿ ನಡೆದ ಸಮುದಾಯದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಶಶಿ ತರೂರ್ ಈ ಹೇಳಿಕೆ ನೀಡಿದರು. ಇದಕ್ಕೂ ಮುನ್ನಾ ಸರ್ವ ಪಕ್ಷ ನಿಯೋಗದ ಸದಸ್ಯರು 9/11 ಭಯೋತ್ಪಾದಕ ದಾಳಿಯ ರಾಷ್ಟ್ರೀಯ ಸ್ಮಾರಕದಲ್ಲಿ ಗೌರವ ಸಲ್ಲಿಸಿದರು.
ಬಹ್ರೇನ್ಗೆ ತೆರಳಿದ ಸರ್ವಪಕ್ಷದ ಭಾರತೀಯ ಸಂಸದೀಯ ನಿಯೋಗ, ಭಾನುವಾರ ಬಹ್ರೇನ್ನ ಉಪ ಪ್ರಧಾನ ಮಂತ್ರಿ ಶೇಖ್ ಖಾಲಿದ್ ಬಿನ್ ಅಬ್ದುಲ್ಲಾ ಅಲ್ ಖಲೀಫಾ ಅವರಿಗೆ ಭಾರತ ಎದುರಿಸುತ್ತಿರುವ ಗಡಿಯಾಚೆಗಿನ ಭಯೋತ್ಪಾದನೆಯ ಸವಾಲು ಮತ್ತು ಅದನ್ನು ಎದುರಿಸಲು ಭಾರತದ ದೃಢ ಸಂಕಲ್ಪವನ್ನು ವಿವರಿಸಿತು.
ಏಪ್ರಿಲ್ 22 ರಂದು 26 ಜನರು ಸಾವನ್ನಪ್ಪಿದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಭಾರತದ ಶೂನ್ಯ ಸಹಿಷ್ಣುತೆಯ ನೀತಿಯ ಬಗ್ಗೆ ಪ್ರತ್ಯೇಕ ಭಾರತೀಯ ನಿಯೋಗಗಳು ದಕ್ಷಿಣ ಕೊರಿಯಾ ಮತ್ತು ಸ್ಲೊವೇನಿಯಾದ ರಾಜಕೀಯ ನಾಯಕರಿಗೆ ವಿವರಿಸಿದರು.
ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ಸರ್ವಪಕ್ಷ ನಿಯೋಗಗಳ ಪ್ರಯತ್ನಗಳನ್ನು ಶ್ಲಾಘಿಸಿದ್ದು, ಭಯೋತ್ಪಾದನೆಗೆ ಶೂನ್ಯ ಸಹಿಷ್ಣುತೆಯನ್ನು ಘೋಷಿಸುವಲ್ಲಿ ಭಾರತವು ಒಟ್ಟಾಗಿ ನಿಂತಿದೆ ಎಂದು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಫೋಸ್ಟ್ ಮಾಡಿದ್ದಾರೆ.
ನ್ಯೂಯಾರ್ಕ್ನಲ್ಲಿ ಶನಿವಾರ ನಡೆದ ಸಂವಾದದಲ್ಲಿ ಮಾತನಾಡಿದ ತರೂರ್, ಪಾಕಿಸ್ತಾನಕ್ಕೆ ಭಾರತದ ಸಂದೇಶವು ಸ್ಪಷ್ಟವಾಗಿದೆ: "ನಾವು ಏನನ್ನೂ ಪ್ರಾರಂಭಿಸಲು ಬಯಸುವುದಿಲ್ಲ. ನಾವು ಕೇವಲ ಭಯೋತ್ಪಾದಕರಿಗೆ ಸಂದೇಶವನ್ನು ಕಳುಹಿಸುತ್ತಿದ್ದೇವೆ ಎಂದು ಹೇಳಿದ್ದರು