ಪೈರಸಿ ಹಾವಳಿಗೆ ಚಿತ್ರರಂಗ ತತ್ತರ; ತೆರೆಕಂಡ ಮೂರೇ ದಿನಕ್ಕೆ ಸಂಪೂರ್ಣ ಚಿತ್ರ ಲೀಕ್, ದೂರು ದಾಖಲು

ಪೈರಸಿ ಹಾವಳಿಗೆ ಕನ್ನಡ ಚಿತ್ರರಂಗ ತತ್ತರಿಸಿದೆ. ಸಿನಿಮಾ ರಿಲೀಸ್ ಆಗೋ ಮೂರೇ ದಿನಕ್ಕೆ ಸಿನಿಮಾವೊಂದು ಪೈರಸಿಯಾಗಿರೋದು ಸ್ಯಾಂಡಲ್ ವುಡ್ ಅನ್ನು ದಂಗುಬಡಿಸಿದೆ.
ಪೈರಸಿ ಕಾಟ
ಪೈರಸಿ ಕಾಟ
Updated on

ಬೆಂಗಳೂರು: ಪೈರಸಿ ಹಾವಳಿಗೆ ಕನ್ನಡ ಚಿತ್ರರಂಗ ತತ್ತರಿಸಿದೆ. ಸಿನಿಮಾ ರಿಲೀಸ್ ಆಗೋ ಮೂರೇ ದಿನಕ್ಕೆ ಸಿನಿಮಾವೊಂದು ಪೈರಸಿಯಾಗಿರೋದು ಸ್ಯಾಂಡಲ್ ವುಡ್ ಅನ್ನು ದಂಗುಬಡಿಸಿದೆ.

ಈ ಕುರಿತಂತೆ ಕನ್ನಡ ಚಲನಚಿತ್ರ ನಿರ್ಮಾಪಕ ರೋಹಿತ್, ಪ್ರಕರಣ ದಾಖಲಿಸಿದ್ದಾರೆ. ಪೈರಸಿ ಮಾಡಿ ಟೆಲಿಗ್ರಾಮ್ ಆಪ್ ನಲ್ಲಿ ಅಪ್ ಲೋಡ್ ಮಾಡಿರುವ ಯುವ ಮೂವೀಸ್ ವಿರುದ್ಧ ಶಾರ್ದೂಲ ಸಿನಿಮಾ ನಿರ್ಮಾಪಕ ರೋಹಿತ್, ಸೆಂಟ್ರಲ್ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನನ್ವಯ ಐಟಿ ಆಕ್ಟ್ 84C, 66C, 66D , ಐಪಿಸಿ 420, 511 ಹಾಗೂ ಕಾಪಿರೈಟ್ಸ್ ಆಕ್ಟ್ ಅಡಿಯಲ್ಲಿ ಎಫ್.ಐ.ಆರ್ ದಾಖಲಾಗಿದೆ.

ಇನ್ನು ಎಫ್ಐಆರ್ ದಾಖಲಾಗಿರೋ ವಿಚಾರ ಗೊತ್ತಾಗುತ್ತಿದ್ದಂತೆ ಆರೋಪಿಗಳು, ಟೆಲಿಗ್ರಾಂ ಲಿಂಕ್ ಸೇರಿದಂತೆ ಯುವ ಮೂವೀಸ್ ನ ಗ್ರೂಪ್ ಕೂಡ ಡಿಲೀಟ್‌ ಮಾಡಿದ್ದಾರೆ. ಇದೇ ವೇಳೆ ಮಾಫಿಯಾ ಕುರಿತಂತೆ ಹಲವು ವಿಚಾರಗಳು ಬೆಳಕಿಗೆ ಬಂದಿದ್ದು, ಕರೋನ ಎರಡನೇ ಅಲೆ ಬಳಿಕ ಬಂದ ಎಲ್ಲಾ ಕನ್ನಡ ಸಿನಿಮಾಗಳು ಪೈರಸಿಯಾಗಿರೋದು ಪತ್ತೆಯಾಗಿದೆ. ಯುವ ಸಿನಿಮಾಸ್ ಹೆಸರಲ್ಲಿ 20ಕ್ಕೂ ಹೆಚ್ಚು ಸಿನಿಮಾಗಳ ಪೈರಸಿ ಆಗಿದೆ. ಕಳೆದ ವಾರ ರಿಲೀಸ್ ಆದ ಸೂರಜ್ ಗೌಡ, ಧನ್ಯಾ ರಾಮ್ ಕುಮಾರ್ ಅಭಿನಯಿಸಿರುವ "ನಿನ್ನ ಸನಿಹಕೆ" ಸಿನಿಮಾ ಕೂಡ ಪೈರಸಿ ಆಗಿ ಟೆಲಿಗ್ರಾಮ್ ನಲ್ಲಿ ಅಪ್ ಲೋಡ್ ಮಾಡಿರುವುದು ಗೊತ್ತಾಗಿದೆ. ಇವಿಷ್ಟೇ ಅಲ್ಲದೆ ಲೂಸ್ ಮಾದ ಯೋಗೇಶ್ ನಟಿಸಿರೋ ಲಂಕೆ, ಅಜಯ್ ರಾವ್ ಅಭಿನಯದ ಕೃಷ್ಣ ಟಾಕೀಸ್ ಹಾಗೂ ನಟ ಚೇತನ್ ಚಂದ್ರ ಅಭಿನಯಿಸಿರೋ ಶಾರ್ದೂಲ ಚಿತ್ರ ಕೂಡ ಪೈರಸಿಯಾಗಿದೆ. 

ತೆಲುಗು, ತಮಿಳಿನಿಂದ ಕನ್ನಡಕ್ಕೆ ಡಬ್ ಆದ ಸಿನಿಮಾಗಳಿಗೂ ಪೈರಸಿ ಕಾಟ ತಪ್ಪಿಲ್ಲ. ಸರೈಪೊಟ್ರು, ನಶಾ, ಪದ್ಮವ್ಯೂಹ, ಸ್ಪೈಡರ್ ಮ್ಯಾನ್, ಆ ಧ್ವನಿ, ಕಲ್ಯಾಣಮಂಟಪಂ ಮತ್ತು ಜಸ್ಟ್ ಮ್ಯಾರೀಡ್ ಚಿತ್ರಗಳಿಗೂ ಪೈರಸಿ ರೋಗದ ಬಿಸಿ ತಟ್ಟಿದೆ. ಅಲ್ಲದೆ, ಓಟಿಪಿ ಫ್ಲಾಟ್ ಫಾರ್ಮ್ ನಲ್ಲಿ ರಿಲೀಸ್ ಆದ ವೆಬ್ ಸಿರೀಸ್ ಗಳು ಕೂಡ ಪೈರಸಿ ಆಗಿವೆ. ಸೈಬರ್ ಕ್ರೈಮ್ ನಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ಅಲರ್ಟ್ ಆಗಿರೋ ಪೊಲೀಸರು, ಯುವ ಮೂವೀಸ್ ಗ್ರೂಪ್ ಪೈರಸಿ ಅಟ್ಟಹಾಸವನ್ನು ಅಂತ್ಯ ಕಾಣಿಸಲು ಬಲೆ ಬೀಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com