ಮುಂಬೈ: ಬಾಲಿವುಡ್ ನಿರ್ದೇಶಕ ರಾಜ್ ಕುಮಾರ್ ಸಂತೋಶಿ ಹೃದಯ ನಾಳದ ಸಮಸ್ಯೆಯಿಂದಾಗಿ ಮುಂಬೈನ ನಾನಾವತಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಸಧ್ಯ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಅವರಿಗೆ ಆಂಜಿಯೋಪ್ಲ್ಯಾಸ್ಟಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ ಎಂದು ಎಎನ್ ಐ.ಸುದ್ದಿಸಂಸ್ಥೆ ವರದಿ ಮಾಡಿದೆ.
"ಹೃದಯ ಸಂಬಂಧಿ ಸಮಸ್ಯೆಯಿಂದಾಗಿ ಅವರು ಆಸ್ಪತ್ರೆಗೆ ದಾಖಲಾಗಿದ್ದು ಈ ಸಮಯದಲ್ಲಿ ಹೆಚ್ಚಿನ ಮಾಹಿತಿಗಳನ್ನು ಹಂಚಿಕೊಳ್ಳಲು ನಮಗೆ ಸಾಧ್ಯವಿಲ್ಲ" ಎಂದು ಆಸ್ಪತ್ರೆಯ ಅಧಿಕಾರಿಗಳು ಹೇಳಿದರು.
ಗೋವಿಂದ್ ನಿಹ್ಲಾನಿಯವರ "ಆರ್ಧ್ ಸತ್ಯ" (1982) ಚಿತ್ರದಲ್ಲಿ ಸಹಾಯಕ ನಿರ್ದೇಶಕರಾಗಿ ವೃತ್ತಿಜೀವನವನ್ನು ಪ್ರಾರಂಭಿಸಿದ ಸಂತೋಶಿ ’ಘಾಯಲ್’, ’ದಾಮಿನಿ’ ’ಅಂದಾಜ್ ಅಪ್ನಾ ಅಪ್ನಾ’ ದಂದತಾ ಜನಪ್ರಿಯ ಚಿತ್ರಗಳನ್ನು ಕೊಟ್ಟಿದ್ದಾರೆ.
ಹಲವು ವರ್ಷಗಳ ನಂತರ ಶಾಹೀದ್ ಕಪೂರ್ ಮತ್ತು ಇಲಿಯಾನಾ ಅಭಿನಯದ ’ಫತಾ ಪೋಸ್ಟರ್ ನಿಕ್ಲಾ ಹೀರೋ’ ಚಿತ್ರದ ಮುಖೇನ ಸಂತೋಶಿ ಮತ್ತೆ ಚಿತ್ರ ನಿರ್ದೇಶನಕ್ಕೆ ಮರಳಿದ್ದರು.