ವಿಶೇಷ ಅಭಿಮಾನಿಯ ಭೇಟಿ ಮಾಡಲು ಕಿಚ್ಚಾ ಸುದೀಪ್ ಸಿದ್ಧ!

ನಟ ಕಿಚ್ಚಾ ಸುದೀಪ್ ತಮ್ಮ ವಿಶೇಷ ಅಭಿಮಾನಿಯೊಬ್ಬರನ್ನು ಭೇಟಿ ಮಾಡಲು ಉತ್ಸುಕರಾಗಿದ್ದಾರೆ.
ರಾಹುಲ್ ಮತ್ತು ಅವರ ತಾಯಿ
ರಾಹುಲ್ ಮತ್ತು ಅವರ ತಾಯಿ
ಬೆಂಗಳೂರು: ನಟ ಕಿಚ್ಚಾ ಸುದೀಪ್ ತಮ್ಮ ವಿಶೇಷ ಅಭಿಮಾನಿಯೊಬ್ಬರನ್ನು ಭೇಟಿ ಮಾಡಲು ಉತ್ಸುಕರಾಗಿದ್ದಾರೆ.
ಅರೆ ಇದೇನಿದು ಸುದೀಪ್ ಗೆ ಲಕ್ಷಾಂತರ ಅಭಿಮಾನಿಗಳಿದ್ದು, ಅದರಲ್ಲಿ ವಿಶೇಷ ಅಭಿಮಾನಿ ಎಂದರೆ ಏನು ಎಂದು ನೀವು ಕೇಳಬಹುದು. ಆದರೆ ಇಲ್ಲಿನ ವಿಶೇಷ ಕೇಳಿದರೆ ನಿಮ್ಮ ಭಾವನೆ ಬದಲಾಗಬಹುದು. 
ರಾಹುಲ್ ಎಂಬ 12 ವರ್ಷದ ಬಾಲಕ ಹುಟ್ಟಿದಾಗಿನಿಂದಲೇ ಅಪರೂಪದ ಬ್ರೈನ್ ಟ್ಯೂಮರ್ ನಿಂದ ಬಳಲುತ್ತಿದ್ದು, ಆತ ತಾನು ಸಾಯುವುದರೊಳಗೆ ಒಂದೇ ಒಂದು ಸಾರಿ ತನ್ನನೆಚ್ಚಿನ ನಟ ಸುದೀಪ್ ರನ್ನು ಭೇಟಿ ಮಾಡಬೇಕು ಎಂದು ಆಸೆ ಪಟ್ಟಿದ್ದಾನೆ. ಈ ಕುರಿತು ಕೆಟೋ ಎಂಬ ಟ್ವಿಟರ್ ಖಾತೆ ನಟ ಸುದೀಪ್ ರ ಗಮನ ಸೆಳೆಯುವ ಪ್ರಯತ್ನ ಮಾಡಿದ್ದು, ಕೆಟೋ ಈ ಪುಟ್ಟ ಪೋರನ ಕುರಿತು ವರದಿ ಮಾಡಿದೆ.
ರಾಹುಲ್ ಬೆಂಗಳೂರು ಮೂಲದ ನಿವಾಸಿ ಜಲಿಂದರ್ ಅವರ ಪುತ್ರನಾಗಿದ್ದು, ಹುಟ್ಟಿದಾಗಿನಿಂದಲೇ ಈತ ಅಪರೂಪದ ಬ್ರೈನ್ ಟ್ಯೂಮರ್ ನಿಂದ ಬಳಲುತ್ತಿದ್ದಾನೆ. ಈತನ ಚಿಕಿತ್ಸೆಗೆ ಈತನ ಪೋಷಕರು ಹರಸಾಹಸ ಪಡುತ್ತಿದ್ದು, ಈ ವರೆಗೂ ತಮ್ಮ ಬಳಿ ಇದ್ದ ಚಿನ್ನಾಭರಣಗಳನ್ನು ಮಾರಿ ಸುಮಾರು 4 ಲಕ್ಷ ರೂ ಹೊಂದಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಆದರೆ ವೆಲ್ಜರ್ ಆದ ಜಲಿಂದರ್ ತಿಂಗಳಿಗೆ ಕೇವಲ 8 ಸಾವಿರ ರೂಮಾತ್ರ ದುಡಿಯುತ್ತಿದ್ದು, ಇದು ಆತನ ಕನಿಷ್ಠ ಚಿಕಿತ್ಸೆಗೂ ಸಾಲುತ್ತಿಲ್ಲ. ಇನ್ನು ಜೀವನ ನಿರ್ವಹಣೆ ದುರ್ಬರವಾಗಿದ್ದು, ಇದೇ ಕಾರಣಕ್ಕೆ ಕೆಟೋ ಎಂಬ ಸಂಘಟನೆ ಈ ಕುಟುಂಬದ ಬೆನ್ನಿಗೆ ನಿಂತಿದೆ. ಆದರೆ ಆತನ ಚಿಕಿತ್ಸೆಗೆ ಇನ್ನೂ ಸುಮಾರು  ಲಕ್ಷ ರೂಗಳಷ್ಟು ಹಣ ಅವಶ್ಯಕತೆ ಇದ್ದು, ಕುಟುಂಬ ಇದೀಗ ದಾನಿಗಳತ್ತ ಮುಖ ಮಾಡಿದೆ.
ರಾಹುಲ್ ಖ್ಯಾತ ನಟ ಸುದೀಪ್ ರ ಕಟ್ಟಾ ಅಭಿಮಾನಿಯಾಗಿದ್ದು, ತಾನು ಸಾಯುವುದರೊಳಗೆ ಸುದೀಪ್ ರನ್ನು ಭೇಟಿ ಮಾಡಬೇಕು ಎಂಬ ಮಹದಾಸೆಯನ್ನು ಹೊಂದಿದ್ದಾನೆ. ಇದೇ ವಿಚಾರವನ್ನು ಕೆಟೋ ತನ್ನ ಟ್ವಿಟರ್ ಖಾತೆಯಲ್ಲಿ ಹೇಳಿಕೊಂಡಿದ್ದು, ಇದಕ್ಕೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿರುವ ನಟ ಸುದೀಪ್ ಭೇಟಿಯಾಗಲು ಸಿದ್ಧವಿರುವುದಾಗಿ ಹೇಳಿದ್ದಾರೆ. ಅಲ್ಲದೆ ಎಲ್ಲಿ ಮತ್ತು ಯಾವಾಗ ಭೇಟಿಯಾಗಬೇಕು ಎಂಬುದನ್ನು ತಿಳಿಸಿ ಎಂದು ಮನವಿ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com