ಸೌದಿ ಅರೇಬಿಯಾದ ಪೂರ್ವ ಭಾಗದಲ್ಲಿರುವ ಅಲ್ ಜುಬೈಲ್ ಕೈಗಾರಿಕಾ ನಗರದ ಮೇಲೆ ಇರಾನ್ ಡ್ರೋನ್ ಹಾಗೂ ಮಿಸೈಲ್ ದಾಳಿ ನಡೆಸಿದ್ದು, ಪರಿಣಾಮ ಭಾರೀ ಅಗ್ನಿ ಅವಘಡ ಸಂಭಿಸಿದೆ ಎಂದು ತಿಳಿದುಬಂದಿದೆ.
ಈ ಅಗ್ನಿ ಅವಘಡವು ಗಲ್ಫ್ ಪ್ರದೇಶದ ಭದ್ರತೆ ಹಾಗೂ ಜಾಗತಿಕ ಇಂಧನ ಮಾರುಕಟ್ಟೆಯ ಮೇಲೆ ದೊಡ್ಡ ಪರಿಣಾಮ ಬೀರುವ ಸಾಧ್ಯತೆಯನ್ನು ಸೂಚಿಸುತ್ತಿದೆ ಎಂದು ಹೇಳಲಾಗುತ್ತಿದೆ.
ಇರಾನ್ ಮೂಲದ ಡ್ರೋನ್ ಮತ್ತು ಕ್ಷಿಪಣಿ ದಾಳಿಯ ಪರಿಣಾಮವಾಗಿ ಈ ಅವಘಡ ಸಂಭವಿಸಿದೆ ಎಂದು ಅಂತರಾಷ್ಟ್ರೀಯ ವರದಿಗಳು ತಿಳಿಸಿವೆ.
ಮಾಹಿತಿಗಳ ಪ್ರಕಾರ, ಈ ದಾಳಿ ಜಂಟಿಯಾಗಿ ರೀತಿಯಲ್ಲಿ ನಡೆದಿದ್ದು, ಹಲವು ಡ್ರೋನ್ಗಳು ಮತ್ತು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಬಳಸಿ ಕೈಗಾರಿಕಾ ಘಟಕಗಳನ್ನು ಗುರಿಯಾಗಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಸೌದಿ ಅರೇಬಿಯಾದ ವಾಯು ರಕ್ಷಣಾ ವ್ಯವಸ್ಥೆಗಳು ಬಹುತೇಕ ದಾಳಿಗಳನ್ನು ಮಧ್ಯದಲ್ಲೇ ಹೊಡೆದುರುಳಿಸಿದರೂ, ಕೆಲವು ಕ್ಷಿಪಣಿಗಳ ಅವಶೇಷಗಳು ಅಥವಾ ದಾಳಿಗಳು ಪೆಟ್ರೋಕೆಮಿಕಲ್ ಘಟಕಗಳಲ್ಲಿ ಭಾರಿ ಸ್ಫೋಟಗಳನ್ನು ಸೃಷ್ಟಿವೆ ಎಂದು ತಿಳಿದುಬಂದಿದೆ. ಈ ಸ್ಫೋಟಗಳಿಂದ ಬೆಂಕಿ ವ್ಯಾಪಕವಾಗಿ ಹರಡಿ, ಹಲವು ಘಟಕಗಳು ಬೆಂಕಿಗಾಹುತಿಯಾದವು ಎಂದು ಹೇಳಲಾಗಿದೆ.
ಘಟನೆಯ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಬೆಂಕಿಯ ಕೆನ್ನಾಲಿಗೆ ಮುಗಿಲೆತ್ತರಕ್ಕೆ ಉರಿಯುತ್ತಿದ್ದು, ಆಗಸದವರೆಗೂ ದಟ್ಟ ಕಪ್ಪು ಹೊಗೆ ಕಾಣಿಸಿತ್ತಿರುವ ದೃಶ್ಯಗಳು ಕಂಡುಬಂದಿವೆ.
ಸ್ಥಳೀಯ ಅಗ್ನಿಶಾಮಕ ದಳಗಳು ತಕ್ಷಣವೇ ಕಾರ್ಯಾಚರಣೆಗೆ ಇಳಿದು ಬೆಂಕಿಯನ್ನು ನಿಯಂತ್ರಣಕ್ಕೆ ತರುವ ಪ್ರಯತ್ನ ನಡೆಸುತ್ತಿವೆ. ಕೆಲವು ವರದಿಗಳ ಪ್ರಕಾರ ಬೆಂಕಿಯನ್ನು ಭಾಗಶಃ ನಿಯಂತ್ರಣಕ್ಕೆ ತರಲಾಗಿದೆ ಎನ್ನಲಾಗುತ್ತಿದೆ. ಆದರೆ ಸಂಪೂರ್ಣ ನಂದಿಸಲು ಇನ್ನೂ ಸಮಯ ಬೇಕಾಗಬಹುದು ಎಂದು ವರದಿಗಳು ತಿಳಿಸಿವೆ.
ಅಲ್ ಜುಬೈಲ್ ಕೈಗಾರಿಕಾ ನಗರವು ಕೇವಲ ಸೌದಿ ಅರೇಬಿಯಾದಷ್ಟೇ ಅಲ್ಲ, ವಿಶ್ವದ ಪ್ರಮುಖ ಕೈಗಾರಿಕಾ ಕೇಂದ್ರಗಳಲ್ಲಿ ಒಂದಾಗಿದೆ. ಇಲ್ಲಿ ತೈಲ ಶುದ್ಧೀಕರಣ, ಪೆಟ್ರೋಕೆಮಿಕಲ್ ಉತ್ಪಾದನೆ, ರಸಾಯನಿಕ ಘಟಕಗಳು ಮತ್ತು ಭಾರೀ ಕೈಗಾರಿಕೆ ಚಟುವಟಿಕೆಗಳು ಕಾರ್ಯನಿರ್ವಹಿಸುತ್ತಿವೆ.
ಅನೇಕ ಬಹುರಾಷ್ಟ್ರೀಯ ಕಂಪನಿಗಳು ಇಲ್ಲಿ ಹೂಡಿಕೆ ಮಾಡಿರುವುದರಿಂದ, ಈ ಪ್ರದೇಶದಲ್ಲಿ ಉಂಟಾಗುವ ವ್ಯತ್ಯಯವು ಜಾಗತಿಕ ಸರಬರಾಜು ಸರಪಳಿಗಳ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆಗಳಿವೆ.
ಈ ದಾಳಿಯ ನಂತರ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಆತಂಕ ಹೆಚ್ಚಾಗಿದ್ದು, ತೈಲ ಬೆಲೆ ಏರಿಕೆಯಾಗುವ ಸಾಧ್ಯತೆಗಳ ಬಗ್ಗೆ ವಿಶ್ಲೇಷಕರು ಎಚ್ಚರಿಕೆ ನೀಡಿದ್ದಾರೆ.
ಸೌದಿ ಅರೇಬಿಯಾ ವಿಶ್ವದ ಪ್ರಮುಖ ತೈಲ ರಫ್ತು ದೇಶವಾಗಿರುವುದರಿಂದ, ಇದರ ಕೈಗಾರಿಕಾ ಮೂಲಸೌಕರ್ಯಕ್ಕೆ ಹಾನಿಯಾದರೆ ಇಂಧನ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಬಹುದು. ಇದು ಭಾರತ ಸೇರಿದಂತೆ ತೈಲ ಆಮದು ಮಾಡುವ ರಾಷ್ಟ್ರಗಳಿಗೆ ನೇರ ಪರಿಣಾಮ ಬೀರುವ ಸಾಧ್ಯತೆ ಇದೆ.
ಇದಲ್ಲದೆ, ಈ ಘಟನೆ ಗಲ್ಫ್ ಪ್ರದೇಶದಲ್ಲಿ ಉದ್ವಿಗ್ನತೆಯನ್ನು ಮತ್ತಷ್ಟು ತೀವ್ರಗೊಳಿಸಿದೆ. ಇತ್ತೀಚಿನ ದಿನಗಳಲ್ಲಿ ಇರಾನ್ ಮತ್ತು ಸೌದಿ ಸೇರಿದಂತೆ ಮಧ್ಯಪ್ರಾಚ್ಯ ರಾಷ್ಟ್ರಗಳ ನಡುವೆ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆ, ಇಂತಹ ದಾಳಿಗಳು ಪ್ರಾದೇಶಿಕ ಯುದ್ಧಕ್ಕೆ ದಾರಿ ಮಾಡಿಕೊಡಬಹುದೆಂಬ ಭೀತಿ ವ್ಯಕ್ತವಾಗಿದೆ.
ಮಧ್ಯಪ್ರಾಚ್ಯದಲ್ಲಿ ತೈಲ ಸ್ಥಾವರಗಳು, ಬಂದರುಗಳು ಮತ್ತು ಕೈಗಾರಿಕಾ ಕೇಂದ್ರಗಳು ಗುರಿಯಾಗುತ್ತಿರುವುದು ಆತಂಕ ಹೆಚ್ಚಾಗುವಂತೆ ಮಾಡುತ್ತಿದೆ.
ಸೌದಿ ಸರ್ಕಾರವು ಈ ಘಟನೆಯ ಕುರಿತು ತುರ್ತು ಸಭೆಗಳನ್ನು ನಡೆಸುತ್ತಿದ್ದು, ಭದ್ರತಾ ಕ್ರಮಗಳನ್ನು ಮತ್ತಷ್ಟು ಬಲಪಡಿಸುವ ಕೆಲಸ ಆರಂಭಿಸಿದೆ. ಪ್ರಮುಖ ಕೈಗಾರಿಕಾ ಪ್ರದೇಶಗಳಲ್ಲಿ ಭದ್ರತೆ ಹೆಚ್ಚಿಸಲಾಗಿದ್ದು, ಮುಂದಿನ ದಾಳಿಗಳನ್ನು ತಡೆಯಲು ವಿಶೇಷ ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.