ನೇಪಾಳ ಪ್ರವಾಹ, ಸುರಂದೊಳಗೆ ಸಿಲುಕಿರ ಕಾರ್ಮಿಕರಿಗಾಗಿ ರಕ್ಷಣಾ ಕಾರ್ಯಾಚರಣೆ 
ವಿದೇಶ

ಮಹಾ ಪ್ರವಾಹಕ್ಕೆ ನೇಪಾಳ ತತ್ತರ: ನಾಪತ್ತೆಯಾದವರ ಸಂಖ್ಯೆ 6,100ಕ್ಕೆ ಏರಿಕೆ, ಹೈಡ್ರೋ ಪವರ್ ಸುರಂಗದಲ್ಲಿ 10 ಮೃತದೇಹ ಪತ್ತೆ..!

ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ನಡೆಸಿದ ಹೊಸ ಪರಿಶೀಲನೆಯ ಬಳಿಕ ಸುಮಾರು 1,000 ಮಂದಿಯ ಹೆಸರುಗಳನ್ನು ನಾಪತ್ತೆಯಾದವರ ಪಟ್ಟಿಗೆ ಸೇರ್ಪಡೆ ಮಾಡಲಾಗಿದೆ.

ಕಠ್ಮಂಡು: ನೇಪಾಳದಲ್ಲಿ ಇತ್ತೀಚೆಗೆ ಸಂಭವಿಸಿದ ಭೀಕರ ಜಲಪ್ರಳಯ ಮತ್ತು ಭೂಕುಸಿತದ ದುರಂತದ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ.

ಅಧಿಕೃತ ಮಾಹಿತಿಯ ಪ್ರಕಾರ, ಪ್ರವಾಹದ ಬಳಿಕ ನಾಪತ್ತೆಯಾದವರ ಪಟ್ಟಿಗೆ ಹೊಸದಾಗಿ 1,000ಕ್ಕೂ ಹೆಚ್ಚು ಜನರನ್ನು ಸೇರಿಸಲಾಗಿದ್ದು, ಇದರೊಂದಿಗೆ ನಾಪತ್ತೆಯಾದವರ ಒಟ್ಟು ಸಂಖ್ಯೆ ಭೀಕರ 6,150ಕ್ಕೆ ಏರಿಕೆಯಾಗಿದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ.

ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ನಡೆಸಿದ ಹೊಸ ಪರಿಶೀಲನೆಯ ಬಳಿಕ ಸುಮಾರು 1,000 ಮಂದಿಯ ಹೆಸರುಗಳನ್ನು ನಾಪತ್ತೆಯಾದವರ ಪಟ್ಟಿಗೆ ಸೇರ್ಪಡೆ ಮಾಡಲಾಗಿದೆ. ಇದೇ ವೇಳೆ ರಾಸುವಾ ಜಿಲ್ಲೆಯ ಎರಡು ಜಲವಿದ್ಯುತ್ ಯೋಜನೆಗಳ ಸುರಂಗಗಳಿಂದ 10 ಮೃತದೇಹಗಳನ್ನು ರಕ್ಷಣಾ ಸಿಬ್ಬಂದಿ ಹೊರತೆಗೆದಿದ್ದಾರೆ.

“ಜಿಲ್ಲಾ ಕಚೇರಿಗಳಿಂದ ನಾಪತ್ತೆಯಾದವರ ವಿವರಗಳನ್ನು ಸಂಗ್ರಹಿಸಿ, ಪರಿಶೀಲನೆಯ ಬಳಿಕ ಅಂಕಿಅಂಶಗಳನ್ನು ಪರಿಷ್ಕರಿಸಲಾಗಿದೆ” ಎಂದು ವಿಪತ್ತು ನಿರ್ವಹಣಾ ಪ್ರಾಧಿಕಾರದ ವಕ್ತಾರ ಶಾಂತಿ ಮಹತ್‌ ತಿಳಿಸಿದ್ದಾರೆ.

ನೇಪಾಳದಲ್ಲಿ ಪ್ರವಾಹದಿಂದ ಮೃತಪಟ್ಟವರ ಸಂಖ್ಯೆ 1,403ಕ್ಕೆ ಏರಿಕೆಯಾಗಿದ್ದು, 6,150 ಮಂದಿ ನಾಪತ್ತೆಯಾಗಿದ್ದಾರೆ. ಟಿಬೆಟ್‌ನಲ್ಲಿ 43 ಮಂದಿ ಮೃತಪಟ್ಟಿದ್ದು, 519 ಮಂದಿ ನಾಪತ್ತೆಯಾಗಿದ್ದಾರೆ. ಹೀಗಾಗಿ ನೇಪಾಳ ಮತ್ತು ಟಿಬೆಟ್‌ ಎರಡನ್ನೂ ಸೇರಿಸಿ ಒಟ್ಟು ಮೃತರ ಸಂಖ್ಯೆ 1,446ಕ್ಕೆ ಹಾಗೂ ನಾಪತ್ತೆಯಾದವರ ಸಂಖ್ಯೆ ಕನಿಷ್ಠ 6,669ಕ್ಕೆ ಏರಿಕೆಯಾಗಿದೆ. ನಾಪತ್ತೆಯಾದವರಲ್ಲಿ ಕನಿಷ್ಠ 189 ಮಂದಿ ಭಾರತೀಯರು ಸೇರಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಚಿಲಿಮೆಯಲ್ಲಿ ಐದು ಮೃತದೇಹ ಪತ್ತೆ

ಚಿಲಿಮೆ ಜಲವಿದ್ಯುತ್ ಯೋಜನೆಯಲ್ಲಿ ಐದು ಮೃತದೇಹಗಳನ್ನು ಪತ್ತೆಹಚ್ಚಲಾಗಿದೆ. ಸುರಂಗದೊಳಗಿನ ಭೂಗತ ವಿದ್ಯುತ್‌ ಸ್ಥಾವರವನ್ನು ತಲುಪಲು ಭಾರತೀಯ ಸೇನೆಯ ವಿಶೇಷ ತಂಡ ಹಾಗೂ ನೇಪಾಳದ ರಕ್ಷಣಾ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು. ಅಗೆಯುವ ಯಂತ್ರಗಳು ಮತ್ತು ವೀಲ್‌ ಲೋಡರ್‌ಗಳು ಮುಂದೆ ಸಾಗಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಕೊನೆಯ ಹಂತವನ್ನು ಸಿಬ್ಬಂದಿ ಕೈಯಿಂದಲೇ ಅಗೆದು ಮಾರ್ಗ ನಿರ್ಮಿಸಿದರು.

ಸುರಂಗದೊಳಗೆ ಆರು ಮಂದಿ ಕಾರ್ಮಿಕರು ಸಿಲುಕಿಕೊಂಡಿರಬಹುದು ಎಂದು ಶಂಕಿಸಲಾಗಿತ್ತು. ಇದರಂತೆ ಐದು ಮೃತದೇಹಗಳು ಪತ್ತೆಯಾಗಿದ್ದು, ಉಳಿದ ಒಬ್ಬ ಕಾರ್ಮಿಕನಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

ಈ ನಡುವೆ ಸುರಂಗದೊಳಗೆ ಸಿಲುಕಿರುವವರಿಂದ ಧ್ವನಿ ಅಥವಾ ಪ್ರತಿಧ್ವನಿ ಕೇಳಿಬಂದಿದೆ ಎಂದು ಎಂಜಿನಿಯರ್ ಶ್ರೀರಾಮ್ ನೇಪಾನೆ ವರದಿ ಮಾಡಿದ ಬಳಿಕ ಬದುಕುಳಿದವರ ಪತ್ತೆಯ ನಿರೀಕ್ಷೆ ಕೆಲಕಾಲ ಹೆಚ್ಚಾಗಿತ್ತು.

“ನಾವು ಒಳ್ಳೆಯ ಸುದ್ದಿಯನ್ನು ನಿರೀಕ್ಷಿಸುತ್ತಿದ್ದೇವೆ” ಎಂದು ರಕ್ಷಣಾ ತಂಡಗಳು ವಿದ್ಯುತ್‌ ಸ್ಥಾವರದತ್ತ ಮುನ್ನಡೆಯುತ್ತಿದ್ದ ವೇಳೆ ನೇಪಾನೆ ಹೇಳಿದ್ದರು.

ರಕ್ಷಣಾ ಕಾರ್ಯಾಚರಣೆಯಲ್ಲಿ ಹಲವು ದಿನಗಳ ಕಾಲ ಭಾಗಿಯಾಗಿದ್ದ ಆಡಳಿತಾರೂಢ ರಾಷ್ಟ್ರೀಯ ಸ್ವತಂತ್ರ ಪಕ್ಷದ ಸಂಸದ ಹಾಗೂ ಎಂಜಿನಿಯರ್ ಸಾಗರ್ ಧಕಾಲ್‌, “ಸಂಸದನಾಗಿ, ಎಂಜಿನಿಯರ್‌ ಆಗಿ, ನೇಪಾಳಿಯಾಗಿ ಹಾಗೂ ಸಾಮಾನ್ಯ ಮನುಷ್ಯನಾಗಿ ನನ್ನಿಂದ ಸಾಧ್ಯವಾದಷ್ಟು ಪ್ರಯತ್ನಿಸಿದ್ದೇನೆ. ಅಗತ್ಯವಿದ್ದಲ್ಲಿ ಭಾರವಾದ ವಸ್ತುಗಳನ್ನು ಹೊತ್ತಿದ್ದೇನೆ, ಅಗತ್ಯವಿದ್ದಲ್ಲಿ ಕಾರ್ಮಿಕನಾಗಿ ಕೆಲಸ ಮಾಡಿದ್ದೇನೆ” ಎಂದು ಹೇಳಿದ್ದಾರೆ.

ಅಪ್ಪರ್ ತ್ರಿಶೂಲಿ-1ರಲ್ಲಿ ಐದು ಮೃತದೇಹ ಪತ್ತೆ

ಅಪ್ಪರ್ ತ್ರಿಶೂಲಿ-1 ಜಲವಿದ್ಯುತ್ ಯೋಜನೆಯ ಸುರಂಗದಲ್ಲೂ ಬುಧವಾರ ಐದು ಮೃತದೇಹಗಳನ್ನು ಪತ್ತೆಹಚ್ಚಲಾಗಿದೆ. ನೇಪಾಳ ಸೇನೆ ಮತ್ತು ಜಲವಿದ್ಯುತ್ ಯೋಜನೆಯ ಸಿಬ್ಬಂದಿಯ ಜಂಟಿ ತಂಡ ನಿರಂತರ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯ ವೇಳೆ ಈ ಮೃತದೇಹಗಳನ್ನು ಹೊರತೆಗೆದಿದೆ.

ನಿರಂತರ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯ ವೇಳೆ ನೇಪಾಳ ಸೇನೆ ಹಾಗೂ ಜಲವಿದ್ಯುತ್ ಯೋಜನೆಯ ಜಂಟಿ ತಂಡವು ಆಡೆಟ್‌-3 ಸುರಂಗದಲ್ಲಿ ಮೃತದೇಹಗಳನ್ನು ಪತ್ತೆಹಚ್ಚಿದೆ” ಎಂದು ರಾಸುವಾ ಸಹಾಯಕ ಮುಖ್ಯ ಜಿಲ್ಲಾ ಅಧಿಕಾರಿ ಧ್ರುವ ಪ್ರಸಾದ್ ಅಧಿಕಾರಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

76ನೇ ವಸಂತಕ್ಕೆ ಕಾಲಿಟ್ಟ ಪ್ರಧಾನಿ ಮೋದಿ: ರಾಜಕೀಯ ನಾಯಕರಿಂದ ಶುಭಾಶಯ, ‘ವಿಶ್ವದ ಅತ್ಯಂತ ಜನಪ್ರಿಯ ನಾಯಕ’ ಎಂದು ಬಣ್ಣನೆ..!

ಜಮ್ಮು-ಕಾಶ್ಮೀರದಲ್ಲಿ ಭರ್ಜರಿ ಕಾರ್ಯಾಚರಣೆ: ಇಬ್ಬರು ಉಗ್ರರ ಹೊಡೆದುರುಳಿಸಿದ ಭಾರತೀಯ ಸೇನಾಪಡೆ, ಮುಂದುವರೆದ ಕಾರ್ಯಾಚರಣೆ..!

ಹಿರಿಯ ನಟ ಅನಂತ್ ನಾಗ್ ಗೆ ಪ್ರತಿಷ್ಠಿತ 'ದಾದಾ ಸಾಹೇಬ್ ಫಾಲ್ಕೆ' ಪ್ರಶಸ್ತಿ ಪ್ರಕಟ! ಪ್ರಧಾನಿ ಮೋದಿ, ಸಿಎಂ ಡಿಕೆಶಿ ಅಭಿನಂದನೆ

9/11 ಪಾಠ ಮರೆಯದಿರಿ, ಉಗ್ರರಿಗೆ ಆಶ್ರಯ ನೀಡುವ ವ್ಯವಸ್ಥೆ ಕಿತ್ತೊಗೆಯಿರಿ: JeM, LeT ಹೆಸರು ಪ್ರಸ್ತಾಪಿಸಿ ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನಕ್ಕೆ ಭಾರತ ಚಾಟಿ..!

ಮದ್ಯದ ಅಮಲಿನಲ್ಲಿ ಜಡ್ಜ್‌ ಎದುರೇ ರಂಪಾಟ: ಜೈಲು ಶಿಕ್ಷೆ ವಿಧಿಸಿ ಕುಡುಕ ವಕೀಲನಿಗೆ ತಕ್ಕ ಶಾಸ್ತಿ ಮಾಡಿದ ಹೈಕೋರ್ಟ್‌..!