ಹಿರಿಯ ನಟಿಗೆ ಅವಕಾಶ ಕೊಡಿಸುವುದಾಗಿ ವಂಚಿಸಿದ ನಿರ್ದೇಶಕ, ದೂರು ದಾಖಲು

ಸ್ಯಾಂಡಲ್ ವುಡ್ ನಿರ್ದೇಶಕನೋರ್ವ ಅವಕಾಶ ಕೊಡಿಸುವುದಾಗಿ ಹೇಳಿ ಸ್ಯಾಂಡಲ್ ವುಡ್ ಹಿರಿಯ ನಟಿಯಿಂದ ಲಕ್ಷಾಂತರ ರೂ ಹಣ ಪಡೆದುಕೊಂಡು ವಂಚಿಸಿದ್ದಾನೆ.
ಹಿರಿಯ ನಟಿ ಮಂಜುಳಮ್ಮ ಮತ್ತು ಆರೋಪಿ ನಿರ್ದೇಶಕ ನವೀನ್ ರೈ
ಹಿರಿಯ ನಟಿ ಮಂಜುಳಮ್ಮ ಮತ್ತು ಆರೋಪಿ ನಿರ್ದೇಶಕ ನವೀನ್ ರೈ
ಬೆಂಗಳೂರು: ಅತ್ತ ಅವಕಾಶ ಕೊಡಿಸಿವುದಾಗಿ ಹೇಳಿ ಹೆಣ್ಣುಮಕ್ಕಳ ದುರ್ಬಳಕೆ ಮಾಡಿಕೊಳ್ಳುತ್ತಿರುವ ವಿಚಾರ ದೇಶಾದ್ಯಂತ ವ್ಯಾಪಕ ಚರ್ಚೆಗೀಡಾಗಿರುವಂತೆಯೇ ಸ್ಯಾಂಡಲ್ ವುಡ್ ನಿರ್ದೇಶಕನೋರ್ವ ಅವಕಾಶ ಕೊಡಿಸುವುದಾಗಿ ಹೇಳಿ ಸ್ಯಾಂಡಲ್ ವುಡ್ ಹಿರಿಯ ನಟಿಯಿಂದ ಲಕ್ಷಾಂತರ ರೂ ಹಣ ಪಡೆದುಕೊಂಡು ವಂಚಿಸಿದ್ದಾನೆ.
ಕನ್ನಡ ಖ್ಯಾತ ಧಾರಾವಾಹಿಗಳಾದ ವಠಾರ, ಬದುಕು, ರಂಗೋಲಿ, ತಕಧಿಮಿತ ಸೇರಿದಂತೆ ಸಾಕಷ್ಟು ಚಲನ ಚಿತ್ರಗಳಲ್ಲಿ ಅಭಿನಯಿಸಿದ್ದ ಖ್ಯಾತ ಹಿರಿಯ ನಟಿ ಮಂಜುಳಮ್ಮ ಅವರು ನಿರ್ದೇಶಕನೋರ್ವನ ವಿರುದ್ಧ ವಂಚನೆ ಪ್ರಕರಣ ದಾಖಲಿಸಿದ್ದಾರೆ. 
ಇತ್ತೀಚೆಗೆ ಒಂದೆರಡು ಧಾರಾವಾಹಿಗಳನ್ನು ನಿರ್ದೇಶಿಸಿದ್ದ ಯುವ ನಿರ್ದೇಶಕ ನವೀನ್ ರೈ​ ಎಂಬಾತ ಮಂಜುಳಮ್ಮ ಅವರಿಗೆ ಧಾರಾವಾಹಿಗಳಲ್ಲಿ ಅವಕಾಶ ಕೊಡಿಸುವುದಾಗಿ ಹೇಳಿ ಲಕ್ಷಾಂತರ ಹಣ ಪಡೆದು ವಂಚಿಸಿದ್ದಾನೆ ಎಂದು ಮಂಜುಳಮ್ಮ ದೂರಿದ್ದಾರೆ. ಇನ್ನು ಈ ಸಂಬಂಧ ಮಂಜುಳಮ್ಮ ಅವರು ಚೆನ್ನಮ್ಮನಕೆರೆ ಅಚ್ಚುಕಟ್ಟು ಪ್ರದೇಶದಲ್ಲಿ ದೂರು ದಾಖಲಿಸಿದ್ದು, ಠಾಣೆಯಲ್ಲಿ ನನ್ನ ಹಣ ಕೊಡಿಸುವಂತೆ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.
72 ವರ್ಷದ ಮಂಜುಳಮ್ಮ ಅವರು ದೂರಿನಲ್ಲಿ ಆರೋಪಿಸಿರುವಂತೆ 'ನವೀನ್ ರೈ​ ಎಂಬಾತ ತಮಗೆ ಸಣ್ಣ-ಪುಟ್ಟ ಪಾತ್ರ ನೀಡಿ ಪರಿಚಯವಾಗಿದ್ದ. ನಂತರ 'ಸಣ್ಣಮ್ಮನ ಅಜ್ಜಿ' ಕಿರುಚಿತ್ರ ಮಾಡಲು ಮುಂದಾಗಿದ್ದ. ಆತನಿಗೆ ಹಣದ ಅಭಾವವಿತ್ತು. ಆಗ ಪರಿಚಯವಿದ್ದ ನನ್ನ ಬಗೆ ನಿಮಗೂ ದೊಡ್ಡ​ ಆಫರ್​ ಕೊಡ್ತಿನಿ, ಹಣ ಕೊಡಿ ಎಂದು ಹೇಳಿ, ಅವರಿಂದ ಚಿನ್ನಾಭರಣ, ನಗದು ಸೇರಿ ಒಟ್ಟು 15 ಲಕ್ಷ ರೂ. ವರೆಗೆ ಹಣ ಪಡೆದಿದ್ದ. ಹಣಕ್ಕಾಗಿ ಮಂಜುಳಮ್ಮ ತಾವು ವಾಸವಿದ್ದ ಮನೆಯ ಮಾಲೀಕರಿಂದ ಭೋಗ್ಯ​ ರದ್ದು ಮಾಡಿಸಿಕೊಂಡು ಬಂದ ಲಕ್ಷ-ಲಕ್ಷ ಹಣವನ್ನು ನವೀನ್​ ಗೆ ನೀಡಿದ್ದರು ಎಂದು ಹೇಳಲಾಗಿದೆ. 
ಇದಾದ ಕೆಲವು ತಿಂಗಳು ಕಳೆದರೂ ಪತ್ತೆಯಾಗದ ನವೀನ್​ರನ್ನು ಹುಡುಕಲು ಆತನ ಮನೆಗೆ ಹೋದಾಗ, ಆತ ಮನೆ ಖಾಲಿ ಮಾಡಿಕೊಂಡು ಊರುಬಿಟ್ಟಿರುವ ವಿಚಾರ ಗೊತ್ತಾಗಿದೆ. ಇದಕ್ಕೂ ಮೊದಲು ತಾವು ನೀಡಿದ ಹಣ ವಾಪಸ್ ಪಡೆಯಲು ಹೋದಾಗ ಕೆಲ ಹುಡುಗರನ್ನು ಕಳುಹಿಸಿ ನನ್ನ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಮಂಜುಳಮ್ಮ ತಮ್ಮ ದೂರಿನಲ್ಲಿ ಅಳಲು ತೋಡಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com