
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ (Actor Darshan) ಜೊತೆ ತಾವು ಸಿನಿಮಾ ಮಾಡುವುದಾಗಿ ಖ್ಯಾತ ನಿರ್ದೇಶಕ ಜೋಗಿ ಪ್ರೇಮ್ ಘೋಷಣೆ ಮಾಡಿದ್ದಾರೆ.
ಧ್ರುವ ಸರ್ಜಾ ಅಭಿನಯದ ಕೆಡಿ ಚಿತ್ರ ಬಿಡುಗಡೆಗೆ ಸಿದ್ಧವಾಗಿರುವಂತೆಯೇ ತಮ್ಮ ಮುಂದಿನ ಪ್ರಾಜೆಕ್ಟ್ ಕುರಿತು ಮಾಹಿತಿ ನೀಡಿರುವ ನಿರ್ದೇಶಕ ಪ್ರೇಮ್, ನಟ ದರ್ಶನ್ ಜೊತೆ ಸಿನಿಮಾ ಮಾಡುವುದಾಗಿ ಮತ್ತೆ ಸ್ಪಷ್ಟಪಡಿಸಿದ್ದಾರೆ.
ಈ ಹಿಂದೆ ಗೆಳೆಯ ದರ್ಶನ್ ಗಾಗಿ ನಟಿ ರಕ್ಷಿತಾ ಅವರ ಪತಿ ಪ್ರೇಮ್ ಸಿನಿಮಾ ಮಾಡುತ್ತಾರೆ ಎನ್ನುವ ಸುದ್ದಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಆದರೆ ಬಳಿಕ ರೇಣುಕಾಸ್ವಾಮಿ ಕೊಲೆ ಮತ್ತು ಆನಂತರದ ಅನಿರೀಕ್ಷಿತ ಬೆಳವಣಿಗಗಳಿಂದ ಈ ಬಗ್ಗೆ ಮೌನ ಆವರಿಸಿತು.
ಇದೇ ವಿಚಾರವಾಗಿ ಸುದ್ದಿಗೋಷ್ಠಿಯಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನಿಗೆ ಉತ್ತರಿಸಿದ ಪ್ರೇಮ್, ಖಂಡಿತಾ ದರ್ಶನ್ ಜೊತೆ ಸಿನಿಮಾ ಮಾಡುವುದಾಗಿ ಹೇಳಿದ್ದಾರೆ.
ದರ್ಶನ್ ಅವರನ್ನ ಈ ಹಿಂದೆ ಎರಡು ಬಾರಿ ಭೇಟಿಯಾಗಿದ್ದೆ. ದರ್ಶನ್ ಹೊರಗೆ ಬಂದ ತಕ್ಷಣ ನಾನೇ ಮೂವಿ ಮಾಡುತ್ತೇನೆ. ಅವರವರ ನೋವು ಅವರಿಗೆ ಇರುತ್ತೆ. ಉತ್ಪ್ರೇಕ್ಷೆಯಿಂದ ನಾನು ಏನನ್ನೂ ಮಾತನಾಡಬಾರದು. ಟಿವಿಯಲ್ಲಿ ದರ್ಶನ್ ಬಂದಾಗ ಹೆಚ್ಚು ನೋಡುತ್ತಾರೆ. ದರ್ಶನ್ ಅವರ ಬಗ್ಗೆ ಹೇಳಬೇಕೆಂದರೆ ಅವರ ನೋವು ಅವರಿಗೆ ಇರುತ್ತೆ. ಕೆಲವು ಸ್ಯಾಡಿಸ್ಟ್ ಗಳು ಇರುತ್ತಾರೆ. ದರ್ಶನ್ ಅವರು ಎಷ್ಟು ನೋವು ಪಟ್ಟಿರ್ತಾರೆ ಅಂತ ಅವರಿಗೆ ಗೊತ್ತು. ಆದರೆ ಅವರನ್ನ ನೋಡಿ ಬೈಯುತ್ತಾರೆ ಎಂದು ಪ್ರೇಮ್ ಮಾರ್ಮಿಕವಾಗಿ ಹೇಳಿದ್ದಾರೆ.
ಇದೇ ವೇಳೆ ಟ್ರೋಲ್ ಬಗ್ಗೆ ಮಾತನಾಡಿದ ಪ್ರೇಮ್, 'ಟ್ರೋಲ್ ಅನ್ನೋದು ಕಿಂಡಲ್ ಮಾಡೋದು ಅವರ ಹೊಟ್ಟೆ ತುಂಬಿಸಿಕೊಳ್ಳಲು ಮಾಡೋದು. ಅವರಿಗೆ ನಾಲ್ಕು ಕಾಸು ಬರುತ್ತೆ ಅನ್ನೊದಾದ್ರೆ ನಾವು ಯಾಕೆ ವಿರೋಧ ಮಾಡೋದು? ಆದರೆ ಕೆಟ್ಟದಾಗಿ ಟ್ರೋಲ್ ಮಾಡಬೇಡಿ. ಅದರಲ್ಲೂ ಹೆಣ್ಣು ಮಕ್ಕಳಿಗೆ ಕೆಟ್ಟದಾಗಿ ಟ್ರೋಲ್ ಮಾಡಬಾರದು. ಗಂಡು ಮಕ್ಕಳ ಬಗ್ಗೆ ಮಾತಾಡ್ಲಿ ಅವ್ರು ಹೇಗೋ ಹೋಗ್ಬಿಡ್ತಾರೆ. ಆದರೆ ಹೆಣ್ಣು ಮಕ್ಕಳ ಬಗ್ಗೆ ಮಾತ್ರ ಯಾರು ಕೆಟ್ಟದಾಗಿ ಟ್ರೋಲ್ ಮಾಡಬಾರದು ಎಂದು ಪ್ರೇಮ್ ಹೇಳಿದರು.
ದೇಸಿ ತುಪ್ಪ ಮತ್ತು ಟ್ರಸ್ಟ್
ಅಂತೆಯೇ ಪ್ರೇಮ್ ದೇಸಿ ತುಪ್ಪದ ಬುಸಿನೆಸ್ ಕುರಿತೂ ಮಾತನಾಡಿದ್ದು, 'ನಮ್ಮ ಅಮ್ಮನ ತೋಟದ ತುಪ್ಪದ ಬ್ಯುಸಿನೆಸ್ ನಡೆಯುತ್ತಿದೆ. ಕೆಮಿಕಲ್ ಇಲ್ಲದೆ ತುಪ್ಪವನ್ನು ತಯಾರು ಮಾಡಲಾಗುತ್ತಿದೆ. ಎಲ್ಲರಿಗೂ ಒಳ್ಳೆಯದಾಗಲಿ ಎಂದು ಹೇಳುತ್ತೇನೆ. ನಾಟಿ ತುಪ್ಪವನ್ನ ನಮ್ಮ ಅಮ್ಮನಿಗೆ ತಿನ್ನಿಸಿ ಎಂದು ಹೇಳಿದ್ದರು. ಆಗ ಎಲ್ಲೂ ಕೂಡಾ ನಮಗೆ ಸಿಗಲಿಲ್ಲ. ಈಗ ನಾವೇ ತಯಾರಿಸುತ್ತಿದ್ದೇವೆ. ಈ ಸಂಬಂಧ ಟ್ರಸ್ಟ್ ಕೂಡ ಮಾಡುತ್ತಿದ್ದೇನೆ. ನಾನು ಹಾಡಿದ ದುಡ್ಡನ್ನ ಬೇರೆಯವರಿಗೆ ನೀಡಲಾಗುತ್ತದೆ ಎಂದು ಪ್ರೇಮ್ ಹೇಳಿದರು.
Advertisement