ವೀಕೆಂಡ್ ವಿಥ್ ರಮೇಶ್ 5: ರಮ್ಯಾ ಕಾಲೆಳೆದು, ಪ್ರಭುದೇವಗೆ ಜೈ ಎಂದ ಕನ್ನಡಿಗರು!

ಝೀ ವಾಹಿನಿಯ ಜನಪ್ರಿಯ ಶೋ ವೀಕೆಂಡ್ ವಿಥ್ ರಮೇಶ್ 5ನೇ ಸೀಸನ್ ಎರಡನೇ ಅತಿಥಿಯಾಗಿ  ಪ್ರಭುದೇವ ಭಾಗಿಯಾಗಿದ್ದ ಸಂಚಿಕೆ ಶನಿವಾರ ಮತ್ತು ಭಾನುವಾರ ಪ್ರಸಾರವಾಗಿದೆ.
ಪ್ರಭುದೇವ , ರಮ್ಯಾ
ಪ್ರಭುದೇವ , ರಮ್ಯಾ

ಬೆಂಗಳೂರು: ಝೀ ವಾಹಿನಿಯ ಜನಪ್ರಿಯ ಶೋ ವೀಕೆಂಡ್ ವಿಥ್ ರಮೇಶ್ 5ನೇ ಸೀಸನ್ ಎರಡನೇ ಅತಿಥಿಯಾಗಿ  ಪ್ರಭುದೇವ ಭಾಗಿಯಾಗಿದ್ದ ಸಂಚಿಕೆ ಶನಿವಾರ ಮತ್ತು ಭಾನುವಾರ ಪ್ರಸಾರವಾಗಿದೆ.

ಈ ಸಂಚಿಕೆ ಕನ್ನಡಿಗರ ಹೃದಯ ಗೆದಿದ್ದು, ಕಾರ್ಯಕ್ರಮ ವೀಕ್ಷಿಸಿದ ಬಹುತೇಕ ಮಂದಿ ಪ್ರಭುದೇವ ಅವರ ಚಾಮರಾಜನಗರ, ಮೈಸೂರು ಭಾಷೆ, ಸಿಂಪ್ಲಿಸಿಟಿಗೆ ಪಿಧಾ ಆಗಿದ್ದಾರೆ. ಕೆಲವೊಂದು ಬಾರಿ ಇಂಗ್ಲೀಷ್ ಬಳಸಿದ್ದರೂ ಹೆಚ್ಚಾಗಿ ಕನ್ನಡದಲ್ಲಿಯೇ ಮಾತನಾಡಿರುವುದು ಕನ್ನಡಿಗರಿಗೆ ಖುಷಿ ಮೂಡಿಸಿದೆ.  

ಹಿಂದಿನ ಸಂಚಿಕೆಯಲ್ಲಿ ಮೊದಲನೇ ಅತಿಥಿಯಾಗಿ ಆಗಮಿಸಿದ್ದ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಅವರು ವಿಪರೀತ ಇಂಗ್ಲೀಷ್ ಬಳಸಿ ಟ್ರೋಲ್ ಗೆ ಗುರಿಯಾಗಿದ್ದರು.  ಈಗ ಪ್ರಭುದೇವ ಅವರ  ಕನ್ನಡ ಭಾಷೆಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದು, ರಮ್ಯಾ ಕುರಿತು ನಾನಾ ಟೀಕೆ ಮಾಡುವ ಮೂಲಕ ಅವರ ಕಾಲೆಳೆದಿದ್ದಾರೆ.

ಮೂಲತ: ಮೈಸೂರು ಜಿಲ್ಲೆ ಟಿ. ನರಸೀಪುರ ತಾಲೂಕಿನ ದೂರ ಗ್ರಾಮದವರಾದ ಪ್ರಭುದೇವ, ಬಾಲ್ಯದ ದಿನಗಳನ್ನು ಮೆಲುಕು ಹಾಕಿದ್ದು, ಸ್ನೇಹಿತರೊಂದಿಗೆ ಕಳೆದ ಕ್ಷಣಗಳು, ಆಡಿದ ಆಟಗಳನ್ನು ಶೋನಲ್ಲಿಯೇ ಆಡಿದ್ದಾರೆ. ರಮೇಶ್ ಅರವಿಂದ್ ಅವರ ಜೊತೆಯಲ್ಲಿ ಪ್ರಭುದೇವ ಅವರು 'ಗೋಲಿ ಆಟ', 'ಗಾಲಿ ಆಡಿಸೋ ಆಟ'ವನ್ನು ಕೂಡ ಆಡಿದ್ದಾರೆ. ಪ್ರಭುದೇವ ಅವರು ಬಾಲ್ಯದ ಬಗ್ಗೆ ನೆನಪಿನ ಬುತ್ತಿ ಬಿಚ್ಚಿಡುತ್ತ, ಅವರ ಇಷ್ಟದ ಹಪ್ಪಳವನ್ನು ಕೂಡ ಸವಿದರು.

ಹಪ್ಪಳ, ಪಾಯಸ ಅಂದರೆ ಪ್ರಭುದೇವಗೆ ತುಂಬ ಇಷ್ಟವಂತೆ. ಈ ಬಗ್ಗೆ ಶೋನಲ್ಲಿ ಪ್ರಭುದೇವ ಮಾತನಾಡಿದ್ದಾರೆ.ಉದ್ದಿನ ಹಪ್ಪಳ, ಸಂಡಿಗೆ ಹಪ್ಪಳ ಅಂದ್ರೆ ನನಗೆ ತುಂಬ ಇಷ್ಟ. ಈಗಲೂ ಕೂಡ ನನಗೆ ಶೂಟಿಂಗ್‌ನಲ್ಲಿ ನನಗೆ ಅಂತಲೇ ಹಪ್ಪಳ ಎತ್ತಿಡುತ್ತಾರೆ' ಎಂದು ಹೇಳಿಕೊಂಡರು.  ಪ್ರಭುದೇವ ಅವರ ತಾಯಿ ಮಹಾದೇವಮ್ಮ ಅವರು ಕೂಡ ಆಗಮಿಸಿದ್ದರು. ಮಗನಿಗಾಗಿ ಸ್ಟುಡಿಯೋದಲ್ಲಿ ಬಿಸಿ ಬಿಸಿ ಪಾಯಸ ಮಾಡಿಕೊಂಡು ಬಂದಿದ್ದರು.ಪ್ರಭುದೇವ ಹಾಗೂ ಅವರ ತಂದೆಯವರು ಡಾ ರಾಜ್‌ಕುಮಾರ್ ಅವರ ಖ್ಯಾತ 'ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು' ಎನ್ನುವ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ. 

 'ಇಂಡಿಯನ್ ಮೈಕಲ್ ಜಾಕ್ಸನ್' ಪ್ರಭುದೇವ
'ಪದ್ಮಶ್ರೀ' ಜೊತೆಗೆ 2 ರಾಷ್ಟ್ರ ಪ್ರಶಸ್ತಿ ಪುರಸ್ಕಾರ ಪಡೆದ ಪ್ರಭುದೇವ ಅವರು ಅಪ್ಪಟ ಕನ್ನಡದ ಪ್ರತಿಭೆ. 36 ವರ್ಷಗಳಲ್ಲಿ 100ಕ್ಕೂ ಅಧಿಕ ಸಿನಿಮಾಗಳಿಗೆ ಕೊರಿಯೋಗ್ರಫಿ ಮಾಡಿರುವ ಪ್ರಭುದೇವ ಅವರು 61 ಚಿತ್ರಗಳಲ್ಲಿ ನಟಿಸಿದ್ದಾರೆ, 15 ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ, 3 ಸಿನಿಮಾಗಳ ನಿರ್ಮಾಣ ಮಾಡಿದ್ದಾರೆ. ಭಾರತದ ಸ್ಟಾರ್ ನಟರ ಜೊತೆ ಪ್ರಭುದೇವ ಕೆಲಸ ಮಾಡಿದ್ದಾರೆ.

ಶೋನಲ್ಲಿಯೇ ತಮ್ಮ 50ನೇ ಹುಟ್ಟುಹಬ್ಬ ಆಚರಿಸಿಕೊಂಡ ಪ್ರಭುದೇವ ಅವರಿಗೆ ಸೆಂಚುರಿ ಸ್ಟಾರ್ ಡಾ.ಶಿವರಾಜ್ ಕುಮಾರ್, ಪ್ರಕಾಶ್ ರಾಜ್, ಯೋಗರಾಜ್ ಭಟ್ ಮತ್ತಿತರರು ಶುಭಾಶಯ ಕೋರಿದ್ದು, ಇಂಡಿಯನ್ ಮೈಕಲ್ ಜಾಕ್ಸನ್ ಬದುಕು ಮತ್ತಷ್ಟು ಅರಳಲಿ ಎಂದು ಹಾರೈಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com