

ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 12ನಲ್ಲಿ ಮತ್ತೆ ಕಿಚ್ಚಾ ಸುದೀಪ್ ಸ್ಪರ್ಧಿಗಳಿಗೆ ಪುಲ್ ಕ್ಲಾಸ್ ತೆಗೆದುಕೊಂಡಿದ್ದು, ಪ್ರಮುಖವಾಗಿ ರಕ್ಷಿತಾ ವಿಚಾರವಾಗಿ ಕಾಕ್ರೋಚ್ ಸುಧಿ ಮತ್ತು ಅಶ್ವಿನಿಗೌಡಗೆ ಖಡಕ್ ಪಾಠ ಮಾಡಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ರಕ್ಷಿತಾ ಶೆಟ್ಟಿ ಮೇಲೆ ದಬ್ಬಾಳಿಕೆ ಮಾಡಿದ್ದರ ಪರಿಣಾಮ ಅಶ್ವಿನಿ ಗೌಡ ಮತ್ತು ಜಾಹ್ನವಿ ಅವರು ಸಾಕಷ್ಟು ಟೀಕೆಗಳಿಗೆ ಗುರಿಯಾಗಿದ್ದರು. ವೀಕೆಂಡ್ನಲ್ಲಿ ಕಿಚ್ಚ ಸುದೀಪ್ ಕೂಡ ಕ್ಲಾಸ್ ತೆಗೆದುಕೊಂಡಿದ್ದರು. ಇದೀಗ ಬಿಗ್ ಬಾಸ್ ಮನೆಯಲ್ಲಿ ಸೆಡೆ ಅನ್ನೋ ಪದ ಬಳಕೆ ವಿಚಾರವಾಗಿ ಮತ್ತೆ ಅಶ್ವಿನಿಗೌಡ ಹಾಗೂ ಕಾಕ್ರೋಚ್ ಸುಧಿಗೆ ಕಿಚ್ಚಾ ಸುದೀಪ್ ಪಾಠ ಮಾಡಿದ್ದಾರೆ.
ರಕ್ಷಿತಾಗೆ ಕಾಕ್ರೋಚ್ ಸುಧಿ 'ಸೆಡೆ' ಎಂಬ ಪದ ಬಳಕೆ ಮಾಡಿದ್ದರು. ಈ ಸಂದರ್ಭದಲ್ಲಿ ಅಶ್ವಿನಿಗೌಡ, ಜಾಹ್ನವಿ ಸೇರಿದಂತೆ ಬಿಗ್ ಹೌಸ್ ನ ಬಹುತೇಕ ಎಲ್ಲ ಸದಸ್ಯರು ಅಲ್ಲಿಯೇ ಇದ್ದರು. ಅಲ್ಲದೆ ಕಾಕ್ರೋಚ್ ಸುಧಿ ನಡೆಯನ್ನು ಮನೆಯ ಕೆಲ ಸದಸ್ಯರೂ ಪ್ರಶ್ನಿಸಿದ್ದರು. ವಿಚಾರದ ಗಂಭೀರತೆ ಅರಿತ ಸುಧಿ ಬಳಿಕ ರಕ್ಷಿತಾರನ್ನು ಕರೆದು ವ್ಯಂಗ್ಯವಾಗಿ ಕ್ಷಮೆ ಕೋರಿದ್ದರು. ಇದೀಗ ಇದೇ ವಿಚಾರವಾಗಿ ಕಿಚ್ಚಾ ಸುದೀಪ್ ಕಾಕ್ರೋಚ್ ಸುಧಿಗೆ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.
ಕಿಚ್ಚನ ಪಂಚಾಯ್ತಿ ಟ್ರೈಲರ್ ವಿಡಿಯೋ ಕಲರ್ಸ್ ಕನ್ನಡ ಸಾಮಾಜಿಕ ಖಾತೆಯಲ್ಲಿ ಬಿಡುಗಡೆಯಾಗಿದ್ದು, ಇಂದಿನ ಎಪಿಸೋಡ್ ನ ರೋಚಕತೆ ಹೆಚ್ಚಿಸಿದೆ.
'ಮಿಸ್ಟರ್ ಸುಧಿ.. 'ಸೆಡೆ' ಅಂದ್ರೇನು?'
ಶನಿವಾರ ಕಿಚ್ಚನ ಪಂಚಾಯ್ತಿಯಲ್ಲಿ ಮಾತನಾಡಿದ ಸುದೀಪ್ ರಕ್ಷಿತಾರ ವಿಚಾರ ತೆಗೆದು, ಮಿಸ್ಟರ್ ಸುಧಿ ಸರ್ ಸೆಡೆ ಅಂದ್ರೇನು ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ಸುಧಿ.. ಚೈಲ್ಡ್ ಎಂಬ ಅರ್ಥ ಬರುತ್ತದೆ ಎಂದು ಉತ್ತರಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಸುದೀಪ್, ಹಾಗಾದ್ರೆ ನೀವೂ ಕೂಡ ನನಗೆ ಚೈಲ್ಡ್ ರೀತಿಯಲ್ಲಿ ಕಾಣುತ್ತೀರಿ.. ನಿಮ್ಮನ್ನೂ ಹಾಗೆಯೇ ಕರೆಯಲೇ ಎಂದು ಕೇಳಿದ್ದಾರೆ. ಈ ವೇಳೆ ವಿಷಯದ ಗಂಭೀರ ಅರಿತ ಸುಧಿ.. ಮಾತಿನ ಭರದಲ್ಲಿ ಬಂದಿದ್ದು ಎಂದು ತೇಪೆ ಹಚ್ಚುವ ಪ್ರಯತ್ನ ಮಾಡುತ್ತಾರೆ.
ಇದಕ್ಕೂ ಖಾರವಾಗಿಯೇ ತಿರುಗೇಟು ಕೊಟ್ಟ ಸುದೀಪ್, 'ಕೋಪದಲ್ಲಿ ಬಂದಿದ್ದಲ್ಲ.. ನಿಮ್ಮ ದೃಷ್ಟಿಕೋನ ಅದು.. 10 ರೂಪಾಯಿ ಆ್ಯಕ್ಟಿಂಗ್ ಯಾರು ಮಾಡುತ್ತಿರುವುದು? ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
ಅಶ್ವಿನಿಗೌಡಗೂ ಫುಲ್ ಕ್ಲಾಸ್!
ಇನ್ನು ಕಳೆದ ವಾರವಷ್ಟೇ ಇದೇ ರಕ್ಷಿತಾ ವಿಚಾರವಾಗಿ ಕಿಚ್ಚನಿಂದ ಕ್ಲಾಸ್ ತೆಗೆದುಕೊಂಡಿದ್ದ ಅಶ್ವಿನಿಗೌಡ ಈ ವಾರವೂ ಮತ್ತದೇ ರಕ್ಷಿತಾರ ವಿಚಾರವಾಗಿ ಕಿಚ್ಚನಿಂದ ಪಾಠ ಮಾಡಿಸಿಕೊಂಡಿದ್ದಾರೆ. ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಂದ ರಘು ಇಂಗ್ಲೀಷ್ ನಲ್ಲಿ ಮಾತನಾಡಿದರು ಎಂದು ರಂಪ ಮಾಡಿದ್ದ ಅಶ್ವಿನಿಗೌಡ ಸುಧಿ ವಿಚಾರದಲ್ಲಿ ಮೌನ ವಹಿಸಿದ್ದು ಸುದೀಪ್ ರನ್ನು ಕೆರಳಿಸಿದೆ.
ಇದೇ ವಿಚಾರವಾಗಿ ಅಶ್ವಿನಿಗೌಡ ಅವರನ್ನು ತರಾಟೆಗೆ ತೆಗೆದುಕೊಂಡ ಸುದೀಪ್, 'ಅಶ್ವಿನಿ ಅವರೇ ಹೆಣ್ಣಿನ ಮೇಲೆ ಮಾತನಾಡಿದರೆ ತಪ್ಪು.. ಏಕ ವಚನದಲ್ಲಿ ಮಾತಾಡೋದು ತಪ್ಪು.. ಅದು ಇದು ತಪ್ಪು ಅಂತೀರಿ.. ಆದರೆ ಇಂತಹ ಪದಬಳಕೆ ಮಾಡುವಾಗ ಶಾಂತವಾಗೀರ್ತೀರಿ.. ಅಕಸ್ಮಾತ್ ಆ ಪದ ಬಳಕೆ ನಿಮ್ಮ ವಿರುದ್ಧವೇ ಆಗಿದ್ರೆ ನೀವ್ ಏನ್ ಮಾಡ್ತಾ ಇದ್ರಿ.. ಇನ್ನೂ ಚಿಕ್ಕವರಾಗಲೂ ಹೋಗಬೇಡಿ ಎಂದು ಸುದೀಪ್ ಪ್ರಶ್ನಿಸಿದ್ದಾರೆ.
ಆಗಿದ್ದೇನು?
ಮನೆಯಲ್ಲಿ ಸರಿಯಾದ ಕ್ಲೀನಿಂಗ್ ವ್ಯವಸ್ಥೆ ಇಲ್ಲ. ಜವಾಬ್ದಾರಿಗಳು ವಹಿಸಿಕೊಂಡ ಕೆಲಸವನ್ನು ಸರಿಯಾಗಿ ಮಾಡುತ್ತಿಲ್ಲ ಎಂದು ಚರ್ಚೆ ಆರಂಭವಾಯಿತು. ಆಗ ರಕ್ಷಿತಾ ಶೆಟ್ಟಿ ಮತ್ತು ಕಾಕ್ರೋಚ್ ಸುಧಿ ನಡುವೆ ಒಂದಷ್ಟು ವಿಚಾರಗಳಿಗೆ ಮಾತಿನ ಚಕಮಕಿ ಆರಂಭವಾಯಿತು.
ರಕ್ಷಿತಾ ಮೇಲೆ ಕೆಲ ಆರೋಪಗಳನ್ನು ಮಾಡುತ್ತಾ ಸುಧಿ ಹೊರನಡೆದರು. ''ನಾನು ಕರೆದಾಗ ಮಾತನಾಡಲಿಲ್ಲ'' ಎಂದು ಸಿಟ್ಟು ಮಾಡಿಕೊಂಡರು. ಮನೆಯವರೆಲ್ಲಾ ಸೇರಿಕೊಂಡು ರಕ್ಷಿತಾಗೆ ಸಮಾಧಾನವಾಗಿರುವಂತೆ ಹೇಳುತ್ತಲೇ ಇದ್ದರು. ಸಿಟ್ಟು ಮಾಡಿಕೊಂಡು ಹೊರಗೆ ಹೋಗಿದ್ದ ಸುಧಿಗೆ ಸಮಾಧಾನ ಮಾಡಿ, ವಾಪಸ್ ಕರೆದುಕೊಂಡು ಬರಲಾಯಿತು.
ಪುನಃ ಮನೆಯೊಳಗೆ ಆಗಮಿಸಿದ ಸುಧಿ, '' ಅವಳ್ಯಾರೋ ನಿನ್ನೆ ಮೊನ್ನೆ ಬಂದಿರೋ ಸೆಡೆ ಮಾತಾಡ್ತಾನೇ ಇದ್ದಾಳೆ.. ಐದು ಸಲ ಕರೆದರೆ ತಿರಗೋದಿಲ್ಲ ಅವಳು.. ಒಬ್ಬಳೇ ಕಿಲಾಡಿ ಥರ ಮಾತಾಡ್ತಾಳೆ. ಮರ್ಯಾದೆ ಕೊಟ್ಟರೆ ಮರ್ಯಾದೆ..'' ಎಂದು ಕೂಗಿಕೊಂಡು ಬಂದರು. ಈ ಮಾತಿನ ಬಗ್ಗೆ ರಕ್ಷಿತಾ ಅಷ್ಟೇನೂ ಆಕ್ಷೇಪ ವ್ಯಕ್ತಪಡಿಸಿಲಿಲ್ಲ. ಆದರೆ, ಜಾಹ್ನವಿ ಸೇರಿದಂತೆ ಒಂದಷ್ಟು ಮಂದಿ ಹಾಗೆಲ್ಲಾ ಮಾತನಾಡಬೇಡಿ ಎಂದು ಸುಧಿಗೆ ಹೇಳಿದರು. ''ನಾನು ಹತ್ತು ಸಲ ಕರೆದರೂ ತಿರುಗಲಿಲ್ಲ. ನಾನ್ಯಾಕೆ ಅವಳ ಮಾತನ್ನು ಕೇಳಬೇಕು'' ಎಂದು ಸುಧಿ ವಾದಿಸಿದರು.
ರಕ್ಷಿತಾಗೆ ಕ್ಷಮೆ ಕೋರಿದ್ದ ಸುಧಿ
ನಂತರ ಸುಧಿಗೆ ''ನಿನ್ನೆ ಮೊನ್ನೆ ಬಂದಿರೋ ಸೆಡೆ'' ಅಂತ ನೀನು ಹೇಳಬಾರದಿತ್ತು ಎಂದು ಗಿಲ್ಲಿ ನಟ ಹೇಳಿದರು. ಕೆಲವರು ಇದಕ್ಕೆ ಧ್ವನಿಗೂಡಿಸಿದರು. ಅತ್ತ ಅಶ್ವಿನಿ ಗೌಡ , ''ಆ ಲೈನ್ನ ಮತ್ತೆ ತೆಗಿಬೇಡ, ಅದನ್ನು ಹೈಲೈಟ್ ಮಾಡಬೇಡ'' ಎಂದು ಗಿಲ್ಲಿಗೆ ಸೂಚನೆ ಕೊಟ್ಟರು.
''ಜಾಹ್ನವಿ ಅವರು ಮೂದೇವಿ ಅಂದರೆ ಹೇಗೆ ಕಾಮನ್ನೋ, ಅದೇ ಥರ ನಮ್ ಏರಿಯಾದಲ್ಲಿ ಸೆಡೆ ಅನ್ನೋ ಪದ ತುಂಬಾ ಕಾಮನ್ ವರ್ಡ್. ದೇವ್ರಾಣೆಗೂ ಸೆಡೆ ಅಂದ್ರೆ ನಮ್ ಕಡೆ ತುಂಬಾ ಚಿಕ್ಕೋಳು ನೀನು ಅಂತ. ನಿನ್ನ ವಯಸ್ಸಿಗೆ ಅವಳು ಸಮ. ಆದರೆ ನಮ್ಮ ವಯಸ್ಸಿಗೆ ಅವಳು 20 ವರ್ಷ ಚಿಕ್ಕವಳು'' ಎಂದು ಸುಧಿ, ಗಿಲ್ಲಿ ಬಳಿ ಬಂದು ಹೇಳಿದರು. 'ಆ ಮಾತನ್ನು ಸುಧಿ ಹೇಗೆ ಯೂಸ್ ಮಾಡ್ತಾರೆ..' ಎಂದು ಧ್ರುವಂತ್ ಮಾತ್ರ ಗರಂ ಆಗಿಯೇ ಇದ್ದರು. ಅದನ್ನು ಜಾಹ್ನವಿ ಬಳಿಯೂ ಹೇಳಿದರು. ಅದಕ್ಕೆ ಜಾಹ್ನವಿ, ''ಮಾತಿನಭರದಲ್ಲಿ ಬಂತು ತಪ್ಪಾಯ್ತು ಅಂದ್ರು, ಎಲ್ಲರಿಗೂ ಸಾರಿ ಕೇಳ್ತಿದ್ದಾರೆ'' ಎಂದು ಹೇಳಿದರು.
Advertisement