ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಟಲಿಯ ರಾಜಧಾನಿ ರೋಮ್ಗೆ ಭೇಟಿ ನೀಡಿದ್ದು, ಮೋದಿಯವರಿಗೆ ಇಟಲಿ ಪ್ರಧಾನಮಂತ್ರಿ ಜಾರ್ಜಿಯಾ ಮೆಲೋನಿ ಆತ್ಮೀಯ ಸ್ವಾಗತ ಕೋರಿದ್ದಾರೆ.
ಪ್ರಧಾನಿ ಮೋದಿಯವರಿಗೆ ಸ್ವಾಗತ ಕೋರಿರುವ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಜಾರ್ಜಿಯಾ ಮೆಲೋನಿ ಅವರು, “Welcome to Rome, My Friend” ಎಂದು ಹೇಳಿದ್ದು, ಮೋದಿ ಜೊತೆಗಿನ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಈ ನಡುವೆ ಪ್ರಧಾನಿ ಮೋದಿಯವರೂ ಕೂಡ ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡಿದ್ದು, ರೋಮ್ಗೆ ಭೇಟಿ ನೀಡಿದ ಬಳಿಕ ಪ್ರಧಾನಿ ಮೆಲೋನಿ ಜೊತೆ ಭೋಜನ ಕೂಟದಲ್ಲಿ ಭಾಗವಹಿಸುವ ಅವಕಾಶ ದೊರೆಯಿತು. ಬಳಿಕ ಐತಿಹಾಸಿಕ ಕೊಲೊಸಿಯಂಗೆ ಭೇಟಿ ನೀಡಿದೆವು. ವಿವಿಧ ಮಹತ್ವದ ವಿಷಯಗಳ ಕುರಿತು ಪರಸ್ಪರ ಅಭಿಪ್ರಾಯ ವಿನಿಮಯ ಮಾಡಿಕೊಂಡೆವು. ಇಂದು ನಡೆಯಲಿರುವ ಮಾತುಕತೆಗಾಗಿ ಎದುರು ನೋಡುತ್ತಿದ್ದೇನೆ. ಭಾರತ–ಇಟಲಿ ಸ್ನೇಹವನ್ನು ಇನ್ನಷ್ಟು ಬಲಪಡಿಸುವ ಬಗ್ಗೆ ಚರ್ಚೆಯನ್ನು ಮುಂದುವರಿಸಲಿದ್ದೇವೆ ಎಂದು ಹೇಳಿದ್ದಾರೆ.
ಪ್ರಧಾನಿ ಮೋದಿ ರೋಮ್ಗೆ ತಲುಪುತ್ತಿದ್ದಂತೆಯೇ ಅನಿವಾಸಿ ಭಾರತೀಯರು ಭರ್ಜರಿ ಸ್ವಾಗತ ಕೋರಿದ್ದಾರೆ. ಭಾರತೀಯ ಧ್ವಜಗಳನ್ನು ಹಿಡಿದು “ಮೋದಿ ಮೋದಿ” ಘೋಷಣೆ ಕೂಗಿದ ಅನಿವಾಸಿ ಭಾರತೀಯರು ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ತಮ್ಮ ಅಭಿಮಾನ ವ್ಯಕ್ತಪಡಿಸಿದರು.
ಕೆಲ ಕಲಾವಿದರು ಭಾರತೀಯ ಶಾಸ್ತ್ರೀಯ ಸಂಗೀತ ಪ್ರದರ್ಶನ ನೀಡಿದರೆ, ಯುವಕರು ಭಾರತ–ಇಟಲಿ ಸ್ನೇಹವನ್ನು ಪ್ರತಿಬಿಂಬಿಸುವ ಕಲಾ ಪ್ರದರ್ಶನಗಳನ್ನು ಆಯೋಜಿಸಿದರು.
ಮೋದಿ ಅವರು ಅಲ್ಲಿನ ಭಾರತೀಯ ಸಮುದಾಯದವರ ಜೊತೆ ಕೆಲ ಸಮಯ ಮಾತುಕತೆ ನಡೆಸಿ, ಮಕ್ಕಳೊಂದಿಗೆ ಫೋಟೋ ತೆಗೆಸಿಕೊಂಡರು.
ಈ ಭೇಟಿಯ ಸಂದರ್ಭದಲ್ಲಿ ಪ್ರಧಾನಿ ಮೋದಿ ಇಟಲಿ ಅಧ್ಯಕ್ಷ ಸರ್ಜಿಯೋ ಮತ್ತರೆಲ್ಲಾ ಅವರನ್ನು ಸಹ ಭೇಟಿಯಾಗಲಿದ್ದಾರೆ.
ಭಾರತ ಮತ್ತು ಇಟಲಿ ನಡುವಿನ ಜಂಟಿ ಕಾರ್ಯಯೋಜನೆ 2025–2029 ಅನುಷ್ಠಾನ ಪ್ರಗತಿ, ಜಾಗತಿಕ ಭದ್ರತೆ, ಯುರೋಪ್–ಆಶಿಯಾ ಸಂಪರ್ಕ ವಿಸ್ತರಣೆ ಹಾಗೂ ಅಂತರರಾಷ್ಟ್ರೀಯ ರಾಜಕೀಯ ಬೆಳವಣಿಗೆಗಳ ಕುರಿತೂ ಉಭಯ ನಾಯಕರು ಚರ್ಚಿಸುವ ಸಾಧ್ಯತೆ ಇದೆ.
ಇತ್ತೀಚಿನ ವರ್ಷಗಳಲ್ಲಿ ಪ್ರಧಾನಿ ಮೋದಿ ಮತ್ತು ಜಾರ್ಜಿಯಾ ಮೆಲೋನಿ ನಡುವೆ ಬೆಳೆದಿರುವ ಆತ್ಮೀಯತೆ, ಭಾರತ–ಇಟಲಿ ಸಂಬಂಧಗಳಿಗೆ ಹೊಸ ವೇಗ ನೀಡಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಐದು ರಾಷ್ಟ್ರಗಳ ಪ್ರವಾಸದ ಅಂತಿಮ ಹಂತವಾಗಿ ಪ್ರಧಾನಿ ಮೋದಿ ಇಟಲಿ ಪ್ರವಾಸ ಕೈಗೊಂಡಿದ್ದು, ಈ ಭೇಟಿ ರಾಜತಾಂತ್ರಿಕ ಮತ್ತು ಆರ್ಥಿಕ ದೃಷ್ಟಿಯಿಂದ ಮಹತ್ವ ಪಡೆದುಕೊಂಡಿದೆ.
ರೋಮ್ನಲ್ಲಿ ಪ್ರಧಾನಿ ಮೋದಿ ಮತ್ತು ಜಾರ್ಜಿಯಾ ಮೆಲೋನಿ ನಡುವೆ ನಡೆಯಲಿರುವ ದ್ವಿಪಕ್ಷೀಯ ಮಾತುಕತೆಯಲ್ಲಿ ಭಾರತ–ಇಟಲಿ ಸಂಬಂಧಗಳ ಮತ್ತಷ್ಟು ಬಲವರ್ಧನೆಗೆ ಒತ್ತು ನೀಡಲಾಗುತ್ತಿದೆ.
ವ್ಯಾಪಾರ ಮತ್ತು ಹೂಡಿಕೆ, ರಕ್ಷಣಾ ಸಹಕಾರ, ಸಮುದ್ರ ಭದ್ರತೆ, ತಂತ್ರಜ್ಞಾನ, ಹಸಿರು ಇಂಧನ, ಕೃತಕ ಬುದ್ಧಿಮತ್ತೆ ಮತ್ತು ಇಂಡಿಯಾ–ಮಿಡಲ್ ಈಸ್ಟ್–ಯುರೋಪ್ ಎಕನಾಮಿಕ್ ಕಾರಿಡಾರ್ (IMEC) ಯೋಜನೆ ಕುರಿತಂತೆ ಚರ್ಚೆಗಳು ನಡೆಯಲಿವೆ ಎಂದು ವರದಿಗಳು ತಿಳಿಸಿವೆ.