ನೇಪಾಳ ಪ್ರವಾಹ 
ವಿದೇಶ

Nepal Floods: ಸಾವಿನ ಸಂಖ್ಯೆ 359ಕ್ಕೆ ಏರಿಕೆ; 288 ಭಾರತೀಯರು ಸೇರಿ 826 ಮಂದಿ ನಾಪತ್ತೆ; ಮತ್ತೆ ಪ್ರವಾಹ ಭೀತಿ! ಹೊಸ ಸರೋವರ ಪತ್ತೆ!

ಗಡಿ ಪ್ರದೇಶದಲ್ಲಿ ನದಿಯ ಹರಿವು ತಡೆಯಲ್ಪಟ್ಟ ಸ್ಥಳದಲ್ಲಿ ಮತ್ತೊಂದು ಸರೋವರ ನಿರ್ಮಾಣವಾಗಿದ್ದು, ಗುರುವಾರ ಬೆಳಗ್ಗೆಯ ವೇಳೆಗೆ ಸರೋವರದಲ್ಲಿ ಸುಮಾರು 20 ಲಕ್ಷ ಘನ ಮೀಟರ್ ನೀರು ಸಂಗ್ರಹವಾಗಿತ್ತು...

ಕಠ್ಮಂಡು: ಟಿಬೆಟ್‌ನಿಂದ ಆರಂಭವಾಗಿ ಮಧ್ಯ ನೇಪಾಳದ ಹಲವು ಜಿಲ್ಲೆಗಳಲ್ಲಿ ಭೀಕರ ವಿನಾಶ ಸೃಷ್ಟಿಸಿರುವ ಪ್ರವಾಹಕ್ಕೆ ಬಲಿಯಾದವರ ಸಂಖ್ಯೆ 359ಕ್ಕೆ ಏರಿಕೆಯಾಗಿದ್ದು, ಇನ್ನೂ 826 ಮಂದಿ ನಾಪತ್ತೆಯಾಗಿದ್ದಾರೆ.

ಈ ಪೈಕಿ ಅವರಲ್ಲಿ 288 ಭಾರತೀಯರು ಸೇರಿದ್ದಾರೆ. ಬುಧವಾರ ಸಂಭವಿಸಿದ ಈ ಜಲಪ್ರಳಯದಿಂದ ರಸುವಾ, ಧಾದಿಂಗ್, ನುವಾಕೋಟ್ ಮತ್ತು ಚಿತ್ವನ್ ಜಿಲ್ಲೆಗಳು ತೀವ್ರವಾಗಿ ಹಾನಿಗೊಳಗಾಗಿವೆ. ಪಟ್ಟಣಗಳು, ಗ್ರಾಮಗಳು, ರಸ್ತೆಗಳು, ಸೇತುವೆಗಳು ಹಾಗೂ ಸುಮಾರು ಒಂದು ಡಜನ್ ಜಲವಿದ್ಯುತ್ ಯೋಜನೆಗಳು ಪ್ರವಾಹದ ಅಬ್ಬರಕ್ಕೆ ಸಿಲುಕಿವೆ.

ನೇಪಾಳ ಪೊಲೀಸರ ಪ್ರಕಾರ, ಚಿತ್ವನ್ ಜಿಲ್ಲೆಯಲ್ಲಿ ಅತಿ ಹೆಚ್ಚು 132 ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನೇಪಾಳದ ಪ್ರಾಥಮಿಕ ಮೌಲ್ಯಮಾಪನ ಹಾಗೂ ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆಯ ಪರಿಷ್ಕೃತ ವಿಶ್ಲೇಷಣೆಯ ಪ್ರಕಾರ, ಹಿಮನದಿ ಕುಸಿತ ಅಥವಾ ಹಿಮ-ಬಂಡೆಗಳ ಭಾರಿ ಹಿಮಗಲ್ಲು ಕುಸಿತ ಮೊದಲ ಭೀಕರ ಪ್ರವಾಹಕ್ಕೆ ಕಾರಣವಾಗಿರಬಹುದು ಎನ್ನಲಾಗಿದೆ.

ಈ ಕುಸಿತದಿಂದ ಹಿಮ, ಬಂಡೆ ಹಾಗೂ ಮಣ್ಣು-ಅವಶೇಷಗಳು ಲ್ಹೆಂಡೆ ನದಿಗೆ ಬಿದ್ದವು. ಇದರಿಂದ ನದಿಯ ಹರಿವು ತಾತ್ಕಾಲಿಕವಾಗಿ ತಡೆಯಲ್ಪಟ್ಟು, ಬಳಿಕ ಅಣೆಕಟ್ಟಿನಂತಿದ್ದ ತಡೆ ಒಡೆದಾಗ ಭಾರೀ ಪ್ರಮಾಣದ ನೀರು ಏಕಾಏಕಿ ಭೋಟೆ ಕೋಶಿ ಮತ್ತು ತ್ರಿಶೂಲಿ ನದಿ ವ್ಯವಸ್ಥೆಗೆ ನುಗ್ಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮತ್ತೊಂದು ಪ್ರವಾಹದ ಭೀತಿ

ಈಗಾಗಲೇ ಭೀಕರ ಪ್ರವಾಹದಿಂದ ತತ್ತರಿಸಿರುವ ನೇಪಾಳಕ್ಕೆ ಮತ್ತೊಂದು ಆತಂಕ ಎದುರಾಗಿದೆ. ಭೋಟೆ ಕೋಶಿ ನದಿಯ ಮೂಲ ಪ್ರದೇಶದ ಸಮೀಪ ಹೊಸ ಬ್ಯಾರಿಯರ್‌ ಸರೋವರವೊಂದು ನಿರ್ಮಾಣವಾಗಿದ್ದು, ಅದು ಒಡೆದುಹೋಗುವ ಸಾಧ್ಯತೆಯಿದೆ ಎಂದು ಚೀನಾದ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಅಪಾರ ಪ್ರಮಾಣದ ನೀರು ಶೇಖರಣೆ

ನೇಪಾಳದ ಜಲಶಾಸ್ತ್ರ ಮತ್ತು ಹವಾಮಾನ ಇಲಾಖೆಗೆ ಚೀನಾದ ಅಧಿಕಾರಿಗಳು ಈ ಕುರಿತು ಮಾಹಿತಿ ನೀಡಿದ್ದಾರೆ. ಗಡಿ ಪ್ರದೇಶದಲ್ಲಿ ನದಿಯ ಹರಿವು ತಡೆಯಲ್ಪಟ್ಟ ಸ್ಥಳದಲ್ಲಿ ಈ ಸರೋವರ ನಿರ್ಮಾಣವಾಗಿದೆ ಎಂದು ತಿಳಿಸಲಾಗಿದೆ.

ಗುರುವಾರ ಬೆಳಗ್ಗೆಯ ವೇಳೆಗೆ ಸರೋವರದಲ್ಲಿ ಸುಮಾರು 20 ಲಕ್ಷ ಘನ ಮೀಟರ್ ನೀರು ಸಂಗ್ರಹವಾಗಿತ್ತು. ಮುಂದಿನ ಮೂರು ದಿನಗಳಲ್ಲಿ ಇನ್ನೂ 30 ಲಕ್ಷ ಘನ ಮೀಟರ್ ನೀರು ಸರೋವರಕ್ಕೆ ಹರಿದುಬರುವ ಸಾಧ್ಯತೆಯಿದೆ. ಇದರಿಂದ ಸರೋವರ ಒಡೆದು ಭಾರೀ ಪ್ರಮಾಣದ ನೀರು ಕೆಳಭಾಗಕ್ಕೆ ನುಗ್ಗುವ ಆತಂಕ ಹೆಚ್ಚಾಗಿದೆ.

ಭೋಟೆ ಕೋಶಿ, ತ್ರಿಶೂಲಿ ನದಿಗಳಿಗೆ ಎಚ್ಚರಿಕೆ

ಚೋಚೆನ್ ಖೋಲಾ ಮತ್ತು ಪುರೇಪು ತ್ಸಾಂಗ್ಪೊ ನದಿಗಳ ಸಂಗಮದ ಸಮೀಪ ಈ ಸರೋವರ ನಿರ್ಮಾಣವಾಗಿದೆ. ಈ ಎರಡೂ ನದಿಗಳು ಟಿಬೆಟ್‌ನಲ್ಲಿ ಹುಟ್ಟಿ ನೇಪಾಳ ಪ್ರವೇಶಿಸಿ ಭೋಟೆ ಕೋಶಿ ನದಿ ವ್ಯವಸ್ಥೆಯ ಭಾಗವಾಗುತ್ತವೆ. ನೇಪಾಳದ ಪ್ರವಾಹ ಮುನ್ಸೂಚನಾ ವಿಭಾಗವು ಭೋಟೆ ಕೋಶಿ ಮತ್ತು ತ್ರಿಶೂಲಿ ನದಿ ಪ್ರದೇಶಗಳಲ್ಲಿ ಮತ್ತೊಂದು ಪ್ರವಾಹ ಸಂಭವಿಸುವ ಸಾಧ್ಯತೆ ಇದೆ ಎಂದು ಎಚ್ಚರಿಸಿದೆ.

ನದಿಯ ದಡದ ಸಮೀಪ ಹೋಗದಂತೆ ಹಾಗೂ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಕೆಳಹರಿವಿನ ಪ್ರದೇಶಗಳ ಜನರಿಗೆ ಸೂಚಿಸಲಾಗಿದೆ. ಪ್ರವಾಸಿಗರು, ಭದ್ರತಾ ಸಿಬ್ಬಂದಿ ಹಾಗೂ ಶೋಧ ಮತ್ತು ರಕ್ಷಣಾ ತಂಡಗಳೂ ಕಟ್ಟೆಚ್ಚರದಿಂದ ಇರುವಂತೆ ತಿಳಿಸಲಾಗಿದೆ. ಚೀನಾದ ಅಧಿಕಾರಿಗಳು ಸರೋವರದ ಮೇಲೆ ನಿರಂತರ ನಿಗಾ ಇರಿಸಿದ್ದು, ಅದು ಒಡೆದರೆ ಉಂಟಾಗಬಹುದಾದ ಪರಿಣಾಮದ ಕುರಿತು ಪ್ರವಾಹ ಸಿಮ್ಯುಲೇಷನ್ ಮತ್ತು ಅಪಾಯದ ಮೌಲ್ಯಮಾಪನ ನಡೆಸುತ್ತಿದ್ದಾರೆ.

288 ಭಾರತೀಯರು ನಾಪತ್ತೆ

ನೇಪಾಳದ ರಾಷ್ಟ್ರೀಯ ವಿಪತ್ತು ಅಪಾಯ ಕಡಿತ ಮತ್ತು ನಿರ್ವಹಣಾ ಪ್ರಾಧಿಕಾರದ ಪ್ರಕಾರ 826 ಮಂದಿ ಇನ್ನೂ ನಾಪತ್ತೆಯಾಗಿದ್ದಾರೆ. ಇವರಲ್ಲಿ ಸುಮಾರು 590 ಪ್ರವಾಸಿಗರು ಸೇರಿದ್ದಾರೆ. ಭಾರತದ ವಿದೇಶಾಂಗ ಸಚಿವಾಲಯದ ಪ್ರಕಾರ ನಾಪತ್ತೆಯಾದವರಲ್ಲಿ 288 ಮಂದಿ ಭಾರತೀಯ ನಾಗರಿಕರು ಇದ್ದಾರೆ.

ಗುಜರಾತ್‌ನ 11 ಮಂದಿ ಸುಳಿವೇ ಇಲ್ಲ

ನೇಪಾಳ ಪ್ರವಾಹದ ಬಳಿಕ ಗುಜರಾತ್‌ನ 11 ಮಂದಿ ಇನ್ನೂ ನಾಪತ್ತೆಯಾಗಿದ್ದಾರೆ ಅಥವಾ ಸಂಪರ್ಕಕ್ಕೆ ಸಿಕ್ಕಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆರಂಭದಲ್ಲಿ ರಾಜ್ಯದ 12 ಮಂದಿ ನಾಪತ್ತೆಯಾಗಿರುವ ಮಾಹಿತಿ ಲಭ್ಯವಾಗಿತ್ತು. ಬಳಿಕ ವಲ್ಸಾಡ್‌ನ ರೋಮಾ ದಿಲೀಪ್‌ಭಾಯಿ ಇಂಟ್ವಾಲಾ ಸುರಕ್ಷಿತವಾಗಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ನಾಪತ್ತೆಯಾದವರ ಸಂಖ್ಯೆ 11ಕ್ಕೆ ಇಳಿದಿದೆ.

ಪ್ರಸ್ತುತ ಅಹಮದಾಬಾದ್ ಮತ್ತು ಸೂರತ್‌ನ ತಲಾ ಮೂವರು, ಆನಂದ್‌ನ ಇಬ್ಬರು ಹಾಗೂ ರಾಜ್‌ಕೋಟ್‌ನ ಒಬ್ಬರು ನಾಪತ್ತೆಯಾಗಿದ್ದಾರೆ. ಅಮ್ರೇಲಿ ಮತ್ತು ಮೆಹಸಾಣಾದ ತಲಾ ಒಬ್ಬರು ಭಾರತೀಯ ಮೂಲದ ವಿದೇಶಿ ನಾಗರಿಕರಾಗಿದ್ದಾರೆ. ಇವರಲ್ಲಿ ಕೆಲವರು ಕೈಲಾಸ ಮಾನಸ ಸರೋವರ ಪ್ರದೇಶದತ್ತ ಪ್ರಯಾಣಿಸುತ್ತಿದ್ದರೆ, ಇತರರು ರಸುವಾಗಢಿ-ಕೆರೂಂಗ್ ಗಡಿ ಪ್ರದೇಶದ ಫ್ರೆಂಡ್‌ಶಿಪ್ ಬ್ರಿಡ್ಜ್ ಮತ್ತು ಭೋಟೆ ಕೋಶಿ ನದಿ ಸಮೀಪ ಕೊನೆಯದಾಗಿ ಕಾಣಿಸಿಕೊಂಡಿದ್ದರು.

ಮಹಾರಾಷ್ಟ್ರದ 114 ಪ್ರವಾಸಿಗರು ಸಿಲುಕಿರುವ ಶಂಕೆ

ನೇಪಾಳದಲ್ಲಿ ಮಹಾರಾಷ್ಟ್ರದ ಕನಿಷ್ಠ 114 ಪ್ರವಾಸಿಗರು ಸಿಲುಕಿರುವ ಸಾಧ್ಯತೆ ಇದೆ ಎಂದು ರಾಜ್ಯ ಅಧಿಕಾರಿಗಳು ತಿಳಿಸಿದ್ದಾರೆ. ಇವರಲ್ಲಿ 53 ಮಂದಿ ಸುರಕ್ಷಿತವಾಗಿರುವುದು ದೃಢಪಟ್ಟಿದೆ. ಉಳಿದವರ ಕುರಿತು ಮಾಹಿತಿ ಸಂಗ್ರಹಿಸಿ ಪರಿಶೀಲಿಸಲಾಗುತ್ತಿದೆ. 114 ಪ್ರವಾಸಿಗರಲ್ಲಿ ಸುಮಾರು 61 ಮಂದಿ ರಿಚಾ ಟೂರ್ಸ್ ಪ್ರೈವೇಟ್ ಲಿಮಿಟೆಡ್ ಮೂಲಕ ಪ್ರಯಾಣಿಸುತ್ತಿದ್ದರು. ಉಳಿದವರು ಸ್ವತಂತ್ರವಾಗಿ ನೇಪಾಳ ಪ್ರವಾಸ ಕೈಗೊಂಡಿದ್ದರು.

ಸುರಕ್ಷಿತವಾಗಿ ಪತ್ತೆಯಾದ 53 ಮಂದಿ ಸಾಗಾ ಮಾನಸ ಸರೋವರ ಪ್ರದೇಶದಲ್ಲಿ ಇದ್ದಾರೆ ಎಂದು ಮಹಾರಾಷ್ಟ್ರ ವಿಪತ್ತು ನಿರ್ವಹಣಾ ಇಲಾಖೆ ತಿಳಿಸಿದೆ. ಮಹಾರಾಷ್ಟ್ರದ ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರವು ರಿಚಾ ಟೂರ್ಸ್ ಹಾಗೂ ಕೇಂದ್ರ ಗೃಹ ಸಚಿವಾಲಯದ ನವದೆಹಲಿಯ ಇಂಟಿಗ್ರೇಟೆಡ್ ಕಂಟ್ರೋಲ್ ರೂಮ್-ಎಮರ್ಜೆನ್ಸಿ ರೆಸ್ಪಾನ್ಸ್ ವಿಭಾಗದೊಂದಿಗೆ ಸಮನ್ವಯ ಸಾಧಿಸಿ ನಾಪತ್ತೆಯಾದವರ ಪತ್ತೆ ಮತ್ತು ನೆರವಿಗಾಗಿ ಕಾರ್ಯನಿರ್ವಹಿಸುತ್ತಿದೆ.

ಸಾವಿನ ಸಂಖ್ಯೆ ಏರುತ್ತಿರುವ ಬೆನ್ನಲ್ಲೇ ಹೊಸ ಬ್ಯಾರಿಯರ್ ಸರೋವರದ ಆತಂಕ ಮತ್ತಷ್ಟು ಹೆಚ್ಚಿರುವುದರಿಂದ, ನೇಪಾಳದ ನದಿ ಪಾತ್ರದ ಪ್ರದೇಶಗಳಲ್ಲಿ ರಕ್ಷಣಾ ತಂಡಗಳು ಕಟ್ಟೆಚ್ಚರದಲ್ಲಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Nepal Floods: ಭೀಕರ ಪ್ರವಾಹದಲ್ಲಿ 30 ದೇಶಗಳ ನಾಗರೀಕರು ನಾಪತ್ತೆ, ಅಮೆರಿಕದವರೇ ಅತಿ ಹೆಚ್ಚು!

ಪಕ್ಷದ ಹಿತಕ್ಕಾಗಿ ನಾಗೇಂದ್ರ ಯಾವುದೇ ತ್ಯಾಗಕ್ಕೂ ಸಿದ್ಧ, ಆದ್ರೆ...: ಹೈಕಮಾಂಡ್ ಭೇಟಿ ಬಳಿಕ CM ಶಿವಕುಮಾರ್

CSK ಯಲ್ಲಿ ಶೇ. 25 ರಷ್ಟು ಪಾಲು ಕೇಳಿದ್ದಾರೆಯೇ ಧೋನಿ? 3,820 ಕೋಟಿ ರೂ ಕ್ಲೈಮ್ ಹಿಂದಿರುವ ಸತ್ಯವೇನು?

ವಿದ್ಯಾರ್ಥಿಗಳ ವಿರೋಧದ ಬೆನ್ನಲ್ಲೇ NLSIU ಘಟಿಕೋತ್ಸವ ರದ್ದು; 'ಅನಿವಾರ್ಯ ಕಾರಣ' ಎಂದ ವಿವಿ

Yash’s Toxic: ನೆಗೆಟಿವ್ ರಿವ್ಯೂ ನಡುವೆ 'ರೇಟಿಂಗ್' ತೆಗೆದುಹಾಕಿದ ಬುಕ್ ಮೈ ಶೋ; ನಿರೀಕ್ಷಿತ ಕಲೆಕ್ಷನ್ ಇಲ್ವಾ? ನೆಟ್ಟಿಗರಿಂದ ತರಾಟೆ!