

ಚೆನ್ನೈ: ಇತ್ತೀಚೆಗಷ್ಟೇ ರಾಜಕೀಯಕ್ಕೆ ಕಾಲಿಟ್ಟ ಖ್ಯಾತ ತಮಿಳುನಟ ವಿಜಯ್ ಗೆ ಶಾಕ್ ಮೇಲೆ ಶಾಕ್ ಎದುರಾಗುತ್ತಿದ್ದು, ಅವರ ಕೊನೆಯ ಚಿತ್ರ ಎಂದೇ ಹೇಳಲಾಗುತ್ತಿದ್ದ 'ಜನನಾಯಗನ್' ಲೀಕ್ ಆದ ಬೆನ್ನಲ್ಲೇ ಇದೀಗ ನೇರವಾಗಿ ಟಿವಿಯಲ್ಲೇ ಪ್ರದರ್ಶನ ಮಾಡಲಾಗಿದೆ.
ಹೌದು.. ತಮಿಳುನಾಡಿನಲ್ಲಿ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದ ಜನನಾಯಗನ್ ಚಿತ್ರದ ಆನ್ಲೈನ್ ಲೀಕ್ ಪ್ರಕರಣ ಟಾಲಿವುಡ್ ನಲ್ಲಿ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವಂತೆಯೇ ಇತ್ತ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ದುಷ್ಕರ್ಮಿಗಳು ಚಿತ್ರವನ್ನು ನೇರವಾಗಿ ಟಿವಿಯಲ್ಲೇ ಪ್ರಸಾರ ಮಾಡಿದ್ದಾರೆ.
ಹೌದು.. ತಮಿಳುನಾಡಿನ ಸ್ಥಳೀಯ ಟಿವಿ ಚಾನೆಲ್ನಲ್ಲಿ ಜನ ನಾಯಗನ್ ಚಿತ್ರವನ್ನು ಪ್ರಸಾರ ಮಾಡಲಾಗಿದ್ದು, ಚಿತ್ರತಂಡಕ್ಕೆ ಭಾರಿ ಹಿನ್ನಡೆಯಾಗಿದೆ.
ಏಪ್ರಿಲ್ 11 ರಂದು ಕೊಯಮತ್ತೂರಿನಲ್ಲಿ ಸ್ಥಳೀಯ ಕೇಬಲ್ ಟಿವಿ ಚಾನೆಲ್ ಸೋರಿಕೆಯಾದ ಚಿತ್ರವನ್ನು ಅಕ್ರಮವಾಗಿ ಪ್ರಸಾರ ಮಾಡಿದ್ದು, ಇದು ಚಿತ್ರತಂಡಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಚಿತ್ರಕ್ಕೆ ಸಾಲು ಸಾಲು ಬಿಕ್ಕಟ್ಟು
ದಳಪತಿ ವಿಜಯ್ ಅವರ ಬಹುನಿರೀಕ್ಷಿತ ಜನ ನಾಯಗನ್ ಬಿಡುಗಡೆಯಾಗುವ ಮೊದಲೇ ಒಂದರ ನಂತರ ಒಂದರಂತೆ ಬಿಕ್ಕಟ್ಟು ಎದುರಿಸುತ್ತಿದೆ. ಮೊದಲನೆಯದಾಗಿ, ಬಿಡುಗಡೆಯಾಗದ ಚಿತ್ರದ ಪೂರ್ಣ HD ಮುದ್ರಣ ಏಪ್ರಿಲ್ 9 ರಂದು ಆನ್ಲೈನ್ನಲ್ಲಿ ಸೋರಿಕೆಯಾಗಿತ್ತು. ಇದೀಗ ಕೊಯಮತ್ತೂರಿನ ಸ್ಥಳೀಯ ಕೇಬಲ್ ಟಿವಿ ಚಾನೆಲ್ ನಲ್ಲಿ ಇಡೀ ಚಿತ್ರವನ್ನೇ ಪ್ರಸಾರ ಮಾಡಲಾಗಿದೆ. ಈ ಘಟನೆ ತಮಿಳು ಚಲನಚಿತ್ರೋದ್ಯಮ ಮತ್ತು ವಿಜಯ್ ಅವರ ಅಪಾರ ಅಭಿಮಾನಿಗಳಲ್ಲಿ ಆಘಾತವನ್ನುಂಟು ಮಾಡಿದೆ.
ಈ ಚಿತ್ರವನ್ನು ಏಪ್ರಿಲ್ 11 ರಂದು ಕೊಯಮತ್ತೂರು ಜಿಲ್ಲೆಯ ಸೋಮನೂರು ಮತ್ತು ಕರುಮತಂಪಟ್ಟಿ ಸೇರಿದಂತೆ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುವ ಖಾಸಗಿ ಸ್ಥಳೀಯ ದೂರದರ್ಶನ ಚಾನೆಲ್ ರಾಶಿ ಪ್ರೈಮ್ ಮೂವಿಯಲ್ಲಿ ಅಕ್ರಮವಾಗಿ ಪ್ರಸಾರ ಮಾಡಲಾಗಿತ್ತು.
ನಂತರ ಟಿವಿಕೆ ಬೆಂಬಲಿಗರು ರಾತ್ರಿ 11 ಗಂಟೆ ಸುಮಾರಿಗೆ ಪೊಲೀಸರನ್ನು ಸಂಪರ್ಕಿಸಿ ಅಂತಿಮವಾಗಿ ದೂರು ದಾಖಲಿಸಿದ್ದರು. ಈ ದೂರನ್ನು ತಮಿಳಗ ವೆಟ್ರಿ ಕಳಗಂನ ಕೊಯಮತ್ತೂರು ಪೂರ್ವ ಘಟಕದ ಉಪ ಕಾರ್ಯದರ್ಶಿ ಮೋಹನಪ್ರಿಯ ಅವರು ದಾಖಲಿಸಿದ್ದರು ಎನ್ನಲಾಗಿದೆ.
ಪೊಲೀಸರ ದಿಢೀರ್ ಕಾರ್ಯಾಚರಣೆ, ಕೇಬಲ್ ಟಿವಿ ಮಾಲೀಕನ ಬಂಧನ
ಇನ್ನು ಈ ಎಲ್ಲ ಬೆಳವಣಿಗೆಗಳ ನಡುವೆಯೇ ಕೊಯಮತ್ತೂರು ಪೊಲೀಸರು ತ್ವರಿತ ಕಾರ್ಯಾಚರಣೆ ನಡೆಸಿ ಹಲವರನ್ನು ಬಂಧಿಸಿದ್ದಾರೆ. ಈ ಪೈಕಿ ಕೇಬಲ್ ಟಿವಿ ಚಾನಲ್ ಮಾಲೀಕ ಕೂಡ ಸೇರಿದ್ದಾರೆ. ಜನ ನಾಯಗನ್ ಚಿತ್ರ ಪ್ರಸಾರದ ಕುರಿತು ದಾಖಲಾದ ದೂರಿನ ಆಧಾರದ ಮೇಲೆ ತಮಿಳುನಾಡು ಪೊಲೀಸರು ಕೇಬಲ್ ಟಿವಿ ಚಾನಲ್ ಮಾಲೀಕ ಎಸ್ ಪಳನಿಸಾಮಿ ಎಂಬಾತನನ್ನು ಬಂಧಿಸಿದ್ದಾರೆ. ಬಂಧಿತನಿಂದ ಹಲವು ಉಪಕರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಪೊಲೀಸರ ಸ್ಪಷ್ಟನೆ
ದೂರಿನ ನಂತರ, ಕೊಯಮತ್ತೂರು ಪೊಲೀಸ್ ವರಿಷ್ಠಾಧಿಕಾರಿ ಕೆ ಕಾರ್ತಿಕೇಯನ್ ಪ್ರಕರಣದ ತನಿಖೆಗಾಗಿ ಎರಡು ವಿಶೇಷ ತಂಡಗಳನ್ನು ರಚಿಸಿದ್ದರು. ಇನ್ನೂ ಪ್ರಮಾಣೀಕರಣ ಪಡೆಯದ ಚಿತ್ರವನ್ನು ಅಕ್ರಮವಾಗಿ ಸಂಗ್ರಹಿಸಿ ವೀಕ್ಷಕರಿಗೆ ಪ್ರಸಾರ ಮಾಡಲಾಗಿದೆ ಎಂದು ತನಿಖೆಯು ದೃಢಪಡಿಸಿದೆ.
ಅಕ್ರಮ ಪ್ರಸಾರದಲ್ಲಿ ಬಳಸಲಾಗಿದೆ ಎನ್ನಲಾದ ಕಂಪ್ಯೂಟರ್, ಐದು ಹಾರ್ಡ್ ಡಿಸ್ಕ್ಗಳು ಮತ್ತು ಇತರ ಎಲೆಕ್ಟ್ರಾನಿಕ್ ಸಾಧನಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಕೇಬಲ್ ಚಾನೆಲ್ನ ಕಚೇರಿಯನ್ನು ಮೊಹರು ಮಾಡಲಾಗಿದೆ. ಆರೋಪಿ 44 ವರ್ಷದ ಎಸ್ ಪಳನಿಸಾಮಿ ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು ಮತ್ತು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎನ್ನಲಾಗಿದೆ.
6 ಮಂದಿಯ ಬಂಧನ
ಇನ್ನು ಸಿನಿಮಾ ಲೀಕ್ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡು ಸೈಬರ್ ಅಪರಾಧ ವಿಭಾಗವು ಆರು ಜನರನ್ನು ಬಂಧಿಸಿದೆ. ಪೈರಸಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆಂದು ಆರೋಪಿಸಿ 21 ವ್ಯಕ್ತಿಗಳನ್ನು ಹೆಸರಿಸಿ ನಿರ್ಮಾಣ ಸಂಸ್ಥೆ ಔಪಚಾರಿಕ ದೂರು ದಾಖಲಿಸಿದ್ದು, ಸೋರಿಕೆಯು 'ಭಾರಿ ಆರ್ಥಿಕ ನಷ್ಟ'ವನ್ನುಂಟುಮಾಡಿದೆ ಮತ್ತು ಚಿತ್ರದ ವಾಣಿಜ್ಯ ನಿರೀಕ್ಷೆಗಳ ಮೇಲೆ ತೀವ್ರ ಪರಿಣಾಮ ಬೀರಬಹುದು ಎಂದು ಹೇಳಿದೆ.
ಬಿಗ್ ಬಜೆಟ್ ಸಿನಿಮಾ
ಅಂದಹಾಗೆ ನಟ ವಿಜಯ್ ಅವರ ಕೊನೆಯ ಚಿತ್ರ ಎಂದೇ ಹೇಳಲಾಗುತ್ತಿರುವ ಜನನಾಯಗನ್, ಬಿಗ್ ಬಜೆಟ್ ಚಿತ್ರವಾಗಿದೆ. ಸುಮಾರು 500 ಕೋಟಿ ರೂಪಾಯಿಗಳಲ್ಲಿ ನಿರ್ಮಾಣವಾಗಿದೆ. ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ಸ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದು, ಸೆನ್ಸಾರ್ ಗೊಂದಲದಿಂದಾಗಿ ಸಿನಿಮಾ ಇನ್ನೂ ಬಿಡುಗಡೆಯಾಗಿರಲಿಲ್ಲ. ಅದಾಗಲೇ ಚಿತ್ರ ಆನ್ಲೈನ್ ನಲ್ಲಿ ಲೀಕ್ ಆಗಿ ಭಾರಿ ಸುದ್ದಿಗೆ ಗ್ರಾಸವಾಗಿತ್ತು.
Advertisement