ನನ್ನ ಮಕ್ಕಳೊಂದಿಗೆ ನಾನು ಚೆನ್ನಾಗಿದ್ದೇನೆ, ಅವೆಲ್ಲಾ ಗಾಳಿ ಸುದ್ದಿ: ಹಿರಿಯ ನಟ ಸದಾಶಿವ ಬ್ರಹ್ಮಾವರ

ಮಕ್ಕಳಿಂದ ಹಿರಿಯ ನಟ ಸದಾಶಿವ ಬ್ರಹ್ಮಾವರ ಅವರು ದೂರಾಗಿ, ಬೀದಿ ಅಲೆಯುತ್ತಿದ್ದಾರೆ ಎಂಬ ಊಹಾಪೋಹಗಳಿಗೆ ಕೊನೆಗೂ ಹಿರಿಯ ನಟ ತೆರೆ ಎಳೆದಿದ್ದು, ತಾವು ತಮ್ಮ ಮಕ್ಕಳೊಂದಿಗೆ ಚೆನ್ನಾಗಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.
ನಟ ಸದಾಶಿವ ಬ್ರಹ್ಮಾವರ
ನಟ ಸದಾಶಿವ ಬ್ರಹ್ಮಾವರ

ಬೆಂಗಳೂರು: ಮಕ್ಕಳಿಂದ ಹಿರಿಯ ನಟ ಸದಾಶಿವ ಬ್ರಹ್ಮಾವರ ಅವರು ದೂರಾಗಿ, ಬೀದಿ ಅಲೆಯುತ್ತಿದ್ದಾರೆ ಎಂಬ ಊಹಾಪೋಹಗಳಿಗೆ ಕೊನೆಗೂ ಹಿರಿಯ ನಟ ತೆರೆ ಎಳೆದಿದ್ದು, ತಾವು ತಮ್ಮ ಮಕ್ಕಳೊಂದಿಗೆ ಚೆನ್ನಾಗಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಕಳೆದ ಮೂರು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ಸದಾಶಿವ ಬ್ರಹ್ಮಾವರ ಅವರ ಕುರಿತಾದ ಗಾಳಿ ಸುದ್ದಿಗಳಿಗೆ ಸಂಬಂಧಿಸಿದಂತೆ ಇದೇ ಮೊದಲ ಬಾರಿಗೆ ಖಾಸಗಿ ಸುದ್ದಿವಾಹಿನಿಯೊಂದಿಗೆ ಮಾತನಾಡಿರುವ  ಸದಾಶಿವ ಅವರು, ಮಾಧ್ಯಮಗಳ ಸುದ್ದಿಯನ್ನು ಅಲ್ಲಗಳೆದಿದ್ದಾರೆ. "ನಾನು ನನ್ನ ಮಕ್ಕಳೊಂದಿಗೇ ಇದ್ದೇನೆ. ಅವರು ನನ್ನನ್ನು ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದಾರೆ. ಬ್ರಹ್ಮಾವರದಲ್ಲಿ ಮಗಳ ಮನೆ ಇದೆ, ಬೈಲಹೊಂಗಲದಲ್ಲಿ ಮಗನ  ಮನೆ ಇದೆ, ನಾನು ಎರಡೂ ಕಡೆ ತಿರುಗಾಡಿಕೊಂಡು ಆರಾಮವಾಗಿದ್ದೇನೆ. ನನಗೆ ಯಾವುದೇ ತೊಂದರೆ ಇಲ್ಲ. ಇತ್ತೀಚೆಗೆ ಕುಮಟಾ ಬಸ್ ನಿಲ್ದಾಣದಲ್ಲಿ ಬಸ್ ಗಾಗಿ ಕಾಯುತ್ತಿದ್ದಾಗ ಕೆಲವರು ನನ್ನನ್ನು ನೋಡಿ ಗುರುತಿಸಿದ್ದರು. ಬಹುಶಃ  ಇದನ್ನು ಕೆಲವರು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಎಂದು ಸದಾಶಿವ ಬ್ರಹ್ಮಾವರ ಅವರು ಹೇಳಿದ್ದಾರೆ.

ಮಕ್ಕಳ ವಿಳಾಸ ನೀಡಲು ಹಿಂಜರಿದ ನಟ
ಇದೇ ವೇಳೆ ತಾವು ಮಕ್ಕಳೊಂದಿಗೆ ಚೆನ್ನಾಗಿ ಇದ್ದೇನೆ ಎಂದು ಹೇಳಿದ ಸದಾಶಿವ ಅವರು ತಮ್ಮ ಮಕ್ಕಳ ವಿಳಾಸ ನೀಡಲು ಹಿಂಜರಿದಿದ್ದಾರೆ ಎಂದು ಮಾಧ್ಯಮವೊಂದು ಹೇಳಿದೆ. ಮೂಲಗಳ ಪ್ರಕಾರ ಇವರ ಒಬ್ಬ ಮಗ ರಾಷ್ಟ್ರೀಕೃತ  ಬ್ಯಾಂಕ್ ಒಂದರಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ ಎಂದು ತಿಳಿದುಬಂದಿದೆ.

ಇನ್ನು ಸದಾಶಿವ ಬ್ರಹ್ಮಾವರ ಆಪ್ತರು ಹೇಳಿರುವಂತೆ ಸದಾಶಿವ ಅವರು ಸೈದ್ಧಾಂತಿಕ ವ್ಯಕ್ತಿಯಾಗಿದ್ದು ತೀರಾ ಸ್ವಾಭಿಮಾನಿ, ಅವರ ಪುತ್ರರೊಂದಿಗಿನ ಸಣ್ಣ ಪುಟ್ಟ ವಿಚಾರಗಳ ಗೊಂದಲದಿಂದಾಗಿ ಅವರು ಆ ರೀತಿ ಹೇಳಿರಬಹುದು.  ಹೀಗಾಗಿ ಇಂತಹ ತಪ್ಪು ವಿಚಾರಗಳು ಮಾಧ್ಯಮಗಳಲ್ಲಿ ಹರಿದಾಡುತ್ತಿರಬಹುದು ಎಂದು ಹೇಳಿದ್ದಾರೆ.

ಒಟ್ಟಾರೆ ಕಳೆದ ಮೂರು ದಿನಗಳಿಂದ ತೀವ್ರ ಚರ್ಚೆಗೆ ಕಾರಣವಾಗಿದ್ದ ನಟ ಸದಾಶಿವ ಬ್ರಹ್ಮಾವರ ಪ್ರಕರಣ ತೆರೆಕಂಡಂತಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com