ಬೆಂಗಳೂರು: ಇತ್ತೀಚೆಗಷ್ಟೇ ಕನ್ನಡದ ಖ್ಯಾತ ಹಿರಿಯ ನಟ ಸದಾಶಿವ ಬ್ರಹ್ಮಾವರ ಅವರು ತಮ್ಮ ಸ್ವಂತ ಮಕ್ಕಳಿಂದ ಬೀದಿಗೆ ಬಿದ್ದ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ ಆ ಹಿರಿಯ ಜೀವಕ್ಕೆ ಖ್ಯಾತ ನಟ ಸುದೀಪ್ ಅವರು ನೆರವಾಗಿದ್ದಾರೆ ಎಂಬ ವಿಚಾರ ತಿಳಿದುಬಂದಿದೆ.
ಮಾಧ್ಯಮಗಳಲ್ಲಿ ವರದಿಯಾಗಿರುವಂತೆ ಹಿರಿಯ ನಟ ಸದಾಶಿವ ಬ್ರಹ್ಮಾವರ ಅವರ ನೆರವಿಗೆ ಧಾವಿಸುವಂತೆ ತಮ್ಮ ಅಭಿಮಾನಿಗಳಿಗೆ ಕರೆ ನೀಡಿದ್ದಾರೆ ಎಂದು ಹೇಳಲಾಗಿದೆ. ಮನೆಯಿಂದ ಹೊರ ಬಂದಿರುವ ಸದಾಶಿವ ಬ್ರಹ್ಮಾವರ್ ಅವರನ್ನು ಹುಡುಕುವಂತೆ ಸುದೀಪ್ ತಮ್ಮ ಫ್ಯಾನ್ಸ್ ಅಸೋಸಿಯೇಷನ್ಗೆ ತಿಳಿಸಿದ್ದಾರೆ. ಮೂಲಗಳ ಪ್ರಕಾರ ಪ್ರಸ್ತುತ ನಟ ಸುದೀಪ್ ಅವರು ಬ್ಯಾಂಕಾಕ್ ನಲ್ಲಿ ಶೂಟಿಂಗ್ ನಲ್ಲಿ ತೊಡಗಿರುವ ನಟ ಸುದೀಪ್ ಅವರು, ಸಾಮಾಜಿಕ ಜಾಲತಾಣಗಳಲ್ಲಿ ಸದಾಶಿವ ಬ್ರಹ್ಮಾವರ ಅವರ ವಿಚಾರ ತಿಳಿದ ಕೂಡಲೇ ತಮ್ಮ ಅಭಿಮಾನಿಗಳಿಗೆ ಇಂತಹುದೊಂದು ಸೂಚನೆ ನೀಡಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಕೇವಲ ನೆರವಾಗುವುದಷ್ಟೇ ಅಲ್ಲದೇ ಹಿರಿಯ ನಟ ಸದಾಶಿವ ಬ್ರಹ್ಮಾವರ ಅವರಿಗೆ ಜೀವನೋಪಾಯ ಕಲ್ಪಿಸುವಂತೆ ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು ಹಿರಿಯ ನಟ ಸದಾಶಿವ ಬ್ರಹ್ಮಾವರ ಅವರಿಗೆ ನೆರವಿನ ವಿಚಾರದ ಕುರಿತು ನಟ ಸುದೀಪ್ ಈ ವರೆಗೂ ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅಂತೆಯೇ ನಟ ಸದಾಶಿವ ಬ್ರಹ್ಮಾವರ ಮಕ್ಕಳೂ ಕೂಡ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಇನ್ನು ನಿನ್ನೆಯಷ್ಟೇ ಹಿರಿಯ ನಟ ಸದಾಶಿವ ಬ್ರಹ್ಮಾವರ ಅವರನ್ನು ಅವರ ಸ್ವಂತ ಮಕ್ಕಳೇ ಮನೆಯಿಂದ ಹೊರ ಹಾಕಿದ್ದಾರೆ ಎಂಬ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಮನೆಯಿಂದ ಹೊರಬಿದ್ದಿದ್ದ ನಟ ಬ್ರಹ್ಮಾವರ ಸದಾಶಿವ ಅವರಿಗೆ ಪ್ರಸ್ತುತ ಸೈಕೋ ಚಿತ್ರದ ನಿರ್ದೇಶಕ ದೇವದತ್ತ ಅವರು ಆಶ್ರಯ ನೀಡಿದ್ದಾರೆ. ಆನಂತರ ಕುಟುಂಬದವರೇ ಬಂದು ಕರೆದೊಯ್ದಿದ್ದರು. ಈಗ ಮತ್ತೊಮ್ಮೆ ಬ್ರಹ್ಮಾವರ್ಗೆ ಅದೇ ಪರಿಸ್ಥಿತಿ ಎದುರಾಗಿದೆ.
ಬ್ರಹ್ಮಾವರ್ ಅವರು ಉತ್ತರ ಕನ್ನಡ ಜಿಲ್ಲೆಯ ಕುಮಾಟದಲ್ಲಿ ಕಾಣಿಸಿಕೊಂಡಿದ್ದರು. ಈ ವೇಳೆ ಕೆಲ ಸ್ಥಳೀಯರು ಅವರನ್ನು ಗುರುತಿಸಿದ್ದರು. ಈ ವೇಳೆ ಬ್ರಹ್ಮಾವರ್ ಅವರ ಕರುಣಾಜನಕ ಕಥೆ ಹೊರಬಿದ್ದಿದ್ದೆ. ಮನೆಯಿಂದ ಹೊರ ಹೋಗಿರುವ ಬ್ರಹ್ಮಾವರ್ ಬಳಿ ಊಟಕ್ಕೂ ಹಣವಿರಲಿಲ್ಲ. ಬಳಿಕ ಸ್ಥಳೀಯರೇ ಸದಾಶಿವ ಬ್ರಹ್ಮಾವರ ಅವರಿಗೆ ಹಣ ನೀಡಿ, ಊಟ ಹಾಕಿಸಿ, ಬಸ್ ಚಾರ್ಜ್ಗೆ ಹಣ ಕೊಟ್ಟು ಬೆಂಗಳೂರಿಗೆ ಕಳುಹಿಸಿದ್ದರಂತೆ.
ಸುಮಾರು ವರ್ಷಗಳ ಹಿಂದೆ ಬ್ರಹ್ಮಾವರ್ ಅವರ ಪತ್ನಿ ನಿಧನ ಹೊಂದಿದ್ದರು, ಇದಾದ ಬಳಿಕ ಬ್ರಹ್ಮಾವರ್ ಅವರು ಮಕ್ಕಳಿಂದ ದೂರವಿದ್ದರು. ಆದರೆ ಬ್ರಹ್ಮಾವರ್ ಅವರೇ ಮನೆಯಿಂದ ದೂರವಿದ್ದರೇ ಅಥವಾ ಅವರ ಮಕ್ಕಳೇ ಅವರನ್ನು ದೂರವಿಟ್ಟಿದ್ದರೆ ಎಂಬ ವಿಚಾರ ಸ್ಪಷ್ಟವಾಗಿಲ್ಲ. ಸ್ವಾಭಿಮಾನಿಯಾದ ಸದಾಶಿವ ಬ್ರಹ್ಮಾವರ್ ತಮ್ಮ ಈ ಪರಿಸ್ಥಿತಿಗೆ ಕಾರಣವನ್ನೂ ಹೇಳಿಕೊಂಡಿಲ್ಲ ಮತ್ತು ತಮ್ಮ ಮಕ್ಕಳ ಬಗ್ಗೆ ಯಾವುದೇ ಕೆಟ್ಟಾಭಿಪ್ರಾಯವನ್ನು ಎಲ್ಲೂ ಹೇಳಿಕೊಂಡಿಲ್ಲ.
ಕನ್ನಡದ ಸುಮಾರು 4 ತಲೆ ಮಾರುಗಳ ನಟರೊಂದಿಗೆ ಕೆಲಸ ಮಾಡಿದ ಅನುಭವ ಹೊಂದಿರುವ ನಟ ಬ್ರಹ್ಮಾವರ್ ಅವರು ಸುಮಾರು 600ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಕಿಚ್ಚ ಸುದೀಪ್ ಅಭಿನಯದ ಸ್ವಾತಿಮುತ್ತು, ಕಿಚ್ಚ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಅಲ್ಲದೆ ಡಾ.ರಾಜ್ ಕುಮಾರ್ ಸೇರಿದಂತೆ ವಿಷ್ಟುವರ್ಧನ್, ಪ್ರಭಾಕರ್, ಅಂಬರೀಶ್ ಸೇರಿದಂತೆ ಕನ್ನಡದ ಪ್ರಸಿದ್ಧ ನಟರ ಜತೆ ಅಭಿನಯಿಸಿದ್ದಾರೆ.
Advertisement