ಬೆಂಗಳೂರು: ಈ ಹಿಂದೆ ಪವರ್ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಗೆ ಜೋಡಿಯಾಗಿದ್ದ ಬಹುಭಾಷಾ ನಟಿ ತ್ರಿಶಾ ಕೃಷ್ಣನ್ ಇದೀಗ ಮತ್ತೆ ಪುನೀತ್ ಜೊತೆ ಜೋಡಿಯಾಗಿ ಕಾಣಿಸಿಕೊಳ್ಳಲ್ಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಹೌದು.. ಪುನೀತ್ ರಾಜ್ ಕುಮಾರ್ ಮತ್ತು ಪವನ್ ಕುಮಾರ್ ಅವರ ಸೈಕಲಾಜಿಕಲ್ ಥ್ರಿಲ್ಲರ್ ಚಿತ್ರ ದ್ವಿತ್ವ ಚಿತ್ರಕ್ಕೆ ನಾಯಕಿಯಾಗಿ ತ್ರಿಶಾ ಕೃಷ್ಣನ್ ರನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ. ಈ ಬಗ್ಗೆ ಗಾಂಧಿನಗರದಲ್ಲಿ ಮಾತುಗಳು ಕೇಳಿಬರುತ್ತಿದ್ದು, ಶೀಘ್ರದಲ್ಲೇ ಚಿತ್ರತಂಡ ಈ ಬಗ್ಗೆ ಅಧಿಕೃತ ಮಾಹಿತಿ ಹೊರಹಾಕುವ ಸಾಧ್ಯತೆ ಇದೆ. ಮೂಲಗಳ ಪ್ರಕಾರ ನಟಿ ತ್ರಿಶಾ ಕೃಷ್ಣನ್ 'ದ್ವಿತ್ವ' ಚಿತ್ರಕತೆ ಕೇಳಿದ್ದು, ಇಷ್ಟ ಪಟ್ಟಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಚಿತ್ರತಂಡದಿಂದ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರ ಬಂದಿಲ್ಲ. ಇನ್ನು ಚಿತ್ರದಲ್ಲಿ ಪುನೀತ್ ಪಾತ್ರ ಬಿಟ್ಟರೆ ಬೇರೆ ಯಾವ ಪಾತ್ರಧಾರಿಗಳ ಬಗ್ಗೆಯೂ ರಿವೀಲ್ ಮಾಡಿಲ್ಲ.
ಮೂಲಗಳ ಪ್ರಕಾರ ಚಿತ್ರದ ಇತರೆ ಪಾತ್ರಗಳಿಗೆ ಚಿತ್ರತಂಡ ಆಯ್ಕೆ ಕಸರತ್ತು ನಡೆಸಿದ್ದು, ಈಗಾಗಲೇ ನಿರ್ದೇಶಕ ಪವನ್ ಕುಮಾರ್ ತಮಿಳಿನ ವಿನ್ನೈಥಾಂಡಿ ವರುವಾಯಾ ನಟರೊಂದಿಗೆ ಮಾತುಕತೆ ನಡೆಸಿದ್ದು, ಈ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆ ಇದೆ.
ಪ್ರಸ್ತುತ ನಟಿ ಅಮಲಾ ಪಾಲ್ ಅಭಿನಯದ ಕುಡಿ ಯೆಮೈಥೆ ಎಂಬ ತಮ್ಮ ಮೊದಲ ತೆಲುಗು ವೆಬ್ ಸೀರಿಸ್ ನ ಬಿಡುಗಡೆಯಲ್ಲಿ ನಿರತರಾಗಿದ್ದ ಪವನ್ ಕುಮಾರ್, ತಮ್ಮ ನಿರ್ಮಾಣ ಸಂಸ್ಥೆಯಡಿಯಲ್ಲಿ ನಿರ್ಮಿಸುತ್ತಿರುವ ಕಾಮಿಡಿ-ಡ್ರಾಮ ಇಕ್ಕಟ್ ಬಿಡುಗಡೆಯಾಗಿದೆ. ಈಗ ಪವನ್ ಸಂಪೂರ್ಣವಾಗಿ ದ್ವಿತ್ವಾ ಚಿತ್ರದ ಮೇಲೆ ತಮ್ಮ ಗಮನ ಕೇಂದ್ರೀಕರಿಸಿದ್ದಾರೆ. ಸೆಪ್ಟೆಂಬರ್ ನಲ್ಲಿ ಚಿತ್ರ ಚಿತ್ರೀಕರಣ ಆರಂಭವಾಗುವ ಸಾಧ್ಯತೆ ಇದ್ದು, ಚಿತ್ರದ ಪ್ರೀ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗಿವೆ.
ಅಂತೆಯೇ ನಟ ಪುನೀತ್ ರಾಜ್ ಕುಮಾರ್ ಕೂಡ ಚೇತನ್ ಕುಮಾರ್ ನಿರ್ದೇಶನದ ಜೇಮ್ಸ್ ಚಿತ್ರದಲ್ಲಿ ತಲ್ಲೀನರಾಗಿದ್ದು, ತ್ರಿಶಾ ಮಣಿರತ್ನಂರ ಪೊನ್ನಿಯಿನ್ ಸೆಲ್ವನ್ ಚಿತ್ರದಲ್ಲಿ ಬಿಸಿಯಾಗಿದ್ದಾರೆ. ಇದಲ್ಲದೆ ತಮಿಳಿನ ಗರ್ಜನೈ, ರಂಗಿ, ರಾಮ್, ಮತ್ತು ಸಾತುರಂಗ ವೆಟ್ಟೈ ಸೇರಿದಂತೆ ಹಲವು ಚಿತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ.
2014ರಲ್ಲಿ ಬಿಡುಗಡೆಯಾದ 'ಪವರ್' ಚಿತ್ರದಲ್ಲಿ ಪುನೀತ್ - ತ್ರಿಶಾ ಕಾಂಬಿನೇಷನ್ ಇಷ್ಟಪಟ್ಟಿದ್ದ ಅಭಿಮಾನಿಗಳು ಇದೀಗ ಮತ್ತೆ ಅದೇ ಜೋಡಿಯನ್ನು ತೆರೆ ಮೇಲೆ ಕಾಣಲು ಕಾತುರರಾಗಿದ್ದಾರೆ. ಪವನ್ ಆ್ಯಕ್ಷನ್ ಕಟ್ ಹೇಳುತ್ತಿರುವ ಈ ಚಿತ್ರಕ್ಕೆ ಪ್ರೀತಾ ಜಯರಾಮನ್ ಛಾಯಾಗ್ರಹಣದ ಜೊತೆಗೆ ತೇಜಸ್ವಿ ಸಂಗೀತ ನೀಡುತ್ತಿದ್ದಾರೆ. 2019ರಲ್ಲಿ 'ಗಾಳಿಪಟ-2' ಸಿನಿಮಾ ಚಿತ್ರೀಕರಣಕ್ಕೆಂದು 6 ವಾರಗಳ ಕಾಲ ನಿರ್ದೇಶಕ ಪವನ್ ಥೈಲ್ಯಾಂಡ್ಗೆ ಹೋಗಿದ್ದರು. ಅಲ್ಲಿನ ಕೆಫೆ ಒಂದರಲ್ಲಿ ಚಿತ್ರಕತೆ ಬರೆದು ಪುನೀತ್ಗೆ ಕಳುಹಿಸಿದರಂತೆ. ಪುನೀತ್ ಗ್ರೀನ್ ಸಿಗ್ನಲ್ ಕೊಟ್ಟ ನಂತರ ಹೊಂಬಾಳೆ ಫಿಲಂ ಜೊತೆ ಮಾತನಾಡಿ, ಬಿಗ್ ಬಜೆಟ್ ಸಿನಿಮಾಗೆ ತಯಾರಿ ಶುರು ಮಾಡಿಕೊಳ್ಳುತ್ತಿದ್ದಾರೆ.
Advertisement