ಕಠ್ಮಂಡು: ನೇಪಾಳದ ವಿನಾಶಕಾರಿ ಪ್ರವಾಹದಿಂದ ಬಲಿಯಾದವರ ಸಂಖ್ಯೆ ಕ್ಷಣ ಕ್ಷಣಕ್ಕೂ ಹೆಚ್ಚಾಗುತ್ತಿದೆ. ಶನಿವಾರವೂ ಶೋಧ ಕಾರ್ಯಾಚರಣೆ ಮುಂದುವರೆದಿದ್ದು, ಹಲವು ಮಂದಿಯನ್ನು ರಕ್ಷಣಾ ಪಡೆಗಳು ರಕ್ಷಿಸಿವೆ. ಈ ಮಧ್ಯೆ ದಿಢೀರ್ ಪ್ರವಾಹದಿಂದ ಬದುಕುಳಿದವರು ಭಯಾನಕ ಅನುಭವಗಳನ್ನು ಬಿಚ್ಚಿಟ್ಟಿದ್ದಾರೆ.
ಸುತ್ತಲೂ ಕುಸಿಯುತ್ತಿದ್ದ ಮನೆಗಳು ಮತ್ತು ವಸತಿ ಪ್ರದೇಶಗಳ ಮೂಲಕ ನುಗ್ಗಿದ ನೀರು, ಮಣ್ಣು ಹಾಗೂ ಅವಶೇಷಗಳ ರಭಸಕ್ಕೆ ಜನರು ಕೊಚ್ಚಿಹೋಗುತ್ತಿದ್ದರು. ಕೆಲವರು ಬದುಕುಳಿಯಲು ಬೆಟ್ಟದ ಮೇಲ್ಭಾಗಕ್ಕೆ ಓಡಿ ಪ್ರಾಣ ಉಳಿಸಿಕೊಂಡಿದ್ದಾಗಿ ಹೇಳಿಕೊಂಡಿದ್ದಾರೆ.
ಸ್ನೇಹಿತರು ಮತ್ತು ಪ್ರೀತಿಪಾತ್ರರು ಪ್ರವಾಹಕ್ಕೆ ಕೊಚ್ಚಿಹೋಗುವುದನ್ನು ಇತರರು ಅಸಹಾಯಕರಾಗಿ ನೋಡುತ್ತಿದ್ದರು. ನಂತರ ಅಲ್ಲಿಗೆ ನೋಡಿದವರಿಗೆ ಮಾರುಕಟ್ಟೆಗಳು ಮಣ್ಣಿನಲ್ಲಿ ಸಂಪೂರ್ಣ ಹೂತುಹೋಗಿರುವುದು ಮತ್ತು ಕಾಣೆಯಾದ ಸಂಬಂಧಿಕರಿಗಾಗಿ ಕುಟುಂಬಸ್ಥರು ಹುಡುಕಾಡುತ್ತಿರುವುದು ಕಂಡುಬಂದಿತು ಎಂದು ವಿವರಿಸಿದ್ದಾರೆ.
'ಆರಂಭದಲ್ಲಿ ಭೂಮಿ ಕಂಪಿಸುತ್ತಿದೆ ಎಂದು ಅನ್ನಿಸಿತು. ನಂತರ, ಭೋಟೇಕೋಷಿ ನದಿಯ ದಡದಲ್ಲಿದ್ದ ಮನೆಗಳತ್ತ ನೀರು, ಮಣ್ಣು ಮತ್ತು ಕಲ್ಲುಗಳ ಬೃಹತ್ ರಾಶಿಯೇ ವೇಗವಾಗಿ ನುಗ್ಗಿಬರುವುದನ್ನು ಟಿಮುರೆ ಮಾರುಕಟ್ಟೆಯಲ್ಲಿ ನೋಡಿದೆ. ಆಗ ಎತ್ತರದ ಪ್ರದೇಶಕ್ಕೆ ಹೋಗುವುದನ್ನು ಬಿಟ್ಟು ಬೇರೆ ದಾರಿಯೇ ಇಲ್ಲ 'ಎಂದು ಅರಿವಾಯಿತು ಎಂದು ದೀಪಕ್ ತಮಾಂಗ್ ತಿಳಿಸಿದರು.
ನೆರೆಯ ಸಿಂಧುಪಾಲ್ಚೋಕ್ ಜಿಲ್ಲೆಯ ನಿವಾಸಿಯಾಗಿರುವ ತಮಾಂಗ್, ಬುಧವಾರ ಹಠಾತ್ ಪ್ರವಾಹ ಸಂಭವಿಸಿದಾಗ ನೇಪಾಳ-ಟಿಬೆಟ್ ಗಡಿಯಲ್ಲಿರುವ ಟಿಮುರೆ ಪಟ್ಟಣದಲ್ಲಿದ್ದರು. ಮನೆಯಿಂದ ಹೊರಬಂದು ಬೆಟ್ಟದ ಮೇಲೆ ಓಡಿದಾಗ, ಪ್ರಬಲ ಪ್ರವಾಹದಿಂದಾಗಿ ಆಗಲೇ ಕೆಲವು ಮನೆಗಳು ಕುಸಿದುಬಿದ್ದಿದ್ದವು ಎಂದು ಅವರು ನೆನಪಿಸಿಕೊಂಡರು ಎಂದು ನೇಪಾಳಿ ಸುದ್ದಿ ಪೋರ್ಟಲ್ 'ಆನ್ಲೈನ್ಖಬರ್' ವರದಿ ಮಾಡಿದೆ.
ಜೀವನ ಮತ್ತು ಸಾವಿನ ನಡುವೆ ಕೊನೆಯ ಓಟ! ನನಗೆ ಬೇರೆ ಆಯ್ಕೆ ಇರಲಿಲ್ಲ. ನನ್ನ ಹಿಂದೆ ರಭಸದಿಂದ ಪ್ರವಾಹ ಬರುತಿತ್ತು. ನನ್ನ ಮುಂದೆ ಗೋಡೆಯಂತಿದ್ದ ಬೆಟ್ಟವಿತ್ತು. ಗೋಡೆಯಂತೆ ಕಾಣುತ್ತಿದ್ದ ಆ ಜಾಗವನ್ನು ಹತ್ತಲು ಹೆಣಗಾಡಿದೆ. ಮೇಲಕ್ಕೆ ಏರಲು ಮುಳ್ಳಿನ ಪೊದೆಗಳು ಮತ್ತು ಚುಚ್ಚುವ ಸಸ್ಯಗಳನ್ನು ಹಿಡಿದುಕೊಳ್ಳುವಾಗ ಅವರು ಹಲವು ಬಾರಿ ಬಿದಿದ್ದೇನೆ. ಅದು ಜೀವನ ಮತ್ತು ಸಾವಿನ ನಡುವಿನ ನನ್ನ ಕೊನೆಯ ಓಟವಾಗಿತ್ತು ಎಂದು ಅವರು ಹೇಳಿದರು.
ಕೆಳಗೆ ಪ್ರವಾಹ ರಭಸದಿಂದ ಹರಿಯುತ್ತಿದ್ದಾಗ ಜನರು ದಿಕ್ಕಪಾಲಾಗಿ ಓಡುತ್ತಿದ್ದರು. ಪ್ರತಿ ಬಾರಿ ಬಿದ್ದಾಗಲೂ, ಇದು ತನ್ನ ಜೀವನದ ಕೊನೆಯ ಕ್ಷಣವಿರಬಹುದು ಎಂದು ಅನಿಸುತಿತ್ತು. ಅಂತಿಮವಾಗಿ ಬೆಟ್ಟದ ತುದಿಯನ್ನು ತಲುಪಿದ್ದಾಗಿ ಭಯಾನಕ ಘಟನೆಯನ್ನು ಹೇಳಿಕೊಂಡಿದ್ದಾರೆ.
ನನ್ನ ಕಣ್ಣಮುಂದೆಯೇ ನನ್ನ ಸ್ನೇಹಿತರು ಅಲೆಗೆ ಕೊಚ್ಚಿ ಹೋದರು: ಬೆಟ್ಟದ ತುದಿಯಿಂದ ಜನರು ಪ್ರವಾಹಕ್ಕೆ ಕೊಚ್ಚಿಹೋಗುವುದನ್ನು ನೋಡಿದೆ. ಅವರಲ್ಲಿ ಅವರ ಸ್ನೇಹಿತರೂ ಇದ್ದರು. "ನನ್ನ ಕಣ್ಣಮುಂದೆಯೇ ನನ್ನ ಸ್ನೇಹಿತರು ಅಲೆಗೆ ಕೊಚ್ಚಿಹೋಗುತ್ತಿದ್ದಾಗ ನಾನೇನೂ ಮಾಡಲು ಸಾಧ್ಯವಾಗಲಿಲ್ಲ ಎಂದು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಅಂತಿಮವಾಗಿ ತಮಾಂಗ್ಗೆ ಕಾಡಿನಲ್ಲಿ ಮರವನ್ನು ಸಂಗ್ರಹಿಸಲು ಬಳಸುತ್ತಿದ್ದ ಹಳೆಯ ಗೋದಾಮೊಂದು ಸಿಕ್ಕಿತು. ಅಲ್ಲಿ ತಮ್ಮನ್ನು ತಾವು ರಕ್ಷಿಸಿಕೊಂಡಿದ್ದ ಇತರ ಡಜನ್ ಗಟ್ಟಲೇ ಜನರು ಆಶ್ರಯ ಪಡೆದಿದ್ದರು. ಮಳೆ ಸುರಿಯುತ್ತಿದ್ದರೂ ಹಾಸಿಗೆಯಿಲ್ಲದೆ ಅಲ್ಲಿ ರಾತ್ರಿ ಕಳೆದರು. ಕೊನೆಗೆ ಸುಮಾರು 24 ಗಂಟೆಗಳ ನಂತರ ನನ್ನನ್ನು ರಕ್ಷಿಸಲಾಯಿತು ಎಂದು ದೀಪಕ್ ತಮಾಂಗ್ ತಿಳಿಸಿದ್ದಾರೆ.