ಪಶ್ಚಿಮ ಆಫ್ರಿಕಾದ ನೈಜರ್ನ ಸಹಾರಾ ಮರುಭೂಮಿಯಿಂದ ಹೃದಯವಿದ್ರಾವಕ ಘಟನೆ ನಡೆದಿದೆ. ಈದ್ ಅಲ್-ಅಧಾ ಆಚರಿಸಲು ಮನೆಗೆ ಮರಳುತ್ತಿದ್ದ ನಲವತ್ತೊಂಬತ್ತು ಜನರು ಬಾಯಾರಿಕೆಯಿಂದಾಗಿ ನರಳಿ ಸಾವನ್ನಪ್ಪಿದರು. ಸುಡುವ ಶಾಖದ ನಡುವೆ ಮರುಭೂಮಿಯ ಮಧ್ಯದಲ್ಲಿ ಟ್ರಕ್ ಕೆಟ್ಟು ನಿಂತಿದ್ದು ಈ ಪ್ರಯಾಣಿಕರಿಗೆ ಮಾರಕವಾಗಿದೆ. ಈ ದುರಂತ ಅಪಘಾತವು ಮತ್ತೊಮ್ಮೆ ಸಹಾರಾದಲ್ಲಿನ ಅಪಾಯಕಾರಿ ರಸ್ತೆಗಳು ಮತ್ತು ಕಠಿಣ ಪರಿಸ್ಥಿತಿಗಳನ್ನು ಎತ್ತಿ ತೋರಿಸಿದೆ.
ನೈಜರ್ನ ಅಗಾಡೆಜ್ ಪ್ರಾಂತ್ಯದ ಅಧಿಕಾರಿಗಳ ಪ್ರಕಾರ, ಪುರುಷರು ತಮ್ಮ ಕುಟುಂಬಗಳೊಂದಿಗೆ ಈದ್ ಆಚರಿಸಲು ಮಾಲಿಯಿಂದ ನೈಜರ್ಗೆ ಹಿಂತಿರುಗುತ್ತಿದ್ದರು. ಪ್ರಯಾಣದ ಸಮಯದಲ್ಲಿ, ಅವರ ಟ್ರಕ್ ಅಸ್ಮಾಕಾದಿಂದ ಸುಮಾರು 80 ಕಿಲೋಮೀಟರ್ ದೂರದಲ್ಲಿ ಇದ್ದಕ್ಕಿದ್ದಂತೆ ಕೆಟ್ಟುಹೋಯಿತು. ಚಾಲಕ, ಅವರ ಸಹಾಯಕರು ಮತ್ತು ಪ್ರಯಾಣಿಕರು ಟ್ರಕ್ ಅನ್ನು ದುರಸ್ತಿ ಮಾಡಲು ತೀವ್ರವಾಗಿ ಪ್ರಯತ್ನಿಸಿದರು. ಆದರೆ ವಿಫಲರಾದರು. ತಮ್ಮ ಬಳಿಯಿದ್ದ ನೀರು ಸಹ ಖಾಲಿಯಾಯಿತು. ಪ್ರಯಾಣಿಕರು ಸುಡುವ ಬಿಸಿಲು ಮತ್ತು ತೀವ್ರ ತಾಪಮಾನದಲ್ಲಿ ಸಿಲುಕಿಕೊಂಡರು. ಪೂರೈಕೆಗೆ ಯಾವುದೇ ಮಾರ್ಗವಿಲ್ಲದೆ, 49 ಜನರು ಒಬ್ಬೊಬ್ಬರಾಗಿ ಸಾವನ್ನಪ್ಪಿದರು.
ಈ ಘಟನೆ ನಡುವೆ ಇಬ್ಬರು ಪವಾಡಸದೃಶ್ಯ ಬದುಕುಳಿದಿದ್ದಾರೆ. ತಮ್ಮ ಜೀವಗಳನ್ನು ಉಳಿಸಿಕೊಳ್ಳಲು, ಅವರು ಸುಡುವ ಶಾಖದಲ್ಲಿ ಸುಮಾರು 50 ಕಿಲೋಮೀಟರ್ ನಡೆದುಕೊಂಡು ಹೋದರು. ಅವರು ಮೊದಲು ನೀರಿನ ಮೂಲವನ್ನು ತಲುಪಿದರು. ನಂತರ ಅಸ್ಸಾಮಕಾ ಪಟ್ಟಣವನ್ನು ತಲುಪಿ ಈ ಭಯಾನಕ ಘಟನೆಯ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದರು. ಮಾಹಿತಿ ಪಡೆದ ನಂತರ, ಗವರ್ನರ್ ಜನರಲ್ ಇಬ್ರಾಹಿಂ ಬುಲಾಮಾ ಇಸಾ ನೇತೃತ್ವದ ತಂಡವು ಸ್ಥಳಕ್ಕೆ ಆಗಮಿಸಿತ್ತು. ಆದರೆ ದುರಾದೃಷ್ಟವಶಾತ್ ಟ್ರಕ್ ಅಕ್ಕಪಕ್ಕ ಹೆಣಗಳ ರಾಶಿ ನೋಡಿ ಕಂಗಲಾದರು. ರಕ್ಷಣಾ ಕಾರ್ಯಕರ್ತರು ಸಾಮೂಹಿಕ ಸಮಾಧಿ ಮಾಡಿದರು.
ಯುರೋಪ್ನಲ್ಲಿ ಉತ್ತಮ ಭವಿಷ್ಯವನ್ನು ಬಯಸುವ ನಿರಾಶ್ರಿತರು ಮತ್ತು ವಲಸಿಗರಿಗೆ ಈ ಪ್ರದೇಶವನ್ನು ಪ್ರಮುಖ ಸಾರಿಗೆ ಕೇಂದ್ರವೆಂದು ಪರಿಗಣಿಸಲಾಗಿದೆ. ಮಾಲಿಯ ತಲ್ಹಾಂಡೆಕ್ ಪಟ್ಟಣದಿಂದ ಹೊರಟ ಟ್ರಕ್ ಹಲವಾರು ದಿನಗಳವರೆಗೆ ಮರುಭೂಮಿಯಲ್ಲಿ ಸಂಚರಿಸಿತು. ಸಹಾರಾದ ಈ ಭಾಗವು ಅದರ ಒರಟಾದ ಭೂಪ್ರದೇಶ ಮತ್ತು ದಾಖಲೆಯ ತಾಪಮಾನಕ್ಕೆ ಹೆಸರುವಾಸಿಯಾಗಿದೆ. ಅಲ್ಲಿ ಸಣ್ಣ ತಾಂತ್ರಿಕ ದೋಷವೂ ಸಹ ಸಾವಿಗೆ ಕಾರಣವಾಗಬಹುದು. ಅಗಾಡೆಜ್ ಆಡಳಿತವು ಈ ಘಟನೆಯನ್ನು ಒಂದು ಪ್ರಮುಖ ಮಾನವೀಯ ದುರಂತ ಎಂದು ಬಣ್ಣಿಸಿದೆ.