ಮತ್ತೊಂದು ಪ್ಯಾನ್-ಇಂಡಿಯಾ ಸಿನಿಮಾಗೆ ನಟ ಶಿವರಾಜ್ಕುಮಾರ್ ಗ್ರೀನ್ ಸಿಗ್ನಲ್ ನೀಡಿದ್ದು, ಭಗವಾನ್ ವಿಷ್ಣುವಿನ ಎರಡನೇ ಅವತಾರವಾದ 'ಕೂರ್ಮಾವತಾರ'ದ ಕಥೆಯನ್ನು ಆಧರಿಸಿದ 'ಕೂರ್ಮಾವತಾರ್' ಎಂಬ ತೆಲುಗು ಚಿತ್ರತಂಡವನ್ನು ನಟ ಸೇರಿಕೊಂಡಿದ್ದಾರೆ. ನಟನ ಸೇರ್ಪಡೆಯೊಂದಿಗೆ ಚಿತ್ರದ ಶೀರ್ಷಿಕೆಯನ್ನೂ ಘೋಷಿಸಿರುವ ಚಿತ್ರತಂಡ, ಅವರ ಉಪಸ್ಥಿತಿಯು ಚಿತ್ರದ ಕಥಾ ಜಗತ್ತಿಗೆ ಹೆಚ್ಚಿನ ಬಲವನ್ನು ನೀಡಲಿದೆ ಎಂದು ಬಣ್ಣಿಸಿದೆ.
ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಕೂರ್ಮಾವತಾರದ ಹಿನ್ನೆಲೆಯನ್ನು ಒಳಗೊಂಡ ಕಥೆಯನ್ನು ಪ್ರಧಾನವಾಗಿಟ್ಟುಕೊಂಡು ನಿರ್ಮಾಣವಾಗುತ್ತಿರುವ ಮೊದಲ ಸಿನಿಮಾ ಇದಾಗಿದ್ದು, ಈಗಾಗಲೇ ಬಿಡುಗಡೆಯಾಗಿರುವ ಟೀಸರ್ ಭಾರಿ ಕುತೂಹಲ ಮೂಡಿಸಿದೆ.
ಈ ಘೋಷಣೆಯು 'A Legend Rises. A Forgotten Mystery Awakens' ಎಂಬ ಟ್ಯಾಗ್ಲೈನ್ ಅನ್ನು ಸಹ ಒಳಗೊಂಡಿದೆ. ಚಿತ್ರದಲ್ಲಿ ವರಲಕ್ಷ್ಮಿ ಶರತ್ಕುಮಾರ್, ರಾಜ್ ತರುಣ್, ಅತಿರ ರಾಜ್, ಸಾಯಿ ಕುಮಾರ್, ಶಿವಾಜಿ, ಗೆಟಪ್ ಶ್ರೀನು ಮತ್ತು ಮಹೇಶ್ ವಿಟ್ಟಾ ಮುಂತಾದವರು ನಟಿಸಿದ್ದಾರೆ.
ಹರ್ಷವರ್ಧನ್ ಕಡಿಯಾಲ ಬರೆದು ನಿರ್ದೇಶಿಸಿರುವ ಕೂರ್ಮಾವತಾರ್ ಚಿತ್ರಕ್ಕೆ ಜಗದೀಶ್ ಚೀಕಾಟಿ ಛಾಯಾಗ್ರಹಣ ಮತ್ತು ಬಿ ಅಜನೀಶ್ ಲೋಕನಾಥ್ ಸಂಗೀತ ಸಂಯೋಜಕರಾಗಿದ್ದಾರೆ. ಈ ಚಿತ್ರವು ಪ್ಯಾನ್-ಇಂಡಿಯಾ ಪ್ರಾಜೆಕ್ಟ್ ಆಗಿ ತಯಾರಾಗುತ್ತಿದೆ ಮತ್ತು ಪಂಚವಕ್ತ್ರ ಪಿಕ್ಚರ್ಸ್ ಮತ್ತು ರುಕ್ವಿನಾ ಸ್ಟುಡಿಯೋಸ್ ಅಡಿಯಲ್ಲಿ ಕೆ ಪೂಜಿತಾ ಪಂಚವಕ್ತ್ರ ನಿರ್ಮಿಸಿದ್ದಾರೆ.
'ಕೂರ್ಮಾವತಾರ್' ಚಿತ್ರವು ಒಂದು ಹೊಸ ಪೌರಾಣಿಕ ಲೋಕದ ಆರಂಭವೆಂದು ಚಿತ್ರತಂಡ ಬಿಂಬಿಸುತ್ತಿದ್ದರೂ, ಶಿವರಾಜ್ಕುಮಾರ್ ಅವರ ಪಾತ್ರದ ಕುರಿತಾದ ವಿವರಗಳನ್ನು ಇನ್ನೂ ಬಹಿರಂಗಪಡಿಸಿಲ್ಲ. ಹೀಗಾಗಿ ಚಿತ್ರದಲ್ಲಿ ಶಿವರಾಜ್ಕುಮಾರ್ ಅವರ ಲುಕ್ ಹೇಗಿರಲಿದೆ ಎಂಬುದನ್ನು ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.