ಬೆಂಗಳೂರು: ಸ್ಯಾಂಡಲ್ವುಡ್ ನ ಖ್ಯಾತ ಹಿರಿಯ ನಟ ಶಿವರಾಮ್ ಅವರ ತಲೆಗೆ ಗಂಭೀರ ಪೆಟ್ಟಾಗಿದ್ದು ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಮೂಲಗಳ ಪ್ರಕಾರ 3 ದಿನಗಳ ಹಿಂದೆ ಕಾರಿನಲ್ಲಿ ತೆರಳುವಾಗ ಅಪಘಾತವಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಅವರು ಮನೆಗೆ ಮರಳಿದ್ದರು. ಆದರೆ ಮನೆಯಲ್ಲಿ ಶಿವರಾಮ್ ಅವರು ರೂಮಿನಲ್ಲಿದ್ದ ವೇಳೆ ಅವರು ಕೆಳಗೆ ಬಿದ್ದಿದ್ದಾರೆ. ಈ ವೇಳೆ ಅವರ ತಲೆಯಿಂದ ರಕ್ತಸ್ರಾವವಾಗಿತ್ತು. ಇದನ್ನು ಗಮನಿಸಿದ ಕುಟುಂಬ ಸದಸ್ಯರೂ ಕೂಡಲೇ ಅವರನ್ನು ಹೊಸಕೆರೆ ಹಳ್ಳಿಯ ಖಾಸಗಿ ಅಸ್ಪತ್ರೆಗೆ ಅವರು ದಾಖಲಿಸಿದ್ದಾರೆ.
ಇದೀಗ ಅವರ ಮೆದುಳಿನಲ್ಲಿ ರಕ್ತಸ್ರಾವವಾಗಿ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿದ್ದು, ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಲಾಗಿದೆ.
ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಶಿವರಾಮ್ ಹಿರಿಯ ಪುತ್ರ ರವಿಶಂಕರ್ ಅವರು, 'ಮೂರು ದಿನಗಳ ಹಿಂದೆ ಕಾರಿನಲ್ಲಿ ಹೊರಗೆ ಹೋಗಿದ್ದ ವೇಳೆ ಕಾರ್ ಆಕ್ಸಿಡೆಂಟ್ ಆಗಿತ್ತು. ನಂತರ ಮೂರು ದಿನಗಳಿಂದ ಅವರಿಗೆ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಮೊನ್ನೆ ರಾತ್ರಿ ಮನೆಯಲ್ಲಿ ಅಯ್ಯಪ್ಪನ ಪೂಜೆ ಮಾಡಲು ರೂಂಗೆ ಹೋಗಿದ್ದರು. ಆ ವೇಳೆ ರೂಂನಲ್ಲಿ ಬಿದ್ದ ಹಿನ್ನೆಲೆ ತಲೆಗೆ ಬಲವಾದ ಪೆಟ್ಟು ಬಿದ್ದಿದೆ. ಮೊನ್ನೆ ರಾತ್ರಿಯೇ ಅಸ್ಪತ್ರೆಗೆ ಕರೆದುಕೊಂಡು ಬಂದು ಸ್ಕ್ಯಾನಿಂಗ್ ಮಾಡಿಸಿದ್ದೆವು. ಸ್ಕ್ಯಾನಿಂಗ್ ರಿಪೋರ್ಟ್ ನಲ್ಲಿ ಮೆದುಳಿನಲ್ಲಿ ರಕ್ತಸ್ರಾವ ಆಗಿರೋದು ಗೊತ್ತಾಯಿತು. ವೈದ್ಯರು ಸರ್ಜರಿ ಮಾಡಬೇಕು ಎಂದು ಹೇಳಿದರು. ಅದರೆ ನಮ್ಮ ತಂದೆಗೆ ವಯಸ್ಸಾದ ಹಿನ್ನೆಲೆ ಸರ್ಜರಿ ಮಾಡಲು ಆಗಿಲ್ಲ. ಸದ್ಯ ಐಸಿಯುನಲ್ಲೇ ಅವರಿಗೆ ಚಿಕಿತ್ಸೆ ಮುಂದುವರೆದಿದೆ ಎಂದು ಹೇಳಿದ್ದಾರೆ.
Advertisement