ಟೆಹ್ರಾನ್: ಘೋಷಣೆಯಾಗಿರುವ ಕದನ ವಿರಾಮವನ್ನು ಉಲ್ಲಂಘಿಸಿ ಲೆಬನಾನ್ ಮೇಲೆ ಇಸ್ರೇಲ್ ದಾಳಿ ಮಾಡಿದ ಪರಿಣಾಮ ಇರಾನ್ ಪ್ರತೀಕಾರಕ್ಕೆ ಮುಂದಾಗಿದ್ದು, ಹಾರ್ಮುಜ್ ಜಲಸಂಧಿ ಮಾರ್ಗವನ್ನು ಮತ್ತೆ ಬಂದ್ ಮಾಡಿದೆ. ಅಲ್ಲದೆ, ಅದನ್ನು ದಾಟಲು ಮುಂದಾಗಿದ್ದ ಹಡಗುಗಳನ್ನು ತಡೆಹಿದಿದೆ ಎಂದು ತಿಳಿದುಬಂದಿದೆ.
ಕದನ ವಿರಾಮ ಘೋಷಣೆ ಬಳಿಕ ಸ್ಥಗಿತದಿಂದಾಗಿ ಹಾರ್ಮುಜ್ ಮಾರ್ಗ ಮುಕ್ತವಾಗಿ ಭಾರತ ಸೇರಿದಂತೆ ಅನೇತ ರಾಷ್ಟ್ರಗಳಿಗೆ ತೈಲಾನಿಲ ತತ್ವಾರ ನೀಗಬಹುದು ಎಂಬ ನಿರೀಕ್ಷೆ ನಡುವಲ್ಲೇ ಈ ಬೆಳವಣಿಗೆ ಮುಳ್ಳಾಗಿ ಪರಿಣಮಿಸಿದೆ.
ಲೆಬನಾನ್ ಗುರಿಯಾಗಿಸಿ ಇಸ್ರೇಲ್ ಪಡೆಗಳು ಭಾರೀ ಬಾಂಬ್ ದಾಳಿ ನಡೆಸಿದ್ದು, ಈ ದಾಳಿಗಳನ್ನು ಇರಾನ್ ಕದನ ವಿರಾಮ ಒಪ್ಪಂದದ ಉಲ್ಲಂಘನೆ ಎಂದು ಪರಿಗಣಿಸಿದೆ.
ಪೂರ್ವ ಸೂಚನೆ ಇಲ್ಲದೆ ಹಲವಾರು ಜನನಿಬಿಡ ವಾಣಿಜ್ಯ ಮತ್ತು ವಸತಿ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗಿದ್ದು, ದಾಳಿಯಲ್ಲಿ 300 ಜನರು ಸಾವನ್ನಪ್ಪಿದ್ದು, 1200 ಜನರು ಗಾಯಗೊಂಡಿದ್ದಾರೆಂದು ಹೇಳಲಾಗುತ್ತಿದೆ. ದಾಳಿಯಲ್ಲಿ ಶಾಲೆಗಳು, ಆಸ್ಪತ್ರೆಗಳು ಮತ್ತು ಮೂಲಭೂತ ಸೌಲಭ್ಯಗಳಿಗೂ ತೀವ್ರ ಹಾನಿ ಸಂಭವಿಸಿದೆ ಎಂದು ವರದಿಗಳಿಂದ ತಿಳಿದುಬಂದಿದೆ.
ಇದರ ಬೆನ್ನಲ್ಲೇ ಇರಾನ್ ಪ್ರತೀಕಾರಕ್ಕೆ ಮುಂದಾಗಿದ್ದು, ಹಾರ್ಮುಜ್ ಜಲಸಂಧಿಯನ್ನು ಬಂದ್ ಮಾಡಿದೆ. ಇದು ಜಾಗತಿಕ ತೈಲ ಮಾರುಕಟ್ಟೆ ಮೇಲೆ ತಕ್ಷಣ ಪರಿಣಾಮ ಬೀರಿದೆ. ತೈಲ ಬೆಲೆಗಳು ಏರಿಕೆ ಕಂಡು, ಜಾಗತಿಕವಾಗಿ ಕಚ್ಚಾ ತೈಲವನ್ನು ಸಾಗಿಸುವ ಕಂಪನಿಗಳು ಹೆಚ್ಚಿನ ಸುರಕ್ಷತಾ ಕ್ರಮಗಳನ್ನು ಜಾರಿಗೆ ತಂದಿವೆ.
ಸಾಗಣೆ ಕಂಪನಿಗಳು ನೌಕಾ ಮಾರ್ಗಗಳ ಬದಲಾವಣೆಯನ್ನು, ಇನ್ಸೂರೆನ್ಸ್ ಪಾಲಿಸಿ ಹೆಚ್ಚಳವನ್ನು, ಮತ್ತು ಸುದೂರ ಮಾರ್ಗಗಳ ಆಯ್ಕೆಯನ್ನು ಪರಿಶೀಲಿಸುತ್ತಿವೆ. ಭಾರತದಂತಹ ತೈಲ ಆಮದು ಆಧಾರಿತ ದೇಶಗಳು ಹಾರ್ಮುಜ್ ಮಾರ್ಗ ಬಂದ್ ನಿಂದ ಸಂಕಷ್ಟಕ್ಕೆ ಸಿಲುಕಿವೆ.
ಇದಕ್ಕೂ ಮುನ್ನ ಅಮೆರಿಕ ಮತ್ತು ಇರಾನ್ ನಡುವೆ ಎರಡೂ ವಾರಗಳ ಯುದ್ಧ ವಿರಾಮ ಒಪ್ಪಂದ ಘೋಷಿತವಾಗಿತ್ತು. ಒಪ್ಪಂದದ ಪ್ರಕಾರ ಹಾರ್ಮುಜ್ ಮಾರ್ಗವನ್ನು ತೆರೆಯಲು ಇರಾನ್ ನಿರ್ಧಾರ ಕೈಗೊಂಡಿತ್ತು. ಆದರೆ ಲೆಬನಾನ್ನಲ್ಲಿ ನಡೆದ ಇಸ್ರೇಲ್ ದಾಳಿಗಳು ಈ ಒಪ್ಪಂದದ ಉದ್ದೇಶವನ್ನು ಸಂಕೀರ್ಣಗೊಳಿಸಿ, ಮಾರ್ಗ ಬಂದ್'ಗೆ ಕಾರಣವಾಗಿದೆ.
ಇರಾನ್ ಸರ್ಕಾರ ನೀಡಿರುವ ಹೇಳಿಕೆಯಲ್ಲಿ, ಹಾರ್ಮುಜ್ ಮಾರ್ಗದ ಸುರಕ್ಷತೆ ಮತ್ತು ಜಾಗತಿಕ ತೈಲ ಸಾಗಣೆ ಹಕ್ಕನ್ನು ಕಾಯ್ದುಕೊಳ್ಳಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದೆ.
ಜಾಗತಿಕ ತೈಲ ಮಾರುಕಟ್ಟೆ, ಸಾಗಣೆ ದಾರಿ, ಜಾಗತಿಕ ವ್ಯಾಪಾರ ಮತ್ತು ಸ್ಥಳೀಯ ಆರ್ಥಿಕತೆ ಮೇಲೆ ಹಾರ್ಮುಜ್ ಮಾರ್ಗದ ಬಂದ್ ತೀವ್ರ ಪರಿಣಾಮ ಬೀರಿದೆ. ಇತ್ತೀಚಿನ ದಾಳಿ ಮತ್ತು ಮಾರ್ಗ ಬಂದ್ ನಿಂದ ತೈಲ ಖರೀದಿ, ಸಾಗಣೆ ಯೋಜನೆ ಮತ್ತು ಸಂಚಾರ ಮಾರ್ಗಗಳಲ್ಲಿ ಬದಲಾವಣೆಗಳು ಕಂಡು ಬಂದಿವೆ. ತೈಲ ಆಮದು ಆಧಾರಿತ ದೇಶಗಳು ಹೊಸ ಆಯ್ಕೆಗಳನ್ನು ಹುಡುಕಲು ಆರಂಭಿಸಿದ್ದು, ಜಾಗತಿಕ ತೈಲ ಸರಬರಾಜು ಸಮಸ್ಯೆ ಮತ್ತಷ್ಟು ತೀವ್ರಗೊಂಡಿದೆ.
ಲೇಬನಾನ್ನಲ್ಲಿ ನಡೆದ ದಾಳಿಯ ಪರಿಣಾಮದಿಂದ ನಾಗರಿಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆಸ್ಪತ್ರೆಗಳು ತೀವ್ರ ಒತ್ತಡದಲ್ಲಿದ್ದು, ಕಚ್ಚಾ ಆಹಾರ, ಇಂಧನ, ವೈದ್ಯಕೀಯ ಸರಬರಾಜು ಕೊರತೆ ಹೆಚ್ಚಾಗಿದೆ. ತುರ್ತು ನೆರವು ಒದಗಿಸಲು ಅಂತಾರಾಷ್ಟ್ರೀಯ ಸಂಸ್ಥೆಗಳು ಹರಸಾಹಸ ಮಾಡುತ್ತಿದ್ದರೂ, ಸೀಮಿತ ಸಂಪನ್ಮೂಲಗಳು ಸಂಕಷ್ಟವನ್ನು ಉಂಟುಮಾಡುತ್ತಿವೆ.