ಕೀವ್: ಉಕ್ರೇನ್ನ ವಿವಿಧ ನಗರಗಳ ಮೇಲೆ ರಷ್ಯಾ ನಡೆಸಿದ ಇತ್ತೀಚಿನ ಭೀಕರ ಕ್ಷಿಪಣಿ ಮತ್ತು ಡ್ರೋನ್ ದಾಳಿಯಲ್ಲಿ ಓರ್ವ ಭಾರತೀಯ ನಾಗರಿಕ ಸೇರಿ ಕನಿಷ್ಠ 12 ಜನರು ಸಾವನ್ನಪ್ಪಿದ್ದಾರೆ ಎಂದು ಉಕ್ರೇನ್ ಅಧ್ಯಕ್ಷ ವೊಲೋಡಿಮಿರ್ ಝೆಲೆನ್ಸ್ಕಿ (Volodymyr Zelensky) ಮಂಗಳವಾರ ಖಚಿತಪಡಿಸಿದ್ದಾರೆ.
ಈ ಭೀಕರ ವೈಮಾನಿಕ ದಾಳಿಯಿಂದಾಗಿ ನೂರಾರು ನಾಗರಿಕರು ಗಾಯಗೊಂಡಿದ್ದು, ಹಲವು ವಸತಿ ಸಂಕೀರ್ಣಗಳು ಧ್ವಂಸಗೊಂಡಿವೆ ಎಂದು ತಿಳಿಸಿದ್ದಾರೆ.
ಸೋಮವಾರ ಸಂಜೆ 6 ಗಂಟೆಯಿಂದ ರಷ್ಯಾ ದಾಳಿ ಆರಂಭಿಸಿತು. ಬ್ಯಾಲಿಸ್ಟಿಕ್, ಕ್ರೂಸ್ ಹಾಗೂ ರಾಡಾರ್ ವಿರೋಧಿ ಕ್ಷಿಪಣಿಗಳ ಜೊತೆಗೆ 218 ಡ್ರೋನ್ಗಳು ಮತ್ತು ದಿಕ್ಕು ತಪ್ಪಿಸುವ ಡ್ರೋನ್ಗಳನ್ನು ಬಳಸಲಾಗಿದೆ ಎಂದು ಝೆಲೆನ್ಸ್ಕಿ ಹೇಳಿದ್ದಾರೆ.
ದಾಳಿಗೆ ಬಳಸಲಾದ ಡ್ರೋನ್ಗಳ ಪೈಕಿ ಸುಮಾರು ಮೂರನೇ ಒಂದು ಭಾಗ ಜೆಟ್ ಎಂಜಿನ್ ಹೊಂದಿದ್ದವು ಎಂದು ವರದಿಯಾಗಿದೆ.
ರಷ್ಯಾ ಪಡೆಗಳು ಕೀವ್ ಮೇಲೆ ಸತತ 6ನೇ ದಿನವೂ ದಾಳಿ ನಡೆಸಿದ್ದು, ಕಳೆದ ವಾರದಿಂದ ಉಕ್ರೇನ್ನಲ್ಲಿ ಪ್ರಬಲ ರೀತಿಯಲ್ಲಿ ವಾಯುದಾಳಿ ಎಚ್ಚರಿಕೆಗಳು ಮುಂದುವರಿದಿವೆ.
ಸಾಮಾಜಿಕ ಜಾಲತಾಣದಲ್ಲಿ ವಿವರವಾದ ಮಾಹಿತಿ ಹಂಚಿಕೊಂಡಿರುವ ಝೆಲೆನ್ಸ್ಕಿ, ಸೋಮವಾರ ಸಂಜೆಯಿಂದ ಒಡೆಸಾ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಮೇಲೂ ಬಾಂಬ್ಗಳು ಹಾಗೂ ಡ್ರೋನ್ಗಳ ಮೂಲಕ ದಾಳಿ ಮುಂದುವರಿದಿದೆ ಎಂದು ತಿಳಿಸಿದ್ದಾರೆ.
ದಾಳಿಯಲ್ಲಿ ಒಟ್ಟಾರೆ 12 ಮಂದಿ ಮೃತಪಟ್ಟಿದ್ದು, ಅವರಲ್ಲಿ ಒಬ್ಬರು ಭಾರತೀಯ ಪ್ರಜೆ. ದಾಳಿಯಲ್ಲಿ ಇನ್ನೂ ಹಲವರು ಗಾಯಗೊಂಡಿದ್ದಾರೆ” ಎಂದು ಝೆಲೆನ್ಸ್ಕಿ ಹೇಳಿದ್ದಾರೆ.
ರಷ್ಯಾ ನಡೆಸಿದ ದಾಳಿಗೆ ಪ್ರತಿಯಾಗಿ ಉಕ್ರೇನ್ ಪಡೆಗಳು ಐದು ಬ್ಯಾಲಿಸ್ಟಿಕ್ ಕ್ಷಿಪಣಿಗಳು ಹಾಗೂ 187 ಡ್ರೋನ್ಗಳು ಸೇರಿದಂತೆ ಒಟ್ಟು 199 ವೈಮಾನಿಕ ಗುರಿಗಳನ್ನು ನಾಶಪಡಿಸಿವೆ ಅಥವಾ ನಿಷ್ಕ್ರಿಯಗೊಳಿಸಿವೆ ಎಂದು ಉಕ್ರೇನ್ ಸೇನೆ ತಿಳಿಸಿದೆ.
ಕ್ಷಿಪಣಿ ಮತ್ತು ಡ್ರೋನ್ ದಾಳಿಗಳು 28 ಸ್ಥಳಗಳಲ್ಲಿ ದಾಖಲಾಗಿದ್ದು, ತಡೆದುರುಳಿಸಲಾದ ವೈಮಾನಿಕ ಗುರಿಗಳ ಅವಶೇಷಗಳು ಮತ್ತೊಂದು 10 ಸ್ಥಳಗಳಲ್ಲಿ ಬಿದ್ದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಬೆಳವಣಿಗೆಗೆ ಒಂದು ದಿನ ಮೊದಲು ಪ್ರಧಾನಿ ಮೋದಿ ಅವರು ಉಜ್ಬೇಕಿಸ್ತಾನದ ರಾಜಧಾನಿ ಬಿಷ್ಕೆಕ್ನಲ್ಲಿ ನಡೆದ ಶಾಂಘೈ ಸಹಕಾರ ಸಂಘಟನೆಯ ಶೃಂಗಸಭೆಯ ವೇಳೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರನ್ನು ಭೇಟಿಯಾಗಿದ್ದರು.
ಈ ಸಂದರ್ಭದಲ್ಲಿ ಮೋದಿ ಅವರು ಯುದ್ಧವನ್ನು ಮುಂದುವರಿಸುವ ಬದಲು “ಯುದ್ಧದಿಂದ ಅಂತ್ಯದತ್ತ ಸಾಗಬೇಕು” ಎಂದು ಪುಟಿನ್ಗೆ ಮನವಿ ಮಾಡಿದ್ದರು.
ಸಂಘರ್ಷದ ಪ್ರತಿಯೊಂದು ದಿನವೂ ಮಾನವೀಯತೆಯನ್ನು ಹಿಂದಕ್ಕೆ ತಳ್ಳುತ್ತದೆ ಎಂದು ಹೇಳಿದ್ದ ಮೋದಿ, ಬಾಕಿ ಇರುವ ಎಲ್ಲ ಸಮಸ್ಯೆಗಳನ್ನು ಶಾಂತಿಯುತವಾಗಿ ಪರಿಹರಿಸುವಂತೆ ಕರೆ ನೀಡಿದ್ದರು.