ಬೈರುತ್: ಯುಎಸ್-ಇಸ್ರೇಲಿನ ಜಂಟಿ ವೈಮಾನಿಕ ದಾಳಿಯಲ್ಲಿ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಮತ್ತು ಅನೇಕ ಮಿಲಿಟರಿ ಮತ್ತು ರಾಜಕೀಯ ಮುಖಂಡರನ್ನು ಕಳೆದುಕೊಂಡು ನಂತರ ಇರಾನ್ ಭಾನುವಾರ ಪ್ರತೀಕಾರದ ಕ್ರಮ ಕೈಗೊಂಡಿದ್ದರಿಂದ ಮೂರನೇ ದಿನವಾದ ಸೋಮವಾರವೂ ಮಧ್ಯ ಪ್ರಾಚ್ಯ ಹೊತ್ತಿ ಹೊರಿಯುತ್ತಲೆ ಇದೆ.
ಈ ಮಧ್ಯೆ ಇರಾನ್ನ ಮಿಲಿಟರಿ ನೂರಾರು ಕ್ಷಿಪಣಿ ಮತ್ತು ಡ್ರೋನ್ ದಾಳಿಗಳೊಂದಿಗೆ ಮಧ್ಯಪ್ರಾಚ್ಯದಾದ್ಯಂತ ಪ್ರತೀಕಾರ ತೀರಿಸಿಕೊಂಡಿತು. ವ್ಯಾಪಕ ಕಾರ್ಯಾಚರಣೆಯಲ್ಲಿ ಅಮೆರಿಕದ ಮೂವರು ಸಾವನ್ನಪ್ಪಿರುವುದನ್ನು ಯುಎಸ್ ದೃಢಪಡಿಸಿದೆ.
ಇರಾನ್ ನೆರೆಯ ಕೊಲ್ಲಿ ರಾಷ್ಟ್ರಗಳ ಮೇಲೆ ಪ್ರತೀಕಾರದ ವೈಮಾನಿಕ ದಾಳಿಯನ್ನು ಪ್ರಾರಂಭಿಸಿದ ನಂತರ, ದುಬೈ ಮತ್ತು ದೋಹಾದ ಬಳಿ ಎರಡನೇ ದಿನವೂ ಜೋರಾಗಿ ಸ್ಫೋಟಗಳು ಕೇಳಿಬರುತ್ತಿದ್ದಂತೆಯೇ ಇರಾನ್ ಮೇಲೆ ಮತ್ತೊಂದು ವೈಮಾನಿಕ ದಾಳಿ ಆರಂಭಿಸಿರುವುದಾಗಿ ಇಸ್ರೇಲ್ ತಿಳಿಸಿದೆ.
ಹಿಜ್ಬುಲ್ಲಾ ರಾತ್ರೋರಾತ್ರಿ ಇಸ್ರೇಲ್ ವಿರುದ್ಧ ದಾಳಿ ಪ್ರಾರಂಭಿಸಿದ್ದು, ಏನಾದರೂ ಆದರೇ ಸಂಪೂರ್ಣ ಜವಾಬ್ದಾರಿಯನ್ನು ಹೊರುತ್ತಾರೆ ಎಂದು ಇಸ್ರೇಲ್ ರಕ್ಷಣಾ ಪಡೆಗಳ ಜನರಲ್ ಸ್ಟಾಫ್ ಮುಖ್ಯಸ್ಥ ಇಯಾಲ್ ಝಮೀರ್ ಹೇಳಿದ್ದಾರೆ.
ಇಸ್ರೇಲ್ನ ಭದ್ರತೆಗೆ ಬೆದರಿಕೆ ಹಾಕುವ ಯಾವುದೇ ರಾಷ್ಟ್ರವೂ ತೀವ್ರವಾದ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ. ಉತ್ತರದ ಗಡಿಯುದ್ದಕ್ಕೂ ಇಸ್ರೇಲಿ ನಾಗರಿಕರು ಅಥವಾ ಸಮುದಾಯಗಳಿಗೆ ಹಾನಿಯಾಗಲು ಮಿಲಿಟರಿ ಅನುಮತಿಸುವುದಿಲ್ಲ ಎಂದು ಅವರು ಖಡಕ್ ಸೂಚನೆ ನೀಡಿದ್ದಾರೆ.
ಕುವೈತ್ ಸೇನೆಯು ತನ್ನ ವಾಯು ರಕ್ಷಣಾ ಘಟಕಗಳಿಂದ ಸೋಮವಾರ ಮಧ್ಯ ಕುವೈತ್ನ ಮೇಲೆ ಹಲವು ವೈಮಾನಿಕ ದಾಳಿಯನ್ನು ತಡೆದಿರುವುದಾಗಿ ತಿಳಿಸಿದೆ. ತ್ವರಿತ ಕಾರ್ಯಾಚರಣೆಯಿಂದ ಯಾವುದೇ ಸಾವುನೋವುಗಳು ವರದಿಯಾಗಿಲ್ಲ ಎಂದು ವಿವರಿಸಿದೆ. ರಾಷ್ಟ್ರೀಯ ವಾಯುಪ್ರದೇಶವನ್ನು ರಕ್ಷಿಸಲುು ಗುರಿಗಳನ್ನು ಪತ್ತೆಹಚ್ಚಿ ಹೊಡೆದುಹಾಕಲಾಗಿದೆ ಎಂದು ರಕ್ಷಣಾ ಸಚಿವಾಲಯದ ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕುವೈತ್ನ ಸಶಸ್ತ್ರ ಪಡೆಗಳು ಯಾವುದೇ ಬೆದರಿಕೆಗಳನ್ನು ಎದುರಿಸಲು ಸಂಪೂರ್ಣವಾಗಿ ಸಿದ್ಧತೆಯಲ್ಲಿದೆ ಮತ್ತು ದೇಶದ ಭದ್ರತೆ ಮತ್ತು ಸ್ಥಿರತೆಯನ್ನು ಕಾಪಾಡಿಕೊಳ್ಳಲು ನಿರಂತರವಾಗಿ ಬದ್ಧವಾಗಿರುವುದಾಗಿ ವಕ್ತಾರರು ಹೇಳಿದ್ದಾರೆ.