ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ 
ವಿದೇಶ

ಪಾಕ್‌ನಲ್ಲಿ ಭಯೋತ್ಪಾದನೆ ಹರಡಲು ಭಾರತ ಅಫ್ಗಾನಿಸ್ತಾನವನ್ನು ಬಳಸಿಕೊಳ್ಳುತ್ತಿದೆ: ಖವಾಜಾ ಆಸಿಫ್

ಕಾಬೂಲ್ ಈ ಹಿಂದೆ ಇಸ್ಲಾಮಾಬಾದ್‌ನ ಇದೇ ರೀತಿಯ ಆರೋಪಗಳನ್ನು ಆಧಾರರಹಿತವೆಂದು ತಳ್ಳಿಹಾಕಿತ್ತು. ಆದಾಗ್ಯೂ, ಪಾಕಿಸ್ತಾನಿ ಸಚಿವರು ಅಫ್ಗಾನಿಸ್ತಾನದ ಸಂಧಾನಕಾರರನ್ನು ಶ್ಲಾಘಿಸಿದರು.

ಇಸ್ಲಾಮಾಬಾದ್: ನವದೆಹಲಿಯು ತನ್ನ ದೇಶದಲ್ಲಿ ಭಯೋತ್ಪಾದನೆಯನ್ನು ಹರಡಲು ಕಾಬೂಲ್ ಅನ್ನು ಸಾಧನವಾಗಿ ಬಳಸುತ್ತಿದೆ ಎಂದು ಆರೋಪಿಸಿರುವ ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್, ಅಫ್ಗಾನಿಸ್ತಾನ ಇಸ್ಲಾಮಾಬಾದ್ ಮೇಲೆ ದಾಳಿ ಮಾಡಿದರೆ '50 ಪಟ್ಟು ಬಲವಾದ' ಪ್ರತಿಕ್ರಿಯೆ ನೀಡಲಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಜಿಯೋ ನ್ಯೂಸ್‌ನ ಪ್ರೈಮ್‌ಟೈಮ್ ಶೋ 'ಆಜ್ ಶಹಜೇಬ್ ಖಾನ್ಜಾದಾ ಕೆ ಸಾಥ್'ನಲ್ಲಿ ಮಾತನಾಡಿದ ಅವರು, ಶಾಂತಿ ಒಪ್ಪಂದದಿಂದ ಪದೇ ಪದೆ ಹಿಂದೆ ಸರಿಯುತ್ತಿರುವ ಆಫ್ಘನ್ ಸಂಧಾನಕಾರರನ್ನು ತರಾಟೆಗೆ ತೆಗೆದುಕೊಂಡರು. ಇಸ್ತಾನ್‌ಬುಲ್‌ನಲ್ಲಿ ಪಾಕಿಸ್ತಾನ ಮತ್ತು ಅಫ್ಗಾನಿಸ್ತಾನ ನಡುವಿನ ಶಾಂತಿ ಮಾತುಕತೆಗಳು ನಾಟಕೀಯವಾಗಿ ಕೊನೆಗೊಂಡ ನಂತರ ಈ ಹೇಳಿಕೆಗಳು ಬಂದಿವೆ.

'ಎರಡೂ ಕಡೆಯವರು ಒಪ್ಪಂದಕ್ಕೆ ಬರುವ ಪ್ರತಿ ಬಾರಿಯೂ (ಕಳೆದ ನಾಲ್ಕು ದಿನಗಳಲ್ಲಿ ಅಥವಾ ಕಳೆದ ವಾರ), ಸಂಧಾನಕಾರರು ತಮ್ಮ ಪ್ರಗತಿಯನ್ನು ವರದಿ ಮಾಡಲು ಕಾಬೂಲ್‌ಗೆ ಹೋಗುತ್ತಿದ್ದರು. ಆದರೆ, ಅವರು ಹಾಗೆ ಮಾಡಿದ ನಂತರ, ಕಾಬೂಲ್‌ನಲ್ಲಿ ಯಾರೋ ಮಧ್ಯಪ್ರವೇಶಿಸಿ ಒಪ್ಪಂದವನ್ನು ಅಂತಿಮಗೊಳಿಸುವುದನ್ನು ನಿಲ್ಲಿಸುತ್ತಿದ್ದರು' ಎಂದು ಆಸಿಫ್ ವಿವರಿಸಿರುವುದಾಗಿ ಡಾನ್ ವರದಿ ಮಾಡಿದೆ. 'ಮಾತುಕತೆಗಳನ್ನು ಹಾಳುಮಾಡಲಾಗಿದೆ ಎಂದು ನಾನು ನಂಬುತ್ತೇನೆ. ಮೊದಲಿಗೆ ಒಪ್ಪಂದಕ್ಕೆ ನಿರ್ಧರಿಸಲಾಗಿತ್ತು, ಆದರೆ ನಂತರ ಅವರು ಕಾಬೂಲ್‌ಗೆ ಕರೆ ಮಾಡಿ ಒಪ್ಪಂದದಿಂದ ಹಿಂದೆ ಸರಿದರು' ಎಂದು ದೂರಿದ್ದಾರೆ.

ಕಾಬೂಲ್ ಈ ಹಿಂದೆ ಇಸ್ಲಾಮಾಬಾದ್‌ನ ಇದೇ ರೀತಿಯ ಆರೋಪಗಳನ್ನು ಆಧಾರರಹಿತವೆಂದು ತಳ್ಳಿಹಾಕಿತ್ತು. ಆದಾಗ್ಯೂ, ಪಾಕಿಸ್ತಾನಿ ಸಚಿವರು ಅಫ್ಗಾನಿಸ್ತಾನದ ಸಂಧಾನಕಾರರನ್ನು ಶ್ಲಾಘಿಸಿದರು ಮತ್ತು ಕಾಬೂಲ್ ನಾಯಕತ್ವದ ವಿರುದ್ಧ ಕಿಡಿಕಾರಿದರು.

'ಅಫ್ಗಾನಿಸ್ತಾನ ಸರ್ಕಾರ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿಲ್ಲ, ಬದಲಾಗಿ ಭಾರತದ ನಿಯಂತ್ರಣದಲ್ಲಿದೆ. 'ಆಫ್ಘನ್ ನಾಯಕರು ಬೊಂಬೆಗಳಂತೆ ಮತ್ತು ಭಾರತವು ಅವರನ್ನು ತೆರೆಮರೆಯಲ್ಲಿ ನಿಯಂತ್ರಿಸುತ್ತಿದೆ' ಎಂದು ಅವರು ಹೇಳಿದರು.

'ಭಾರತವು ತನ್ನ ಪಶ್ಚಿಮ ಗಡಿಯಲ್ಲಿನ ಸೋಲಿಗೆ ಕಾಬೂಲ್‌ ಮೂಲಕ ಆ ನಷ್ಟವನ್ನು ಸರಿದೂಗಿಸಲು ಪ್ರಯತ್ನಿಸುತ್ತಿದೆ. ಅಫ್ಗಾನಿಸ್ತಾನದ ತಾಲಿಬಾನ್ ಸರ್ಕಾರದ ಕೆಲವು ಸದಸ್ಯರು ಭಾರತದೊಂದಿಗೆ ಸಂಬಂಧ ಹೊಂದಿದ್ದಾರೆ. ಭಾರತ ಮತ್ತು ಭಾರತೀಯ ದೇವಾಲಯಗಳಿಗೆ ಭೇಟಿ ನೀಡಿದ್ದಾರೆ. ಭಾರತವು ಪಾಕಿಸ್ತಾನದೊಂದಿಗೆ ಪರೋಕ್ಷ ಯುದ್ಧದಲ್ಲಿ ತೊಡಗಿಸಿಕೊಳ್ಳಲು ಬಯಸುತ್ತದೆ. ಇದನ್ನು ಸಾಧಿಸಲು, ಅವರು ಕಾಬೂಲ್ ಅನ್ನು ಬಳಸುತ್ತಿದ್ದಾರೆ' ಎಂದು ದೂರಿದ್ದಾರೆ.

'ಅಫ್ಗಾನಿಸ್ತಾನವು ಇಸ್ಲಾಮಾಬಾದ್ ಕಡೆಗೆ ನೋಡಿದರೆ, ನಾವು ಅವರ ಕಣ್ಣುಗಳನ್ನು ಕಿತ್ತುಹಾಕುತ್ತೇವೆ. ಅವರು ಭಯೋತ್ಪಾದಕರನ್ನು ಬಳಸಬಹುದು ಮತ್ತು ಅವರು ಈಗಾಗಲೇ ಬಳಸುತ್ತಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ, ಅವರು ಭಯೋತ್ಪಾದಕರನ್ನು ಬಳಸುತ್ತಿದ್ದಾರೆ' ಎಂದು ಅವರು ಹೇಳಿದರು.

'ಪಾಕಿಸ್ತಾನದಲ್ಲಿ ಭಯೋತ್ಪಾದನೆಗೆ ಕಾಬೂಲ್ ಕಾರಣ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಕಾಬೂಲ್ ದೆಹಲಿಗೆ ಸಾಧನವಾಗಿದೆ. ಅವರು ಇಸ್ಲಾಮಾಬಾದ್ ಮೇಲೆ ದಾಳಿ ಮಾಡಿದರೆ, ನಾವು ಸೂಕ್ತ ಪ್ರತಿಕ್ರಿಯೆ ನೀಡುತ್ತೇವೆ. 50 ಪಟ್ಟು ಬಲವಾದ ಪ್ರತಿಕ್ರಿಯೆ ಅದಾಗಿರುತ್ತದೆ' ಎಂದು ರಕ್ಷಣಾ ಸಚಿವರು ಹೇಳಿದರು.

ಅಫ್ಘಾನಿಸ್ತಾನದ ರಕ್ಷಣಾ ಸಚಿವ ಮೊಹಮ್ಮದ್ ಯಾಕೂಬ್, ಪಾಕಿಸ್ತಾನದ ಆರೋಪಗಳನ್ನು 'ಆಧಾರರಹಿತ ಮತ್ತು ತರ್ಕಬದ್ಧವಲ್ಲದ' ಎಂದು ಈ ಹಿಂದೆ ಕರೆದಿದ್ದರು ಮತ್ತು ಅದು ಸ್ವತಂತ್ರ ರಾಷ್ಟ್ರವಾಗಿ ಭಾರತದೊಂದಿಗೆ ಸಂಬಂಧವನ್ನು ಕಾಪಾಡಿಕೊಳ್ಳುತ್ತದೆ ಎಂದು ಒತ್ತಿ ಹೇಳಿದರು.

ಪಾಕಿಸ್ತಾನ-ಅಫ್ಘಾನಿಸ್ತಾನ ಶಾಂತಿ ಮಾತುಕತೆ

ಪಾಕಿಸ್ತಾನ ಮತ್ತು ಅಫ್ಗಾನಿಸ್ತಾನ ಶನಿವಾರ (ಅಕ್ಟೋಬರ್ 25) ಇಸ್ತಾನ್‌ಬುಲ್‌ನಲ್ಲಿ ಎರಡನೇ ಸುತ್ತಿನ ಶಾಂತಿ ಮಾತುಕತೆಗಳನ್ನು ಪ್ರಾರಂಭಿಸಿದವು. ಆದರೆ, ಮಾತುಕತೆ ವಿಫಲವಾದರೆ ಬಹಿರಂಗ ಯುದ್ಧದಲ್ಲಿ ತೊಡಗಿಸಿಕೊಳ್ಳುವುದಾಗಿ ಆಸಿಫ್ ಎಚ್ಚರಿಸಿದರು. ಕತಾರ್ ಮತ್ತು ಟರ್ಕಿಯ ಮಧ್ಯವರ್ತಿಗಳ ನೇತೃತ್ವದ ಶಾಂತಿ ಮಾತುಕತೆಗಳು ವಿಫಲವಾದವು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಭಯೋತ್ಪಾದನೆಯನ್ನು ಯಾವುದೂ ಸಮರ್ಥಿಸಲು ಸಾಧ್ಯವಿಲ್ಲ, ಭಾರತ ಇಸ್ರೇಲ್ ಜೊತೆ ದೃಢವಾಗಿ ನಿಲ್ಲುತ್ತದೆ': ನೆಸ್ಸೆಟ್‌ನಲ್ಲಿ ಪ್ರಧಾನಿ ಮೋದಿ ಭಾಷಣ

'ನ್ಯಾಯಾಂಗದಲ್ಲಿ ಭ್ರಷ್ಟಾಚಾರ' ಪಾಠ: ಸುಪ್ರೀಂ ಕೋರ್ಟ್ ಚಾಟಿ ನಂತರ ವೆಬ್‌ಸೈಟ್‌ನಿಂದ ಪಠ್ಯಪುಸ್ತಕ ತೆಗೆದ NCERT

T20 World Cup 2026: ಶ್ರೀಲಂಕಾ ವಿರುದ್ಧ ನ್ಯೂಜಿಲ್ಯಾಂಡ್ ​ಗೆ 61 ರನ್ ಭರ್ಜರಿ ಗೆಲುವು

India to Israel: ಪ್ರಧಾನಿ ಮೋದಿ ಪಯಣಿಸಿದ Air India ವಿಮಾನ ವಿಶ್ವದಲ್ಲೇ ಅತಿ ಹೆಚ್ಚು ಟ್ರ್ಯಾಕ್: Flightradar24

Ranji Trophy final: ಕರ್ನಾಟಕ ವಿರುದ್ಧ ಜಮ್ಮು ಮತ್ತು ಕಾಶ್ಮೀರ ಬೃಹತ್ ಮೊತ್ತ; 527/6

SCROLL FOR NEXT