ಢಾಕಾ: ಬಾಂಗ್ಲಾದೇಶದಲ್ಲಿ ಭಗವಾನ್ ಶ್ರೀರಾಮನ ಮೂರ್ತಿಗೆ ಅಪಮಾನ ಮಾಲಾಗಿದೆ ಎಂಬ ಆರೋಪ ಕೇಳಿ ಬಂದಿದ್ದು, ಈ ಹಿನ್ನೆಲೆಯಲ್ಲಿ ಹಿಂದೂ ಸಮುದಾಯದ ಸದಸ್ಯರು ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ ಶುಕ್ರವಾರ ಭಾರಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯ ಭಾಗವಾಗಿ ಟಾರ್ಚ್ಲೈಟ್ ಮೆರವಣಿಗೆ ಆಯೋಜಿಸಲಾಯಿತು ಹಾಗೂ ಘಟನೆಗೆ ಕಾರಣರಾದವರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಯಿತು.
ಇತ್ತೀಚೆಗೆ ಉತ್ತರ ಬಾಂಗ್ಲಾದೇಶದ ಗೈಬಾಂಧಾ ಜಿಲ್ಲೆಯ ಪಲಾಶ್ಬಾರಿಯಲ್ಲಿ ಕೆಲ ದುಷ್ಕರ್ಮಿಗಳು ಶ್ರೀರಾಮನ ಮೂರ್ತಿ ಮತ್ತು ಚಿತ್ರಕ್ಕೆ ಅವಮಾನ ಮಾಡಿದ್ದು, ಮೂರ್ತಿಯ ಮೇಲೆ ಚಪ್ಪಲಿ ಎಸೆದು ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎನ್ನಲಾಗಿದೆ.
ಇದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ವಿವಿಧ ಹಿಂದೂ ಸಂಘಟನೆಗಳ ಸದಸ್ಯರು ಶುಕ್ರವಾರ ಸಂಜೆ 5 ಗಂಟೆಯಿಂದ ಢಾಕಾದ ಶಾಹ್ಬಾಗ್ ಚೌಕದಲ್ಲಿ ಸೇರಿ ಪ್ರತಿಭಟನೆ ನಡೆಸಿದರು. ವಿವಿಧ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳೂ ಇದರಲ್ಲಿ ಭಾಗವಹಿಸಿದರು.
ಗೈಬಾಂಧಾ ಜಿಲ್ಲೆಯಲ್ಲಿನ ರಾಮಮಂದಿರ ನಿರ್ಮಾಣ ಯೋಜನೆಗೆ ವಿರೋಧ ವ್ಯಕ್ತಪಡಿಸಿದ ಕೆಲವರು, ರಾಮನ ಚಿತ್ರವನ್ನು ಧ್ವಂಸಗೊಳಿಸಿ, ಮೂರ್ತಿಗೆ ಚಪ್ಪಲಿ ಎಸೆದಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಅಲ್ಲಿನ ದೇವಸ್ಥಾನ ನಿರ್ಮಾಣ ಸ್ಥಳದಲ್ಲಿ 81 ಅಡಿ ಎತ್ತರದ ಶ್ರೀರಾಮನ ಪ್ರತಿಮೆ ನಿರ್ಮಾಣವಾಗುತ್ತಿತ್ತು ಎನ್ನಲಾಗಿದೆ. ಈ ಘಟನೆಯ ಬಳಿಕ ನಿರ್ಮಾಣ ಕಾಮಗಾರಿ ಸ್ಥಗಿತಗೊಂಡಿದೆ ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ.
ಘಟನೆ ಸಂಬಂಧ ಪ್ರಕರಣ ದಾಖಲಾಗಿದ್ದರೂ ಇದೂವರೆಗೆ ಯಾರನ್ನೂ ಬಂಧಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ತಪ್ಪಿತಸ್ಥರನ್ನು ತಕ್ಷಣ ಬಂಧಿಸಿ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಪ್ರತಿಭಟನೆಯ ಅಂಗವಾಗಿ ಶಾಹ್ಬಾಗ್ನಿಂದ ರಾಷ್ಟ್ರೀಯ ಪತ್ರಿಕಾ ಕ್ಲಬ್ವರೆಗೆ ಟಾರ್ಚ್ಲೈಟ್ ಮೆರವಣಿಗೆ ನಡೆದಿದ್ದು, ಈ ವೇಳೆ ಪ್ರತಿಭಟನಾಕಾರರು "ಜೈ ಶ್ರೀರಾಮ್" ಘೋಷಣೆಗಳನ್ನು ಕೂಗಿದ್ದಾರೆ.
ಇದಕ್ಕೂ ಮುನ್ನ ಹಿಂದೂ ಮಹಾಜೋಟ್ನ ವಿವಿಧ ಬಣಗಳು ರಾಷ್ಟ್ರೀಯ ಪತ್ರಿಕಾ ಕ್ಲಬ್ ಎದುರು ಮಾನವ ಸರಪಳಿ ಹಾಗೂ ಪತ್ರಿಕಾಗೋಷ್ಠಿಗಳನ್ನು ಆಯೋಜಿಸಿ ಘಟನೆಯನ್ನು ಖಂಡಿಸಿದ್ದವು.
ಇದೇ ವೇಳೆ, ರಾಮನಿಗೆ ಅವಮಾನ ಮಾಡಲಾಗಿದೆ ಎಂಬ ಆರೋಪದ ವಿರುದ್ಧ ದೇಶವ್ಯಾಪಿ ಪ್ರತಿಭಟನೆ ನಡೆಸುವುದಾಗಿ ರಾಷ್ಟ್ರೀಯ ಪೂಜಾ ಉತ್ಸವ ಸಮಿತಿಯೂ ಘೋಷಿಸಿದೆ.